ಮಹಿಳೆಯರು ಎಳೆಯುವ ರಥದ ಚಕ್ರದಡಿ ಸಿಲುಕಿ ಮೂವರಿಗೆ ಗಾಯ
ರಾಯಚೂರು, ಮಾರ್ಚ 30 : ಮಹಿಳೆಯರ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಲಿಂಗಸುಗೂರು ತಾಲೂಕಿನ ಹಿರೇ ಅಂತರಗಂಗೆ ಗ್ರಾಮದಲ್ಲಿ ದುರ್ಗಮ್ಮ ದೇವಿ ಜಾತ್ರೆ ವೇಳೆ ರಥದ ಚಕ್ರದಡಿ ಸಿಲುಕಿ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈರಮ್ಮ, ಸುನಿತಾ, ಈರಮ್ಮ ಎನ್ನುವರ ಕಾಲಿನ ಮೇಲೆ ರಥ ಹರಿದಿದ್ದರಿಂದ ಮೂವರು ಕಾಲು ಕಳೆದುಕೊಂಡಿದ್ದಾರೆ. ದುರ್ಗಮ್ಮ ದೇವಿ ಜಾತ್ರೆ ನಿಮಿತ್ತ ತೇರು ಎಳೆಯುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಈ ಮೂವರು ಮಹಿಳೆಯರು ತೇರಿನ ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ.[ಚರಂಡಿ ದಾಟಲು ಸ್ಥಳೀಯರ ಹೆಗಲೇರಿದ ರಾಯಚೂರು ಜಿ.ಪಂ ಸಿಇಒ]
ಹಿಂದಿನಿಂದಲೂ ಮಹಿಳೆಯರಿಂದಲೇ ನಡೆಯುತ್ತಿರುವ ಜಾತ್ರೆಯಲ್ಲಿ ಮಹಿಳೆಯರೇ ತೇರನ್ನ ಎಳೆಯುತ್ತಾರೆ. ದುರಾದೃಷ್ಠವಶಾತ್ ಈ ಬಾರಿ ಮೂವರು ಮಹಿಳೆಯರು ಕಾಲು ಕಳೆದುಕೊಂಡಿದ್ದಾರೆ.
ಗಾಯಾಳುಗಳನ್ನ ಮಸ್ಕಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯರ ಯೋಗಕ್ಷೇಮ ವಿಚಾರಿಸಿದರು. ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.