ಎಸ್.ಎಂ.ಕೃಷ್ಣ ದೆಹಲಿಗೆ, ಸಿದ್ದರಾಮಯ್ಯ ಬದಲಾವಣೆ?
ಬೆಂಗಳೂರು, ಏಪ್ರಿಲ್ 28 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೈಕಮಾಂಡ್ ನಾಯಕರು ಅಸಮಾಧಾನಗೊಂಡಿದ್ದಾರೆ. ಎಸ್.ಎಂ.ಕೃಷ್ಣ ಅವರು ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿದೆ. ಸಿದ್ದರಾಮಯ್ಯ ಅವರ ಅವಧಿ ಮುಗಿಯಿತು? ಎಂದು ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಎಸ್.ಎಂ.ಕೃಷ್ಣ, ಡಾ.ಜಿ.ಪರಮೇಶ್ವರ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಕೇಳಿಬರುತ್ತಿದೆ. ಹುದ್ದೆಗಾಗಿ ಲಾಬಿಯೂ ಆರಂಭವಾಗಿದೆ ಎಂಬುದು ದೆಹಲಿಯ ಕಾಂಗ್ರೆಸ್ ಮೂಲಗಳ ಮಾಹಿತಿ. ಆದರೆ, ಹೈಕಮಾಂಡ್ ಈ ವಿಚಾರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. [ಒಂದೇ ವೇದಿಕೆಯಲ್ಲಿ ಗೌಡ್ರು, ಎಸ್ ಎಂ ಕೃಷ್ಣ: ಶತ್ರುವಿನ ಶತ್ರು.. ಮಿತ್ರ?]
ಐದು ರಾಜ್ಯಗಳ ವಿಧಾನಸಭೆ ಚುನಾವಣೆ, ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ ಮುಂತಾದ ವಿಚಾರಗಳಲ್ಲಿ ಬ್ಯುಸಿಯಾಗಿರುವ ಹೈಕಮಾಂಡ್ ನಾಯಕರು, ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ನಿರ್ಧಾರವನ್ನು ಸದ್ಯಕ್ಕೆ ಕೈಗೊಳ್ಳುವುದಿಲ್ಲ ಎಂಬುದು ಸದ್ಯದ ಮಾಹಿತಿ. [ಸಚಿವ ಸ್ಥಾನ ಬೇಕಾದರೆ ಮುಂಗಾರು ಮಳೆ ಬರಬೇಕು!]
ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆಗೆ ಮುಂದಾದರೆ ಸಿದ್ದರಾಮಯ್ಯ ಅವರು 20ಕ್ಕೂ ಹೆಚ್ಚು ಶಾಸಕರ ಜೊತೆ ಪಕ್ಷದಿಂದ ಹೊರನಡೆಯಬಹುದು ಎಂಬ ಆತಂಕವೂ ಇದೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಈ ಕುರಿತು ಯಾವ ನಾಯಕರು ಬಹಿರಂಗ ಹೇಳಿಕೆ ನೀಡಿಲ್ಲ. ವಿವರಗಳು ಚಿತ್ರಗಳಲ್ಲಿ... [ಸಿದ್ದರಾಮಯ್ಯ ಸಂಪುಟ ಪುನಾಚರನೆ, 10ಕ್ಕೂ ಹೆಚ್ಚು ಸಚಿವರ ಬದಲಾವಣೆ]
ಹೇಗೆ ಆರಂಭವಾಯಿತು ಚರ್ಚೆ?
ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂ.ಕೃಷ್ಣ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿರುವುದು ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ನಾಂದಿ ಹಾಡಿದೆ. ಕರ್ನಾಟಕದಲ್ಲಿನ ಕೆಲವು ಕಾಂಗ್ರೆಸ್ ನಾಯಕರು ಈ ವಿಚಾರ ಚರ್ಚೆ ಮಾಡಲು ಕೃಷ್ಣ ದೆಹಲಿಗೆ ಭೇಟಿ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಸೋನಿಯಾ-ಸಿದ್ದರಾಮಯ್ಯ ಭೇಟಿ ಇಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೈಕಮಾಂಡ್ ನಾಯಕರು ಅಸಮಾಧಾನಗೊಂಡಿದ್ದಾರೆ ಎಂಬುದು ಸುದ್ದಿ. ಏಪ್ರಿಲ್ 23ರಂದು ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದರು. ಆದರೆ, ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲ್ಲ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಸಿದ್ದರಾಮಯ್ಯ ಸುತ್ತ ವಿವಾದ
ಊಬ್ಲೋ ವಾಚ್ ವಿವಾದ, ಲ್ಯಾಬ್ ವಿವಾದ ಮುಂತಾದವುಗಳಿಂದಾಗಿ ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ಅಸಮಾಧಾನಗೊಂಡಿದೆ. ಆದರೆ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯಗೆ ಶಾಸಕರ ಬೆಂಬಲವಿದೆ
ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆಗೆ ನಿರ್ಧಾರ ತೆಗೆದುಕೊಂಡರೆ ಅವರು ಶಾಸಕರ ಜೊತೆ ಪಕ್ಷದಿಂದ ಹೊರನಡೆಯಬಹುದು ಎಂಬ ಆತಂಕವಿದೆ. ಸುಮಾರು 25 ಶಾಸಕರು ಸಿದ್ದರಾಮಯ್ಯ ಅವರ ಜೊತೆ ಇದ್ದು, 45ಕ್ಕೂ ಅಧಿಕ ಶಾಸಕರ ಬೆಂಬಲವಿದೆ. ಆದ್ದರಿಂದ, ಕಾಂಗ್ರೆಸ್ ಕಾದು ನೋಡುವ ತಂತ್ರ ಅನುಸರಿಸಿದೆ.
ಮುಖ್ಯಮಂತ್ರಿ ಹುದ್ದೆಗೆ ಲಾಬಿ?
ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಎಸ್.ಎಂ.ಕೃಷ್ಣ, ಡಾ.ಜಿ.ಪರಮೇಶ್ವರ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಕೇಳಿಬರುತ್ತಿದೆ. ಆದರೆ, ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಖರ್ಗೆಗೆ ಬಿಡುಗಡೆ ಇಲ್ಲ
ಮುಖ್ಯಮಂತ್ರಿ ಸ್ಥಾನಕ್ಕೆ ಎಸ್.ಎಂ.ಕೃಷ್ಣ, ಡಾ.ಜಿ.ಪರಮೇಶ್ವರ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಕೇಳಿಬರುತ್ತಿದ್ದರೂ ಖರ್ಗೆ ಅವರಿಗೆ ಆ ಭಾಗ್ಯ ಸಿಗುವುದು ಕಷ್ಟ. ಏಕೆಂದರೆ ಹೈಕಮಾಂಡ್ ಖರ್ಗೆ ಅವರಿಗೆ ದೆಹಲಿಯಲ್ಲಿ ನೀಡಿರುವ ಜವಾಬ್ದಾರಿಯಿಂದ ಬಿಡುಗುಡೆ ಮಾಡುವುದು ಕಷ್ಟ. ಆದ್ದರಿಂದ, ಎಸ್.ಎಂ.ಕೃಷ್ಣ, ಡಾ.ಜಿ.ಪರಮೇಶ್ವರ ಅವರ ಹೆಸರನ್ನು ಪರಿಗಣಿಸಬಹುದು.
ಯಾವುದೇ ನಿರ್ಧಾರ ಕೈಗೊಂಡಿಲ್ಲ
ಸಿದ್ದರಾಮಯ್ಯ ಅವರ ಸರ್ಕಾರ ಅವಧಿ ಇನ್ನೂ ಎರಡು ವರ್ಷಗಳಿವೆ. 2018ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಐದು ರಾಜ್ಯಗಳ ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆ ಇದೆ.