ಸಾರಿಗೆ ಮುಷ್ಕರ ಕೈ ಬಿಡಲು ಕರೆ ನೀಡಿದ ರಾಮಲಿಂಗಾ ರೆಡ್ಡಿ
ಬೆಂಗಳೂರು, ಜುಲೈ 27 : 'ಸಾರಿಗೆ ನೌಕರರ ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದೆ. ಮುಷ್ಕರವನ್ನು ಕೈ ಬಿಟ್ಟು ಎಲ್ಲರೂ ಮಾತುಕತೆಗೆ ಬನ್ನಿ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಷ್ಕರ ನಿರತ ನೌಕರರಿಗೆ ಮನವಿ ಮಾಡಿದರು.
ಬುಧವಾರ ಬೆಳಗ್ಗೆ ಶಾಂತಿನಗರದ ಕೆಎಸ್ಆರ್ಟಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ ಅವರು, 'ಮಧ್ಯಾಹ್ನದ ತನಕ ನೌಕರರ ಸಂಘದ ಜೊತೆ ಮಾತುಕತೆ ನಡೆಸುತ್ತೇವೆ. ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಲಾಗುತ್ತದೆ' ಎಂದರು.[ಸಾರಿಗೆ ಮುಷ್ಕರ : ಮಂಗಳವಾರದ 10 ಬೆಳವಣಿಗೆಗಳು]
'ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರೀಕ್ಷೆಗಳು ರದ್ದಾಗಿ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಜನರ ಹಿತದೃಷ್ಠಿಯಿಂದ ಮುಷ್ಕರವನ್ನು ಕೈಬಿಡಿ' ಎಂದು ಸಚಿವರು ನೌಕರರಿಗೆ ಮನವಿ ಮಾಡಿದರು.[ಸಾರಿಗೆ ಮುಷ್ಕರದ ಚಿತ್ರಗಳು]
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ನೌಕರರ ಬೇಡಿಕೆಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಗುತ್ತದೆ. ಅದಕ್ಕೂ ಮೊದಲು ವ್ಯವಸ್ಥಾಪಕ ನಿರ್ದೇಶಕರು ನೌಕರರ ಜೊತೆ ಚರ್ಚಿಸಲಿದ್ದಾರೆ. ಮುಷ್ಕರ ಕೈ ಬಿಟ್ಟರೆ ಮಾತುಕತೆ ನಡೆಸಬಹುದು' ಎಂದು ಹೇಳಿದರು.....
'ಈಗಲೂ ಸಾಲ ಇದೆ, ಕಡಿಮೆ ಆಗುತ್ತಿದೆ'
'ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಇಲಾಖೆ ನಷ್ಟದಲ್ಲಿತ್ತು. ಈಗಲೂ ಸಾಲವಿದೆ, ಸಾಲ ಕಡಿಮೆ ಆಗುತ್ತಿದೆ. ಎಲ್ಲಾ ನಿಗಮಗಳಲ್ಲೂ ಲಾಭ ತರಲು ಪ್ರಯತ್ನ ನಡೆಸಲಾಗುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಖಾಸಗಿ ಬಸ್ಸುಗಳಿಗೆ ಪೈಪೋಟಿ ನೀಡಲಾಗುತ್ತಿದೆ'.
'ಅರ್ಧ ಗಂಟೆಯಲ್ಲಿ ಪರಿಹಾರ'
'ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ನೌಕರರ ಸಂಘದ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಾರೆ. ಮೂರು ಗಂಟೆಗೂ ಅಧಿಕ ಕಾಲ ನೌಕರರ ಜೊತೆ ಚರ್ಚೆ ನಡೆಸಲಾಗಿದೆ. ಒಂದು ವೇಳೆ ನೌಕರರು ಮುಷ್ಕರ ಕೈ ಬಿಟ್ಟು ಮಾತುಕತೆಗೆ ಬಂದರೆ ಅರ್ಧಗಂಟೆಯಲ್ಲಿ ಸಮಸ್ಯೆಯನ್ನು ಬಗೆಹರಿಸುತ್ತೇವೆ'.
'ಹಿಂದೆಯೂ ಪ್ರತಿಭಟನೆ ನಡೆದಿತ್ತು'
2012ರಲ್ಲಿಯೂ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಮುಷ್ಕರ ನಡೆದಿತ್ತು. 2 ದಿನದಲ್ಲಿ ವಾಪಸ್ ಪಡೆಯಲಾಗಿತ್ತು. ಇಲಾಖೆಯ ನೌಕರರು ಸಂಸ್ಥೆಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಿ. ಮುಷ್ಕರ ನಿಲ್ಲಿಸಲಿ, ಮಾತುಕತೆ ಮೂಲಕ ಸೌಹಾರ್ದಯುತವಾಗಿ ಎಲ್ಲವನ್ನು ಪರಿಹರಿಸಿಕೊಳ್ಳೋಣ'.
5 ಗಂಟೆಗೆ ಸಿಎಂ ಜೊತೆ ಸಭೆ
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಂಜೆ 5 ಗಂಟೆಗೆ ಸಭೆ ನಿಗದಿಯಾಗಿದೆ. ಆ ಸಭೆಯಲ್ಲಿ ನೌಕರರ ಬೇಡಿಕೆಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಗುತ್ತದೆ. ಅದಕ್ಕೂ ಮೊದಲು ವ್ಯವಸ್ಥಾಪಕ ನಿರ್ದೇಶಕರು ನೌಕರರ ಜೊತೆ ಚರ್ಚಿಸಲಿದ್ದಾರೆ.'
'ಎಸ್ಮಾ ಜಾರಿ ಮಾಡೋಲ್ಲ'
'ನಮ್ಮ ಶಕ್ತಿಗೆ ಅನುಸಾರವಾಗಿ ಶೇ 10ರಷ್ಟು ವೇತನ ಹೆಚ್ಚಿಸಲು ತೀರ್ಮಾನಿಸಿದ್ದೇವೆ. ಮುಷ್ಕರ ನಿರತ ನೌಕರರ ವಿರುದ್ಧ ಎಸ್ಮಾ ಜಾರಿ ಬೇಡ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಎಸ್ಮಾ ಜಾರಿಗೊಳಿಸುವುದಿಲ್ಲ' ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.