ಕೃಷಿಹೊಂಡದಲ್ಲಿ ಮುಳುಗಿ ಕೊಪ್ಪಳದ ಇಬ್ಬರು ಮಕ್ಕಳು ದುರ್ಮರಣ
ಬಟ್ಟೆ ತೊಳೆಯುವುದಕೆಂದು ಕೃಷಿ ಹೊಂಡಕ್ಕೆ ತೆರಳಿದ್ದ ಅಕ್ಕ-ತಮ್ಮ ಇಬ್ಬರೂ ಕೃಷಿ ಹೊಂಡದಲ್ಲಿ ಮುಳುಗಿ ಸಾವಿಗೀಡಾದ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಬಿಸರಳ್ಳಿ ಎಂಬಲ್ಲಿ ನಡೆದಿದೆ.
ಕೊಪ್ಪಳ, ಮೇ 19: ಬಟ್ಟೆ ತೊಳೆಯುವುದಕೆಂದು ಕೃಷಿ ಹೊಂಡಕ್ಕೆ ತೆರಳಿದ್ದ ಅಕ್ಕ-ತಮ್ಮ ಇಬ್ಬರೂ ಕೃಷಿ ಹೊಂಡದಲ್ಲಿ ಮುಳುಗಿ ಸಾವಿಗೀಡಾದ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಬಿಸರಳ್ಳಿ ಎಂಬಲ್ಲಿ ನಡೆದಿದೆ.
ಅಕ್ಕಮ್ಮ (8) ಮತ್ತು ಭರತ್(7) ಸಾವಿಗೀಡಾದ ನತದೃಷ್ಟ ಮಕ್ಕಳು. ಇಂದು ಬೆಳಗ್ಗೆ ಬಿಸರಳ್ಳಿಯ ಕೃಷಿಹೊಂಡಕ್ಕೆ ಬಟ್ಟೆ ತೊಳೆಯುವುದಕ್ಕೆಂದು ಹೋಗಿದ್ದ ಮೂವರಲ್ಲಿ ಇಬ್ಬರು ನೀರಿಗೆ ಬಿದ್ದಿದ್ದಾರೆ. ನೀರಿನ ಸೆಳವು ಹೆಚ್ಚಿದ್ದ ಕಾರಣ, ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ.[ಭಾರೀ ಮಳೆಗೆ ಗದಗ ಜಿಲ್ಲೆಯ ಯಕ್ಲಸ್ ಪುರ ಗ್ರಾಮ ಜಲಾವೃತ]
ಮಕ್ಕಳ ಸಾವಿನಿಂದಾಗಿ ಕುಟುಂಬ ವರ್ಗದ ಆಕ್ರಂದನ ಮುಗಿಲುಮುಟ್ಟಿದೆ. ಇಲ್ಲಿನ ಅಳವಂಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಷ್ಟು ಚಿಕ್ಕ ಮಕ್ಕಳನ್ನು ಬಟ್ಟೆ ಒಗೆಯುವುದಕ್ಕೆಂದು ನೀರಿನ ಬಳಿ ಕಳಿಸುವ ಅಗತ್ಯವಿತ್ತೆ, ಮಕ್ಕಳನ್ನು ನೀರಿನ ಬಳಿ ಕಳಿಸುವ ಮೊದಲು ಯಾರಾದರೊಬ್ಬರು ಹಿರಿಯರು ಅವರೊಂದಿಗಿರಬೇಡವೆ? ಈಗ ಈ ಮುಗ್ಧ ಮಕ್ಕಳ ಸಾವಿಗೆ ಯಾರು ಹೊಣೆ ಎಂಬಿತ್ಯಾದಿ ಪ್ರಶ್ನೆಗಳು ಘಟನೆಯ ನಂತರ ಎದ್ದಿವೆ.