ನೋಡಿದ್ರಾ, ಸಾವಿತ್ರಮ್ನೋರ್ ಮನೇಲಿ ಟೊಮೆಟೋ ಭಾತ್ ಅಂತೆ!
ಟೊಮೆಟೋ ಬೆಳೆಯುವ ಪ್ರಮುಖ ನಾಲ್ಕು ರಾಜ್ಯಗಳಾದ ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಮಳೆಯಿಂದ ಇಳುವರಿ ಕೈಕೊಟ್ಟಿದೆ. ಟೊಮೆಟೋ ಬೆಲೆ ಕೆಜಿಯೊಂದಕ್ಕೆ 75-90ರೂಪಾಯಿಯಷ್ಟಿದೆ.
ಅಲ್ವೇ ಪಂಕಜಾ, ನೋಡ್ದಾ ಸಾವಿತ್ರಮ್ಮ ಮನೇ ದರ್ಬಾರ್, ಮಕ್ಳು ಮತ್ತು ಗಂಡನಿಗೆ ಇವತ್ತು ಟೊಮೆಟೋ ಬಾತ್ ಮಾಡಿ ಡಬ್ಬಕ್ಕೆ ಹಾಕ್ ಕೊಟ್ಟವ್ಳಂತೆ.. ಗಂಡನ ಸಂಬ್ಳ ನೋಡೀ ಕಾಲ್ ಚಾಚ್ ಬಾರ್ದಾ ಆ ಹೆಂಗ್ಸು?
ವರ್ಷದ ಕೆಳಗೆ ಟೊಮೆಟೋ ಬೆಲೆ ಕೆಜಿಗೆ ಎರಡು ರೂಪಾಯಿಗೆ ಕುಸಿದಿದ್ದಾಗ ರೈತರು ಕೋಲಾರ ಬೈಪಾಸಿನಲ್ಲಿ ಟೊಮೆಟೋ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದರು. ಆದರೆ ಈಗ, ಟೊಮೆಟೋ ಬೆಲೆ ಶತಕದಂಚಿನಲ್ಲಿರುವಾಗ ವಠಾರದಲ್ಲಿನ ಮಹಿಳೆಯರ ಚರ್ಚೆ ಟೊಮ್ಯಾಟೋ ಕಡೆ ಸಾಗದೇ ಇರುತ್ತಾ?
ಏನೇ ಅನ್ನಿ.. ಜೇಬಿನಲ್ಲಿ ದುಡ್ಡು ಇಲ್ಲದಿದ್ದಾಗ ಹಸಿವು ಜಾಸ್ತಿ ಅನ್ನೋ ಹಾಗೇ, ಯಾವತ್ತೂ ಅಷ್ಟೇನೂ ಇಷ್ಟವಾಗದ ಟೊಮೆಟೋ ಬಾತ್, ಬೆಲೆ ಗಗನಕ್ಕೇರಿದಾಗ ಮಾತ್ರ ಅದನ್ನೇ ಆಸೆಪಟ್ಟು ತಿನ್ನಬೇಕು ಅನಿಸೋದು ಅದ್ಯಾವ ನ್ಯಾಯ ಭಗವಂತ..
ದರ ಏರಿಕೆಯಲ್ಲೂ ನಗೆ ಉಕ್ಕಿಸುತ್ತಿರುವ ಟೊಮೆಟೋ ಜೋಕ್ಸ್
ದೇಶದ ತರಕಾರೀ ಮಾರುಕಟ್ಟೆಯನ್ನು ಆಳುವ ಈರುಳ್ಳಿ, ಆಲೂಗೆಡ್ಡೆ, ಟೊಮೆಟೋ ಬೆಲೆ ಅದ್ಯಾವಾಗ ಇಳಿಯುತ್ತೋ, ಅದ್ಯಾವಾಗ ಗಗನಕ್ಕೇರುತ್ತೋ ಅನ್ನೋದು ಸ್ವಾತಂತ್ರ್ಯ ಬಂದ ನಂತರದ ಭಾರತದ ಯಾವ ಪ್ರಧಾನಿಗಳಿಗೂ ಅರ್ಥವಾಗದ ಚಿದಂಬರ ರಹಸ್ಯ. ಮಿಸ್ಟರ್ ಮೋದಿ ವೈಕಾಂಟ್ ಯು ಟ್ರೈ..
ಈ ಮೂರು ಘಟಾನುಗಟಿ ತರಕಾರಿಗಳಲ್ಲಿ ಯಾವುದರ ಬೆಲೆ ಹೆಚ್ಚಾದರೂ ಜನಸಾಮಾನ್ಯರ ಪಾಡು ಹೇಳತೀರದು. ಈರುಳ್ಳಿ ಅನ್ನೋದು ಇದೇ ನೋಡಿ.., ಮದನ್ ಲಾಲ್ ಖುರಾನ ನೇತೃತ್ವದ ಬಿಜೆಪಿ ಸರಕಾರವನ್ನೇ ದೆಹಲಿಯಲ್ಲಿ ಉರುಳಿಸಿದ ದಾಖಲೆಯನ್ನು ತನ್ನ ಸುಪರ್ದಿಯಲ್ಲಿ ಹೊಂದಿದೆ. ಮುಂದೆ ಓದಿ
ಎಪಿಎಂಸಿ ಮಾರುಕಟ್ಟೆಯಲ್ಲಿನ ಮಧ್ಯವರ್ತಿಗಳು
ಈ ಮೂರು ಬೆಳೆಗಳ ಬೆಲೆ ಇದ್ದಕ್ಕಿಂದಂತೇ ಏರಿಕೆಯಾಗಲು, ಇಳಿಕೆಯಾಗಲು ಮಳೆಯನ್ನು ದೂಷಿಸಿದರೆ ಮಾತ್ರ ಸಾಲದು! ಈರುಳ್ಳಿ, ಆಲೂಗೆಡ್ಡೆ, ಟೊಮೆಟೋ ಮೇಲೆಯ ಮೇಲೆ ನಿಜವಾದ ಹಿಡಿತ ಇರೋದು ರೈತರು, ಮಳೆ, ಅನ್ನೋದಕ್ಕಿಂತ ಹೆಚ್ಚಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿನ ಮಧ್ಯವರ್ತಿಗಳು.
ಕರ್ನಾಟಕ ಸೇರಿ ಇತರ ಮೂರು ರಾಜ್ಯಗಳು
ಟೊಮೆಟೋ ಬೆಳೆಯುವ ಪ್ರಮುಖ ನಾಲ್ಕು ರಾಜ್ಯಗಳಾದ ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಮಳೆಯಿಂದ ಇಳುವರಿ ಕೈಕೊಟ್ಟಿದೆ. ವಾಡಿಕೆಯಷ್ಟು ಮುಂಗಾರು ಬೀಳದೆ, ಕಳೆದ ಎರಡು ತಿಂಗಳಿನಿಂದ ಮಳೆ ರೈತರನ್ನು ಸತಾಯಿಸಿಕೊಂಡು ಬರುತ್ತಲೇ ಇದೆ.
ಕೋಲಾರ ಜಿಲ್ಲೆ ಕೂಡಾ ಒಂದು
ಕರ್ನಾಟಕದ ಡ್ರೈ ಜಿಲ್ಲೆಗಳ ಪೈಕಿ, ಕೋಲಾರ ಕೂಡಾ ಒಂದು. ಇಲ್ಲಿನ ಪ್ರಮುಖ ಬೆಳೆ ಟೊಮೆಟೋ. ಬೋರ್ ವೆಲ್ ಮತ್ತು ಸ್ವಲ್ಪ ಮಳೆಯನ್ನು ನಂಬಿಕೊಂಡಿದ್ದ ರೈತರಿಗೆ ಎರಡೂ ಕೈಕೊಟ್ಟಿರುವುದರಿಂದ, ಟೊಮೆಟೋ ಉತ್ಪಾದನೆಯೇ ಇಳಿಮುಖವಾಗಿದೆ. ವಿಶೇಷವಾಗಿ ಟೊಮೆಟೋ ಬೆಲೆ ಗಗನಕ್ಕೇರಲು ಇದೂ ಒಂದು ಕಾರಣ.
ಟೊಮೆಟೋ ಬೆಲೆಏರಲು ಜಿಎಸ್ಟಿಯೂ ಒಂದು ಕಾರಣ
ಮಳೆ, ಮಧ್ಯವರ್ತಿಗಳ ಹಾವಳಿಯ ನಡುವೆ ಸಗಟು ವ್ಯಾಪಾರಿಗಳು ಟೊಮೆಟೋ ಬೆಲೆಏರಲು ಜಿಎಸ್ಟಿಯೂ ಒಂದು ಕಾರಣ ಎಂದು ಕೇಂದ್ರ ಸರಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಇಪ್ಪತ್ತು ರೂಪಾಯಿಗೆ ಮೂರು ಕೆಜಿ ಸಿಗುತ್ತಿದ್ದ ಆಪಲ್ ಟೊಮೆಟೋ ಬೆಲೆ ಈಗ ಆಪಲ್ ಗಿಂತಲೂ ಹೆಚ್ಚಾಗಿರುವುದರಿಂದ, ಇದರ ಪರಿಣಾಮ ನೇರವಾಗಿ ಅಡುಗೆಮನೆಯ ಮೇಲೆ ಬೀಳುತ್ತಿದೆ.
ಗಗನಕ್ಕೇರಿರುವ ಟೊಮೆಟೋ ಬೆಲೆ
ಚಿನಿವಾರ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತದಂತೆ ಒಂದೊಂದು ಮಾರುಕಟ್ಟೆಯಲ್ಲಿ ಒಂದೊಂದು ದರ. ವಾರದ ಹಿಂದೆ 60-70 ರೂಪಾಯಿಯಿದ್ದ ಟೊಮೆಟೋ ಬೆಲೆ ಈ ವಾರ ಮತ್ತಷ್ಟು ಏರಿಕೆ ಕಂಡು 75-90 ರೂಪಾಯಿ ಆಸುಪಾಸಿಗೆ ಬಂದು ನಿಂತಿದೆ.
ದರ್ಶಿನಿ ಹೊಟೇಲ್ ಗಳಲ್ಲಿ ಮಾಯವಾದ ಟೊಮೆಟೋ ಬಾತ್
ಟೊಮೆಟೋ ಬೆಲೆ ಯಾವಾಗ ಇಳಿಯಬಹುದು ಎನ್ನುವುದಕ್ಕೆ ಕರಾರುವಕ್ಕಾದ ಉತ್ತರ ಯಾರಲ್ಲೂ ಇಲ್ಲ. ದರ್ಶಿನಿ ಹೊಟೇಲುಗಳಲ್ಲಿ ಟೊಮೆಟೋ ಬಾತ್ ಸದ್ಯಕ್ಕಿಂತೂ ಅಡುಗೆಮನೆಯಿಂದ ದೂರವಾಗಿದೆ. ಇನ್ನು..ಮನೆಯಲ್ಲಿ ಯಾರಿಗೂ ಟೊಮೆಟೋ ಬಾತ್ ತಿನ್ನಬೇಕೆಂದು ಪ್ರೇರಣೆಯಾಗದೇ ಇದ್ದರೆ, ಭಗವಂತನ ಕೃಪೆ ನಮ್ಮ ಮೇಲೆ ಇದೆಯೆಂದೇ ತಿಳಿದುಕೊಳ್ಳಬಹುದೇನೋ...