ತುಳುನಾಡ್ದ ಜಾತ್ರೆಯಲ್ಲಿ ಮತ್ತೆ ರಾಜ್ಯ ವಿಭಜನೆಯ ಕೂಗು
ಮಂಗಳೂರು, ಜ 6: ಪಂಚ ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಕೊಂಕಣಿ ಭಾಷಿಗರಿಗೆ ಪ್ರತ್ಯೇಕ ರಾಜ್ಯವಿದೆ. ಜಗತ್ತಿನ ಎಲ್ಲಾ ಭಾಗಗಳಲ್ಲಿ ತುಳು ಭಾಷಿಗರಿದ್ದಾರೆ. ಹೀಗಿರುವಾಗ, ತುಳುವಿಗೂ ಪ್ರತ್ಯೇಕ ರಾಜ್ಯ ಬೇಕು ಎನ್ನುವ ಕೂಗು ತುಳುನಾಡ್ದ ಜಾತ್ರೆಯಲ್ಲಿ ಮತ್ತೆ ಮಗುದೊಮ್ಮೆ ಎದ್ದಿದೆ.
ಒಡಿಯೂರು ಶ್ರೀಗುರು ದೇವದತ್ತ ಸಂಸ್ಥಾನಂ ವಿಜಯ ರಜತ ಸಂಭ್ರಮದ ಸಲುವಾಗಿ ಮಂಗಳೂರಿನ ನೆಹರೂ ಮೈದಾನದಲ್ಲಿ ಭಾನುವಾರ (ಜ 5) ನಡೆದ ವೈಭವದ ಜಾತ್ರೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತ್ಯೇಕ ತುಳುನಾಡು ರಾಜ್ಯಕ್ಕಾಗಿ ಆಗ್ರಹ ವ್ಯಕ್ತವಾಗಿದೆ. (ಕರ್ನಾಟಕ ರಾಜ್ಯ ವಿಭಜನೆಗೂ ಶುರುವಾಯಿತು ಕೂಗು)
ದೇಶದ ಅಭಿವೃದ್ದಿಗೆ ತುಳುವಿನವರು ಅಪಾರ ಕೊಡುಗೆ ನೀಡಿದ್ದಾರೆ. ತುಳು ವಿಶಿಷ್ಟ ಸಂಸ್ಕೃತಿಯನ್ನೂ ಹೊಂದಿದೆ. ವಿಪುಲವಾದ ಸಾಹಿತ್ಯ ತುಳುವಿನಲ್ಲೂ ಇದೆ. ಆದರೂ, ಸರಕಾರದಿಂದ ತುಳುವಿಗೆ ಸರಿಯಾದ ಮಾನ್ಯತೆ ಸಿಗುತ್ತಿಲ್ಲ ಎನ್ನುವ ಆಕ್ಷೇಪ ಜಾತ್ರೆಯಲ್ಲಿ ವ್ಯಕ್ತವಾಗಿದೆ.
ತುಳುವರ 25 ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು. ಪ್ರತ್ಯೇಕ ತುಳು ರಾಜ್ಯ ಬೇಡಿಕೆ ಅಸಾಧ್ಯವೇನೂ ಅಲ್ಲ. ತುಳುವರ ಅಸ್ತಿತ್ವಕ್ಕೆ ಮತ್ತು ತುಳು ಸಂಸ್ಕೃತಿ ಉಳಿವಿಗಾಗಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿದ್ದೇವೆ ಎಂದು ಸಂಶೋಧಕ ತುಕಾರಾಂ ಪೂಜಾರಿ ಈ ಸಂದರ್ಭದಲ್ಲಿ ಹೇಳಿದ್ದಾರೆ. (ಅಖಂಡತೆಯಲ್ಲೇ ಶಕ್ತಿ, ರಾಜ್ಯ ಒಡೆದರೆ ಹಾಳು)
ತುಳು ಪರಂಪರೆಯನ್ನು ಬಿಂಬಿಸುವ ಕೋಲ, ಯಕ್ಷಗಾನ, ನೃತ್ಯ, ಸ್ಥಬ್ಧ ಚಿತ್ರಗಳು, ಚೆಂಡೆ, ಕೊಂಬು, ಕಹಳೆ ಮುಂತಾದವುಗಳನ್ನೊಳಗೊಂಡ ಭವ್ಯ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಶಾಸಕರು ಮತ್ತು ಸಂಸದರು ಭಾಗವಹಿಸಿದ್ದರು.
ಪ್ರತ್ಯೇಕ ರಾಜ್ಯದ ಕೂಗಿಗೆ ಪೇಜಾವರ ಶ್ರೀಗಳು, ಹೆಗ್ಗಡೆಯವರು ಹೇಳಿದ್ದೇನು. ಸ್ಲೈಡಿನಲ್ಲಿ
ಪೇಜಾವರ ಶ್ರೀಗಳು
'ತುಳುನಾಡ ಜಾತ್ರೆ, ಬಲೇ ತೇರ್ ಒಯ್ಪುಗ' (ತುಳುನಾಡಿನ ಜಾತ್ರೆ, ಬನ್ನಿ ರಥ ಎಳೆಯುವ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಉಡುಪಿ ಪೇಜಾವರ ಹಿರಿಯ ಶ್ರೀಗಳು, ಪೊರೆದೊಡೆಯ ಶ್ರೀಕೃಷ್ಣನಿಗೆ ಇಬ್ಬರು ತಾಯಂದಿರು. ಶ್ರೀಕೃಷ್ಣನಿಗೆ ಇಬ್ಬರ ಮೇಲೂ ಅಕ್ಕರೆ. ತುಳುವಿನವರಿಗೂ ಇಬ್ಬರು ತಾಯಂದಿರು. ದೇವಕಿ ತುಳುವಿನ ತಾಯಿಯಂತೆ ಮತ್ತು ಯಶೋಧೆ ಕನ್ನಡದ ತಾಯಿಯಂತೆ ನಮ್ಮನ್ನು ಸಲಹುತ್ತಿದ್ದಾಳೆ.
ಪೇಜಾವರ ಶ್ರೀ
ತುಳುನಾಡು ಮತ್ತು ಕರ್ನಾಟಕದ ಸೇವೆಗೆ ನಾವು ಕಂಕಣ ಬದ್ದರಾಗಿರಬೇಕು. ನಮ್ಮ ಭಾಷೆ ಮತ್ತು ಸಂಸ್ಕೃತಿಗೆ ಧಕ್ಕೆ ಬಂದಾಗ ಹೋರಾಡ ಬೇಕೆಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ. ವೇದಿಕೆಯಲ್ಲಿ ಪ್ರತ್ಯೇಕ ರಾಜ್ಯದ ಕೂಗಿಗೆ ಪೇಜಾವರ ಶ್ರೀಗಳು ತುಳು ಮತ್ತು ಕನ್ನಡ ಎರಡೂ ಭಾಷೆಗಳು ತಾಯಿ ಸಮಾನ ಎಂದು ಹೇಳಿದರು.
ಡಾ. ಹೆಗ್ಗಡೆ
ತುಳುವನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸ ಬೇಕು. ಮತ್ತೊಮ್ಮೆ ಸ್ವಾಮೀಜಿಗಳ ನೇತೃತ್ವದಲ್ಲಿ ನಿಯೋಗವೊಂದು ದೆಹಲಿಗೆ ತೆರಳಿ ಕೇಂದ್ರವನ್ನು ಒತ್ತಾಯಿಸುತ್ತೇವೆ. ತುಳುವಿಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಎಲ್ಲಾ ಕಡೆಯಿಂದಲೂ ಪ್ರಯತ್ನ ಸಾಗಬೇಕು ಎಂದು ಹೆಗ್ಗಡೆಯವರು ಹೇಳಿದ್ದಾರೆ. ಪ್ರತ್ಯೇಕ ರಾಜ್ಯದ ಕೂಗಿಗೆ ಹೆಗ್ಗಡೆಯವರೂ ತುಳು ಭಾಷೆಗೆ ಮಾನ್ಯತೆ ಸಿಗಬೇಕೆಂದಷ್ಟೇ ಹೇಳಿದರು.
ರಮಾನಾಥ ರೈ
ತುಳು ಭಾಷೆಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಸರಕಾರ ವಿಶೇಷ ಪ್ರಯತ್ನ ಮಾಡಲಿದೆ. ಒಂದಲ್ಲಾ ಒಂದು ದಿನ ನಮ್ಮ ಕನಸು ಈಡೇರಲಿದೆ. ಎಲ್ಲಾ ಒಟ್ಟಾಗಿ ತುಳು ಭಾಷೆಗೆ ಮಾನ್ಯತೆ ಸಿಗಲು ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಿ ಒತ್ತಾಯಿಸಲಿದ್ದೇವೆ.
25 ಬೇಡಿಕೆಗಳು
ಎತ್ತಿನಹೊಳೆ ಯೋಜನೆಗೆ ವಿರೋಧ. ಮಂಗಳೂರು ವಿಮಾನ ನಿಲ್ದಾಣಕ್ಕೆ ತುಳುನಾಡಿನ ಹೆಸರಿಡುವುದು. ನೇತ್ರಾವತಿ ನದಿ ತಿರುವು ಯೋಜನೆ ಕೈಬಿಡುವುದು. ನಿಡ್ಡೋಡಿ ಸ್ಥಾವರ ತಡೆಹಿಡಿಯುವುದು. ತುಳು ಯಕ್ಷಗಾನ ಮೇಳಗಳಿಗೆ ಧನಸಹಾಯ, ಅಡಿಕೆ ನಿಷೇಧ ಕೈಬಿಡಬೇಕು ಸೇರಿದಂತೆ 25 ಬೇಡಿಕೆಗಳನ್ನು ಮಂಡಿಸಲಾಯಿತು.