ನಿಜ ಯಕ್ಷ ಪ್ರೇಕ್ಷಕರ ತಲುಪಿದ 'ಪದ ಕೇಳ್ವಾ ಬನ್ನಿ'
ಬೆಂಗಳೂರು, ನ. 23 : ಅದೊಂದು ವಿನೂತನ ಕಾರ್ಯಕ್ರಮ, ಯಕ್ಷಗಾನದ ಹಳೆಯ ರಾಗಗಳ ಇಂಪು ಮೇಳೈಸಿತ್ತು. ಸಮಯ ಮಿತಿ ಹೊಡೆತಕ್ಕೆ ಸಿಕ್ಕಿ ಕಲಬೆರಕೆಗೆ ಒಳಗಾಗಿರುವ ರಾಗಗಳು ಬಿಡಿ ಬಿಡಿಯಾಗಿ ಹೊರಬಂದವು. ಅಲ್ಲಿ ತಪ್ಪುಗಳಿಗೆ ಕ್ಷಮಾಪಣೆ ಇತ್ತು, ಹೊಸ ಪ್ರಯೋಗಗಳಿಗೆ ಸಮರ್ಥನೆಯಿತ್ತು. ಯಕ್ಷಗಾನದ ದಿಗ್ಗಜರ ಹಾಜರಿಯಲ್ಲಿ ಪ್ರೇಕ್ಷಕರು ಚಿಂತಕರಾಗಿ ಬದಲಾಗಿದ್ದರು.
ಹೌದು.. ಶನಿವಾರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 'ಪದ ಕೇಳ್ವಾ ಬನ್ನಿ' ನಿಜ ಯಕ್ಷ ಪ್ರೇಕ್ಷಕರನ್ನು ಚಿಂತನೆಯ ಒರೆಗಲ್ಲಿಗೆ ಹಚ್ಚಿತು. ಒಂದು ಕಡೆ ಭೀಮ್ ಪಲಾಸ್, ಮಧ್ಯಮವತಿ, ಸುರುಟಿ, ಶ್ರೀ ಮುಂತಾದ ರಾಗಗಳನ್ನು ಹಾಡುತ್ತ ಸುಬ್ರಹ್ಮಣ್ಯ ಧಾರೇಶ್ವರರು ರಾಗಗಳ ವಿವರಣೆ ನೀಡುತ್ತಿದ್ದರು.[ಶಿರಸಿː ಕಳವೆಯಲ್ಲಿ ಒಂದು ದಿನದ ಯಕ್ಷಗಾನ ಕಾರ್ಯಾಗಾರ]
ರಾಗದ ಇತಿಹಾಸ, ಯಾವಾಗ ಬಳಕೆಯಲ್ಲಿತ್ತು? ಮರೆಯಾಗಲು ಕಾರಣವೇನು? ಈಗ ಎಲ್ಲಿ ಬೆರೆತುಕೊಂಡಿದೆ? ಈ ರೀತಿಯ ವಿಚಾರಗಳನ್ನು ವಿವರವಾಗಿ ತಿಳಿಸಿಕೊಟ್ಟವರು ಯಕ್ಷ ಜಂಗಮ ಹೊಸ್ತೋಟ ಮಂಜುನಾಥ ಭಾಗವತರು.
ಜಾನಪದವೇ ಬೇರೆ, ಯಕ್ಷಗಾನವೇ ಬೇರೆ. ಇದನ್ನು ನಾನು ಮೊದಲಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದೇನೆ. ಯಕ್ಷಗಾನ ಕಲಾವಿದರಿಗೆ ಸ್ಟಾರ್ ಇಮೇಜ್ ಬಂದಿದೆ. ಪ್ರಶಸ್ತಿ ಪುರಸ್ಕಾರಗಳು ದೊರೆಯುತ್ತಿವೆ. ಆದರೆ ಕಲಾವಿದರು ಕಲಿಕೆಯನ್ನು ಬಿಟ್ಟಿದ್ದಾರೆ. ಹಳೆಯದನ್ನು ಹೊಸದಕ್ಕೆ ಬದಲಾಯಿಸಿ ನೀಡುವ ಬದಲು ತಿರುಚಿ ನೀಡುತ್ತಿದ್ದಾರೆ ಎಂದು ಹೊಸ್ತೋಟ ಭಾಗವತರು ಸದ್ಯದ ಸ್ಥಿತಿ ತೆರೆದಿಟ್ಟರು.
ಇದೇ ರೀತಿ ಮುಂದುವರಿದರೆ ಯಕ್ಷಗಾನದ ಚಿತ್ರಣವೇ ಬದಲಾಗುತ್ತದೆ, ಈಗಲೇ ಅನೇಕ ರಾಗಗಳು, ಮಟ್ಟುಗಳು ಮಾಯವಾಗಿವೆ. ಅವಕ್ಕೆ ಮತ್ತೆ ಜನ್ಮ ನೀಡುಲು ಇಂಥ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಆಯೋಜಕರಾದ ಪತ್ರಕರ್ತ ರಾಘವೇಂದ್ರ ಭಟ್ ಮತ್ತು ಐಟಿ ಉದ್ಯೋಗಿ ಪ್ರಶಾಂತ್ ವರ್ಧನ್ ಅವರನ್ನು ಸ್ಮರಿಸಿದರು.
'ನಾನು ನಿವೃತ್ತಿಯಾಗಿದ್ದೇನೆ ನಿಜ, ಅದಕ್ಕೆ ಅನೇಕ ಕಾರಣಗಳಿವೆ, ಕೆಲವೊಮ್ಮೆ ಯಕ್ಷಗಾನಕ್ಕಾದ ಅಪಚಾರ ನೋಡಿ ಕಟುವಾಗಿಯೂ ಮಾತನಾಡಿದ್ದೇನೆ. ಯಕ್ಷಗಾನಕ್ಕಿಂತ ನಾವೇ ದೊಡ್ಡವರು ಎಂದು ಹೇಳಿಕೊಳ್ಳುವ ಡೋಂಗಿ ಕಲಾವಿದರು ರಂಗದಲ್ಲಿ ಹೆಚ್ಚಾಗುತ್ತಿರುವುದು ದುರ್ದೈವ' ಎಂದು ವಿಷಾದ ತೋಡಿಕೊಂಡವರು ಸುಬ್ರಹ್ಮಣ್ಯ ಧಾರೇಶ್ವರ.
ತಪ್ಪು ಮಾಡಿದರೆ ಒಪ್ಪಿಕೊಂಡು ಯಾಕೆ ಚಪ್ಪಾಳೆ ಹೊಡೆಯುತ್ತಿರಿ. ಕಸರತ್ತುಗಳು, ಕಣ್ಣು ಹುಬ್ಬು ಕುಣಿಸುವುದು, ಏರುಗತಿಯ ಹಾಡೇ ಯಕ್ಷಗಾನ ಎಂಬಂತಾಗಿದೆ. ನಮ್ಮ ತಪ್ಪುಗಳನ್ನು ಸುಮ್ಮನೇ ಒಪ್ಪಿಕೊಳ್ಳಬೇಡಿ. ಚೌಕಿಗೆ ಬಂದು ಕ್ಲಾಸ್ ತೆಗೆದುಕೊಳ್ಳಿ ಎಂದು ಬಹಿರಂಗವಾಗಿ ಹೇಳಿದ ಯಕ್ಷ ನಿರ್ದೇಶಕನ ಕಣ್ಣಲ್ಲಿ ನಿಜ ಕಳಕಳಿಯಿತ್ತು.
ಸರ್ವೇಶ್ವರ ಅವರ ಏರು ಕಂಠದ ಹಾಡುಗಾರಿಕೆ, ಶಂಕರ ಭಾಗವತ, ಪಾಠಕ್ ರ ಮದ್ದಳೆ ಪೆಟ್ಟು ಕಲಾಭಿಮಾನಿಗಳನ್ನು ರಂಜಿಸಿತು. ಪ್ರೇಕ್ಷಕರ ಸಾಲಲ್ಲಿ ದಿಗ್ಗಜರಾದ ಮಂಟಪ ಪ್ರಭಾಕರ ಉಪಾಧ್ಯಾಯ, ಕೆಪ್ಪೆಕೆರೆ ಭಾಗವತರು ಕುಳಿತಿದ್ದರು. ಚಿತ್ರನಟ ನಿರ್ನಳ್ಳಿ ರಾಮಕೃಷ್ಣ ಆಗಮಿಸಿದ್ದರು.