ಕೆಎಸ್ಸಾರ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: 8 ಜನ ದಾರುಣ ಸಾವು
ತುಮಕೂರು, ಡಿಸೆಂಬರ್, 25: ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಬಿದರೆಗುಡಿ ಗ್ರಾಮದ ಬಳಿ ಶುಕ್ರವಾರ ಮುಂಜಾನೆ ಬಸ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಇಬ್ಬರು ಚಾಲಕರು ಸೇರಿ 8 ಮಂದಿ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದಲ್ಲಿ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಗಳ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಅಪಘಾತ ಸಂಭವಿಸಿದೆ.ನಾಲ್ವರು ಪುರುಷರು ಸೇರಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 10 ಜನ ಗಾಯಾಳುಗಳನ್ನು ಆಸ್ಪತ್ರಗೆ ದಾಖಲಿಸಲಾಗಿದೆ.[ಕುವೆಂಪು ಮನೆಯಲ್ಲಿ ಕಳ್ಳತನ ಮಾಡಿದವ ಸಿಕ್ಕಿಬಿದ್ದ]
ಶಿವಮೊಗ್ಗ ಮೂಲದ ಉದಯಶಂಕರ್ (61) ಮತ್ತು ರುಕ್ಮುಣಿ (50) ತಮಿಳುನಾಡಿನ ಶ್ರೀನಿವಾಸುಲು (42) ಮತ್ತು ಪ್ರಕಾಶ್ ಪೆರುಮಾಳ್ (35) ಬೆಂಗಳೂರಿನ ಛಾಯಾದೇವಿ (58) ಮತ್ತು ಶಿವಮೊಗ್ಗ ಹೊಸನಗರದ ಆನಂದ್ (38) ಬಸ್ ಚಾಲಕ ಸಾಗರದ ಮಹಾರುದ್ರ (35), ಶಿವಮೊಗ್ಗದ ಆನಂದಪ್ಪ (36) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದ ಬಸ್ಸುಗಳು
ಶಿವಮೊಗ್ಗದಿಂದ ತಿರುವಣ್ಣಾಮಲೈಗೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ (ಕೆ.ಎ.17-ಎಫ್.1281) ಸಾಗರ ಡಿಪೋಗೆ ಸೇರಿದ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ (ಕೆ.ಎ.17-ಎಫ್ 1632) ಬಸ್ಸುಗಳ ನಡುವೆ ರಾತ್ರಿ 12.20ರ ಸುಮಾರಿಗೆ ಡಿಕ್ಕಿ ಸಂಭವಿಸಿದೆ.
ಊಟ ಮುಗಿಸಿದ 20 ನಿಮಿಷದಲ್ಲಿ ಅಪಘಾತ
ತಿರುವಣ್ಣಾಮಲೈಗೆ ಹೊರಟಿದ್ದ ಬಸ್ಸುರಾತ್ರಿ 12 ಗಂಟೆಗೆ ಅರಸೀಕೆರೆಯಲ್ಲಿ ಊಟ ಮೂಗಿಸಿ ಹೊರಟಿತು. ಕೇವಲ 20 ನಿಮಿಷದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಎರಡು ಬಸ್ಸುಗಳ ಚಾಲಕರು ಮೃತಪಟ್ಟಿದ್ದರು.
ರಸ್ತೆ ಇಕ್ಕಟ್ಟಾಗಿದ್ದೆ ಕಾರಣ
ಬಸ್ಸುಗಳು ಚಲಿಸುತ್ತಿದ್ದ ಸ್ಥಳ ಎರಡು ಬದಿಯಿಂದ ಹಳ್ಳದಿಂದ ಕೂಡಿದ್ದು, ಎರಡು ವಾಹನಗಳು ಅತಿವೇಗದಿಂದ ಚಲಿಸುತ್ತಿದ್ದುದ್ದೇ ಅಪಘಾತಕ್ಕೆ ಕಾರಣ ಎಂದು ಬಸ್ಸಿನ ನಿರ್ವಾಹಕ ರವಿ ತಿಳಿಸಿದ್ದಾರೆ.
ಭೇಟಿ ನೀಡಿದ ಪೊಲೀಸರು
ಸ್ಥಳಕ್ಕೆ ಎಸ್ ಪಿ ಕಾರ್ತಿಕ ರೆಡ್ಡಿ, ಡಿವೈಎಸ್ಪಿ ರವಿಕುಮಾರ್, ಸಿಪಿಐ ರಮೇಶ್, ಪಿಎಸ್ಐ ಬಸವರಾಜು, ಸಿಬ್ಬಂದಿ ನವೀನ್, ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಗಿಲು ಮುಟ್ಟಿದ ಆಕ್ರಂದನ
ಗಾಯಾಳುಗಳು ಮತ್ತು ಮೃತರ ಕುಟುಂಬದವರ ರೋದನ ಎಂಥವರ ಕಣ್ಣಲ್ಲೂ ನೀರು ತರಿಸುವಂತೆ ಇತ್ತು. ನಿಜಕ್ಕೂ ಇದೊಂದು ಘೋರ ರಸ್ತೆ ಅಪಘಾಥವಾಗಿದ್ದು ಸ್ಥಳದಲ್ಲೇ ಎಂಟು ಜನರನ್ನು ಬಲಿ ಪಡೆದುಕೊಂಡಿದೆ.