ಸಾರಿಗೆ ಮುಷ್ಕರ : ನೌಕರರಿಗೆ ಮೂರು ದಿನದ ವೇತನ ಕಡಿತ
ಬೆಂಗಳೂರು, ಜುಲೈ 29 : ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೂರು ದಿನ ಮುಷ್ಕರ ನಡೆಸಿದ ಸಾರಿಗೆ ಇಲಾಖೆ ನೌಕರರ ಸಂಬಳ ಕಡಿತಗೊಳ್ಳಲಿದೆ. ಸರ್ಕಾರ ಶೇ 12.5ರಷ್ಟು ವೇತನ ಹೆಚ್ಚಳ ಮಾಡಲು ಒಪ್ಪಿಗೆ ನೀಡಿದ ಬಳಿಕ ಮುಷ್ಕರ ಅಂತ್ಯವಾಗಿತ್ತು.
ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ತೊಡಗಿದರೆ ಆ ದಿನದ ವೇತನ ಕಡಿತಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದನ್ನು ಮುಂದಿಟ್ಟುಕೊಂಡು ನೌಕರರ ವೇತನ ಕಡಿತಗೊಳಿಸಲು ಇಲಾಖೆ ತೀರ್ಮಾನ ಕೈಗೊಂಡಿದೆ.[ಮುಷ್ಕರ ಅಂತ್ಯ, ಬಸ್ ಬಂತು ಹತ್ತಿಕೊಳ್ಳಿ]
ಮುಷ್ಕರ ವಾಪಸ್ ಪಡೆಯುವ ಸಂದರ್ಭದಲ್ಲಿ ನೌಕರರಿಗೆ ಶಿಸ್ತು ಕ್ರಮದ ಹೆಸರಿನಲ್ಲಿ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕು ಎಂದು ನೌಕರರು ಬೇಡಿಕೆ ಇಟ್ಟಿದ್ದರು. ಸರ್ಕಾರ ಈ ಬೇಡಿಕೆಗೆ ಒಪ್ಪಿಗೆ ಸೂಚಿಸಿತ್ತು. ಜುಲೈ 27ರ ಸಂಜೆಯಿಂದಲೇ ನೌಕರರು ಮುಷ್ಕರವನ್ನು ವಾಪಸ್ ಪಡೆದಿದ್ದರು.[ಚಿತ್ರಗಳು : ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ ಬೆಂಕಿಗಾಹುತಿ]
ಮೂರು ದಿನದ ಮುಷ್ಕರದಿಂದಾಗಿ ಸಾರಿಗೆ ಸಂಸ್ಥೆಗಳಿಗೂ ಅಪಾರ ನಷ್ಟ ಉಂಟಾಗಿದೆ. ಮೂರು ದಿನದಲ್ಲಿ ಒಟ್ಟು 142 ಸರ್ಕಾರಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕೆಎಸ್ಆರ್ಟಿಸಿಯ 82, ಬಿಎಂಟಿಸಿಯ 4 ಬಸ್ಸುಗಳು ಕಲ್ಲು ತೂರಾಟದಿಂದಾಗಿ ಜಖಂಗೊಂಡಿವೆ.....
ನೌಕರರು ಮುಷ್ಕರ ನಡೆಸಿದ್ದು ಏಕೆ?
ಶೇ 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ಇಲಾಖೆ ನೌಕರರು ಜುಲೈ 25ರಿಂದ ಮುಷ್ಕರ ನಡೆಸಿದರು. ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸರ್ಕಾರಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. [ಚಿತ್ರ : ಐಟಿಯುಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಬರಾವ್]
ಎಲ್ಲರೂ ಮುಷ್ಕರದಲ್ಲಿ ತೊಡಗಿದ್ದರು
ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಎನ್ಇಕೆಆರ್ಟಿಸಿ ಸೇರಿ ಎಲ್ಲಾ ನಿಗಮಗಳಿಂದ ಒಟ್ಟು 23 ಸಾವಿರ ಬಸ್ಸುಗಳಿವೆ. 1.25 ಲಕ್ಷ ಸಿಬ್ಬಂದಿಗಳೂ ಮುಷ್ಕರದಲ್ಲಿ ತೊಡಗಿದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡು ಜನರು ಪರದಾಡುವಂತಾಯಿತು.
ಮುಷ್ಕರ ನಡೆದ ದಿನದ ವೇತನವಿಲ್ಲ
ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ತೊಡಗಿದರೆ ಆ ದಿನದ ವೇತನ ಕಡಿತಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದನ್ನು ಮುಂದಿಟ್ಟುಕೊಂಡು ಮುಷ್ಕರ ನಡೆದ ಮೂರು ದಿನ ನೌಕರರ ವೇತನ ಕಡಿತಗೊಳಿಸಲಾಗುತ್ತಿದೆ.
ಎಲ್ಲರಿಗೂ ವೇತನ ಕಡಿತ
ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಹಾಗೂ ಎನ್ಇಕೆಆರ್ಟಿಸಿ ಸೇರಿ 4 ನಿಗಮಗಳ ನೌಕರರ ಜುಲೈ ತಿಂಗಳ ವೇತನವನ್ನು ಕಡಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
12.5ರಷ್ಟು ವೇತನ ಹೆಚ್ಚಳ
ಶೇ 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ಬೇಡಿಕೆಗಳನ್ನು ಮುಷ್ಕರ ನಿರತ ನೌಕರರು ಮುಂದಿಟ್ಟಿದ್ದರು. ಸರ್ಕಾರ 12.5ರಷ್ಟು ವೇತನ ಹೆಚ್ಚಳ ಮಾಡಿತ್ತು ಮತ್ತು ಉಳಿದ ಬೇಡಿಕೆಗಳನ್ನು ಈಡೇರಿಸಲು 20 ದಿನಗಳ ಗಡುವು ಕೇಳಿದೆ.