ಸಿದ್ದರಾಮಯ್ಯ ಸರಕಾರ 'ಫೇಲ್' ಎಂದರು ನಮ್ಮ ಓದುಗರು
ಬೆಂಗಳೂರು, ಮೇ 19 : ರಾಜ್ಯದ ಜನರಿಗೆ ಹಲವಾರು ಭಾಗ್ಯದ ಕೊಡುಗೆಗಳನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಎರಡು ವರ್ಷಗಳನ್ನು ಪೂರ್ಣಗೊಳಿಸಿದೆ. 'ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದೆ. ಎರಡು ವರ್ಷದ ಆಡಳಿತ ತೃಪ್ತಿ ತಂದಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಒನ್ ಇಂಡಿಯಾ ಕನ್ನಡ 'ಸಿದ್ದರಾಮಯ್ಯ ಸರಕಾರಕ್ಕೆ 2 ವರ್ಷ ತುಂಬಿದೆ ಮಾರ್ಕ್ಸ್ ಹಾಕಿ' ಎಂಬ ಪ್ರಶ್ನೆಯೊಂದಿಗೆ ಸಾರ್ವಜನಿಕ ಮತಗಟ್ಟೆ ಮೂಲಕ ಅಭಿಪ್ರಾಯ ಸಂಗ್ರಹಣೆ ಮಾಡಿದೆ. ಇದುವರೆಗೂ 6,575 ಜನರು ಮತ ಹಾಕಿದ್ದು, ಸರ್ಕಾರ ಫೇಲ್ ಎಂದು ಹೆಚ್ಚು ಜನರು ಮತ ಹಾಕಿದ್ದಾರೆ. [ಉಳಿದಿರುವುದು 3 ವರ್ಷ, ಮುಂದಿರುವುದು 10 ಸವಾಲು]
ಸಿದ್ದರಾಮಯ್ಯ ಸರ್ಕಾರ ಫಸ್ಟ್ ಕ್ಲಾಸ್ ಎಂದು 938 ಜನರು ಮತ ಹಾಕಿದ್ದರೆ, ಸೆಕೆಂಡ್ ಕ್ಲಾಸ್ ಎಂದು 508 ಜನರು ಮತ ಹಾಕಿದ್ದಾರೆ. 1,435 ಜನರು ಜಸ್ಟ್ ಪಾಸ್ ಎಂದು ಮತ ಹಾಕಿದ್ದಾರೆ. 3,694 ಜನರು ಫೇಲ್ ಎಂದು ಮತ ಹಾಕಿದ್ದಾರೆ.[ಸಿದ್ದರಾಮಯ್ಯ ಸರಕಾರದ 10 ಜನಪ್ರಿಯ ಯೋಜನೆಗಳು]
ಓದುಗರು ಮತದಾನ ಮಾಡುವ ಜೊತೆಗೆ ಒನ್ ಇಂಡಿಯಾದ ಫೇಸ್ಬುಕ್ ಪುಟ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸರ್ಕಾರ ಏಕೆ ಫೇಲ್ ಎಂದು ಕಾರಣ ಕೊಟ್ಟಿದ್ದಾರೆ. ಮತದಾನ ಮಾಡಿದ ಎಲ್ಲಾ ಓದುಗರಿಗೂ ಒನ್ ಇಂಡಿಯಾ ಕನ್ನಡ ಧನ್ಯವಾದ ಅರ್ಪಿಸುತ್ತದೆ. ಕೆಲವು ಓದುಗರ ಅಭಿಪ್ರಾಯವನ್ನು ಕೆಳಗೆ ನೀಡಲಾಗಿದೆ. [ಸರ್ಕಾರಕ್ಕೆ ಅಂಕ ಕೊಡಲು ಇಲ್ಲಿ ಕ್ಲಿಕ್ ಮಾಡಿ]
ಓದುಗರು ನೀಡಿರುವ ಫಲಿತಾಂಶ ಇಲ್ಲಿದೆ
ಫಸ್ಟ್
ಕ್ಲಾಸ್
-
ಶೇ
14.27
ಸೆಕೆಂಡ್
ಕ್ಲಾಸ್
-
7.73
ಜಸ್ಟ್
ಪಾಸ್
-
21.83
ಫೇಲ್
-
56.18
ಭಾಗ್ಯಗಳ ಪರಿಣಾಮ ಮುಂದೆ ತಿಳಿಯಲಿದೆ
Shrideep ಎನ್ನುವ ಓದುಗರು ಸರ್ಕಾರ ಏಕೆ ಫೇಲ್ ಎಂಬುದಕ್ಕೆ ಕಾರಣ ಕೊಟ್ಟಿದ್ದಾರೆ. 'ಮಾತೆತ್ತಿದರೆ ಅಲ್ಪಸಂಖ್ಯಾತ, ಹಿಂದುಳಿದ, ದಲಿತ.. ಇನ್ನೂ ಸ್ವಲ್ಪ ಹೆಚ್ಚು ಅಂದರೆ ಹಳ್ಳಿ, ರೈತ. ಇದು ಬಿಟ್ಟರೆ ಬೇರೆ ಮಾತಿಲ್ಲ. ಅಹಿಂದ ವರ್ಗ ಬಿಟ್ಟರೆ ಉಳಿದವರು ಮನುಷ್ಯರೇ ಅಲ್ಲ ಈ ಸರಕಾರಕ್ಕೆ. ಪುಕ್ಕಟೆಯಾಗಿ ಯಾವುದನ್ನೂ ಕೊಟ್ಟರೆ ಸಮಾಜಕ್ಕೆ ಒಳ್ಳೆಯದಲ್ಲ. ಅನೇಕ 'ಭಾಗ್ಯ'ಗಳಿಂದ ಆಗುವ ಪರಿಣಾಮ ಈಗ ಗೊತ್ತಾಗುವುದಿಲ್ಲ, ಕೆಲ ವರ್ಷಗಳಲ್ಲಿ ಗೊತ್ತಾಗುತ್ತದೆ. 'ಭಾಗ್ಯ'ಗಳನ್ನು ಟೀಕಿಸುವವರು ಹೊಟ್ಟೆ ತುಂಬಿರುವವರು ಎಂದು ಹೇಳುವುದು ಸುಲಭ. ಆದರೆ ತಾವೆಂತಹ ಕೆಟ್ಟ ಸಂಸ್ಕೃತಿಗೆ ಪೀಠಿಕೆ ಹಾಕುತ್ತಿದ್ದೇವೆ ಎಂಬುದರ ಅರಿವಿಲ್ಲ. ಇದು ತುಂಬಾ ನೋವಿನ ಸಂಗತಿ.
ಬಡವರಿಗೆ ತುಂಬಾ ಸಹಾಯವಾಗಿದೆ
ಮಮತಾ ಎನ್ನುವ ಓದುಗರು 'ಸೂಪರ್ ಸಿದ್ದರಾಮಯ್ಯ ಸರ್ಕಾರ ಬಡವರಿಗೆ ತುಂಬಾ ಸಹಾಯ ಆಗಿದೆ. ಸೂಪರ್ ಸಿದ್ದರಾಮಯ್ಯ ಸರ್ಕಾರ. ಐ ಲೈಕ್ ಯು' ಎಂದು ಕಮೆಂಟ್ ಮಾಡಿದ್ದಾರೆ.
ಜಾತಿಗಣತಿ ಮಾಡಬಾರದಿತ್ತು
ತಿಮ್ಮಪ್ಪ ಎಂಬ ಓದುಗರು ಸರ್ಕಾರ ಜಾತಿ ಗಣತಿ ಮಾಡಿದ್ದರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಸರ್ಕಾರ ಜಾತಿಗಣತಿ ಮಾಡಿದೆ, ನಾವೆಲ್ಲರೂ ಒಂದೇ ಜಾತಿ, ಜಾತಿ ಗಣತಿ ಮಾಡಿಸುವ ಸಿಎಂ ನಮಗೆ ಬೇಡ ಎಂದು ಕಮೆಂಟ್ ಮಾಡಿದ್ದಾರೆ.
ಎರಡು ವರ್ಷದ ಸಾಧನೆ ಏನೂ ಇಲ್ಲ
'ಎರಡು ವರ್ಷದ ಸಾಧನೆ ಏನೇನು ಇಲ್ಲ. ಮಾರ್ಕ್ಸ್ 35 ಕೂಡ ಸಿಕ್ಕಿಲ್ಲ. ಪಾಸು ಮಾಡ್ಲಿಕ್ಕೆ ಖಂಡಿತ ಆಗಲ್ಲ. ಎನಾದರೂ ದುಡ್ಡು ಕೊಟ್ರೆ ಪಾಸು ಮಾಡಬಹುದು' ಎಂದು ನಟರಾಜ ಎನ್ನುವ ಓದುಗರು ಸರ್ಕಾರಕ್ಕೆ ಅಂಕಗಳನ್ನು ಕೊಟ್ಟು ಕಮೆಂಟ್ ಮಾಡಿದ್ದಾರೆ.
ಇಲ್ಲಿ ಸಮೀಕ್ಷೆ ಮಾಡಿದರೆ ಉಪಯೋಗವಿಲ್ಲ
ಹರೀಶ್ ಎಂಬ ಓದುಗರು ಫೇಸ್ಬುಕ್ನಲ್ಲಿ ಕಮೆಂಟ್ ಮಾಡಿದ್ದು, 'ಇಲ್ಲಿ ಸಮೀಕ್ಷೆ ನಡೆಸಿದರೆ ಪ್ರಯೋಜನವಿಲ್ಲ. ಇವರು ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಯ ಫಲಾನುಭವಿಗಳಲ್ಲ, ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ಮಾಡಬೇಕೆಂದು' ಅಭಿಪ್ರಾಯಪಟ್ಟಿದ್ದಾರೆ.
ಪ್ರಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಎಡವಿದೆ
ವಿದ್ಯಾಧರ ಎನ್ನುವವರು ಫೇಸ್ಬುಕ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, 'ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಆದರೆ, ಸರ್ಕಾರ ತನ್ನ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ವಿಫಲವಾಗಿದೆ' ಎಂದು ಅವರು ಹೇಳಿದ್ದಾರೆ.
ಸಿಎಂ ಬೆಸ್ಟ್, ಸಚಿವರು...?
ಯು.ಮಾದಸ್ವಾಮಿ ಎನ್ನುವ ಓದುಗರು ಸರ್ಕಾರಕ್ಕೆ ಫುಲ್ ಅಂಕ ಕೊಟ್ಟಿದ್ದಾರೆ.' ಸೂಪರ್ ಸಿಎಂ ಅವರ ಯೋಜನೆಗಳು ಚೆನ್ನಾಗಿವೆ. ಆದರೆ, ಅವರ ಸಹೋದ್ಯೋಗಿಗಳು (ಸಚಿವರು) ಬೆಂಬಲ ಕೊಡುತ್ತಿಲ್ಲ' ಎಂದು ಕಮೆಂಟ್ ಮಾಡಿದ್ದಾರೆ.
ಇದು ಕರ್ನಾಟಕ ಸರ್ಕಾರವಲ್ಲ, ಅಹಿಂದ ಸರ್ಕಾರ
Saveen Kithlemane ಎನ್ನುವ ಓದುಗರು 'ಇದು ಕರ್ನಾಟಕ ಸರ್ಕಾರವಲ್ಲ ಅಹಿಂದ ಸರ್ಕಾರ, ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರವೊಂದು ಕೆಲವು ಜಾತಿಗಳಿಗೆ ಸೀಮಿತವಾಗಿದೆ' ಎಂದು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ ಮಾದರಿ ರಾಜ್ಯವಾಗಲಿ
Basavaraj Koppal ಎನ್ನುವ ಓದುಗರು 'ಒಳ್ಳೆ ಸಿಎಂ ಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಇನ್ನೂ 3 ವರ್ಷದ ಅವಧಿಯಲ್ಲಿ ಸಿದ್ದು ಒಳ್ಳೆ ಆಡಳಿತ ನಡೆಸಲಿ ಕರ್ನಾಟಕ ಮಾದರಿ ರಾಜ್ಯವಾಗಲಿ' ಎಂದು ಹೇಳಿದ್ದಾರೆ.