ದೊಡ್ಡಗೌಡರ ಮುಖ್ಯಮಂತ್ರಿ ಧರಂಸಿಂಗ್! ಅದು ಪರಿಸ್ಥಿತಿಯ ಪಿತೂರಿಯ ಕಾಲ
ಜೆಡಿಎಸ್ ಬೆಂಬಲದೊಂದಿಗೆ ಸಿಎಂ ಆಗಿದ್ದ ಧರಂಸಿಂಗ್, ಅಧಿಕಾರಕ್ಕೇರಿದ್ದ ದಿನದಿಂದ ಸಿಎಂ ಹುದ್ದೆಗೆ ರಾಜೀನಾಮೆ ನೀಡುವವರೆಗೂ ದೇವೇಗೌಡರ ಮುಖ್ಯಮಂತ್ರಿಯೆಂದೇ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದರು.
ಮಾಜಿ ಕರ್ನಾಟಕದ ಮುಖ್ಯಮಂತ್ರಿ, ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ಎನ್ ಧರಂಸಿಂಗ್ ಬೆಂಗಳೂರಿನಲ್ಲಿ ಗುರುವಾರ (ಜುಲೈ 27) ವಿಧಿವಶರಾಗಿದ್ದಾರೆ. ರಾಜ್ಯದ ಹದಿನೇಳನೇ ಮುಖ್ಯಮಂತ್ರಿಯಾಗಿ ಧರಂಸಿಂಗ್ ಸುಮಾರು ಒಂದೂ ಮುಕ್ಕಾಲು ವರ್ಷ ರಾಜ್ಯವನ್ನಾಳಿದ್ದರು.
ಜೆಡಿಎಸ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್ , ಅಧಿಕಾರಕ್ಕೇರಿದ್ದ ದಿನದಿಂದ ಸಿಎಂ ಹುದ್ದೆಗೆ ರಾಜೀನಾಮೆ ನೀಡುವವರೆಗೂ ದೇವೇಗೌಡರ ಮುಖ್ಯಮಂತ್ರಿಯೆಂದೇ ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದನ್ನು ಈಗ ಸ್ಮರಿಸಿಕೊಳ್ಳಬಹುದಾಗಿದೆ.
ಮಾಜಿ ಮುಖ್ಯಮಂತ್ರಿ ಅಜಾತಶತ್ರು ಧರಂ ಸಿಂಗ್ ವ್ಯಕ್ತಿಚಿತ್ರ
2004ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಕ್ಕೆ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ 79, ಕಾಂಗ್ರೆಸ್ 65 ಮತ್ತು ಜೆಡಿಎಸ್ 58 ಕ್ಷೇತ್ರದಲ್ಲಿ ಜಯಸಾಧಿಸಿತ್ತು. ಐದತ್ತು ಸೀಟು ಇಟ್ಟೂಕೊಂಡೇ ಕಿಂಗ್ ಮೇಕರ್ ಆಗುವ ಜೆಡಿಎಸ್ ಪಕ್ಷದ ಬೆಂಬಲ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅನಿವಾರ್ಯವಾಗಿತ್ತು.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಸಂಪರ್ಕಿಸಿ ಅವರ ಪಕ್ಷದ ಬೆಂಬಲವನ್ನು ಕೇಳಿದ್ದರು. ತಾನು ಸೂಚಿಸುವ ವ್ಯಕ್ತಿಯೇ ಸಿಎಂ ಆಗುಬೇಕು ಎನ್ನುವ ಷರತ್ತನ್ನಿಟ್ಟು ಎಸ್ ಎಂ ಕೃಷ್ಣ ಅವರನ್ನು ಸಿಎಂ ರೇಸಿನಿಂದ ಹಿಂದಕ್ಕೆ ಸರಿಸಿ, ಮೃಧು ಸ್ವಭಾವದ ಧರಂಸಿಂಗ್ ಅವರನ್ನು ಸಿಎಂ ಮಾಡಿದ ಕೀರ್ತಿ ದೇವೇಗೌಡರಿಗೆ ಸಲ್ಲಬೇಕು ಎಂದರೆ ತಪ್ಪಾಗಲಾರದು.
ಧರಂಸಿಂಗ್ ಅಧಿಕಾರಕ್ಕೆ ಬಂದ ನಂತರ ಸಂಪುಟ ವಿಸ್ತರಣೆಯಲ್ಲೂ ದೇವೇಗೌಡರ ಅಣತಿಯಂತೇ ಧರಂ ನಡೆಯಬೇಕಾಯಿತು. ಆಯಕಟ್ಟಿನ ಹಣಕಾಸು, ಲೋಕೋಪಯೋಗಿ, ಇಂಧನ, ಸಕ್ಕರೆ, ಆರೋಗ್ಯ ಖಾತೆ ಜೆಡಿಎಸ್ ಪಾಲಾಯಿತು. ಧರಂ ಸ್ವಪಕ್ಷೀಯರಿಂದಲೇ ಟೀಕೆಗೊಳಗಾಗಬೇಕಾಯಿತು. ಮುಂದೆ ಓದಿ..
ಗೌಡರ ಅನುಮತಿಯಿಲ್ಲದೇ ಕಡತಗಳ ಅನುಮೋದಯಿಲ್ಲ
ಧರಂಸಿಂಗ್ ಅಧಿಕಾರದಲ್ಲಿ ಇದ್ದಷ್ಟೂ ದಿನ ದೇವೇಗೌಡರ ಅನುಮತಿಯಿಲ್ಲದೇ ಒಂದೂ ಕಡತಗಳು ಅನುಮೋದನೆಗೊಳ್ಳುತ್ತಿರಲಿಲ್ಲ. ಧರಂಸಿಂಗ್ ಸರಕಾರದ ಶಕ್ತಿಕೇಂದ್ರ ವಿಧಾನಸೌಧವಲ್ಲ ಬದಲಿಗೆ ಬೆಂಗಳೂರಿನ ಪದ್ಮನಾಭನಗರ ಎನ್ನುವ ಮಾತು ಚಾಲ್ತಿಯಲಿದ್ದವು.
ಧರಂ ಸರಕಾರಕ್ಕೆ ಸ್ವಪಕ್ಷೀಯರಿಂದಲೇ ವಿರೋಧ
ಮೊದಲ ಕೆಲವು ತಿಂಗಳುಗಳ ಕಾಲ ಸರಾಗವಾಗಿ ಸಾಗಿದ ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಸ್ವಪಕ್ಷೀಯರಿಂದಲೇ ವಿರೋಧವಾಗಿದ್ದು ಗೌಪ್ಯವಾಗಿ ಉಳಿದಿರಲಿಲ್ಲ. ದೇವೇಗೌಡರೇ ಕರ್ನಾಟಕ ಸರಕಾರದ ಅಸಲಿ ಮುಖ್ಯಮಂತ್ರಿ ಎಂದು ಜನರು ಆಡಿಕೊಳ್ಳುತ್ತಿದ್ದರು.
ಗೌಡರ ಪದ್ಮನಾಭನಗರ ನಿವಾಸಕ್ಕೆ ಧರಂ ಭೇಟಿ
ವಾರಕ್ಕೆ ಕನಿಷ್ಠ ಒಂದೆರಡು ಬಾರಿಯಾದರೂ ಧರಂಸಿಂಗ್ ಗೌಡರ ಪದ್ಮನಾಭನಗರ ನಿವಾಸಕ್ಕೆ ಬರುತ್ತಿದ್ದದ್ದು ಆ ಸಮಯದಲ್ಲಿ ದೊಡ್ಡ ಸುದ್ದಿಯಾಗಿದ್ದವು. ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಗೊಂದಲ ಬಹಿರಂಗವಾದಾಗ ಧರಂಸಿಂಗ್, ಗೌಡರ ಮನೆಗೆ ದೌಡಾಯಿಸುತ್ತಿದ್ದರು ಎನ್ನಲಾಗುತ್ತಿತ್ತು.
ಧರಂಸಿಂಗ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದ ಜೆಡಿಎಸ್
ಹಾಗೂ, ಹೀಗೂ ಒಂದುವರೆ ವರ್ಷ ಸಾಗಿದ್ದ ಧರಂಸಿಂಗ್ ಸರಕಾರ ನಂತರದ ದಿನಗಳಲ್ಲಿ ಯಾವಾಗ ಬೇಕಾದರೂ ಪತನಗೊಳ್ಳಬಹುದು ಎನ್ನುವ ಹಂತಕ್ಕೆ ಬಂದಿತ್ತು. ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಟ್ವೆಂಟಿ ಟ್ವೆಂಟಿ ಮಾತುಕತೆ ಫಲಪ್ರದವಾದ ನಂತರ ಜೆಡಿಎಸ್, ಧರಂಸಿಂಗ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆಯಿತು.
ಬೇಸರ ವ್ಯಕ್ತಪಡಿಸಿದ್ದ ದೇವೇಗೌಡರು
ಧರಂಸಿಂಗ್ ಮತ್ತು ಸದಾನಂದ ಗೌಡರ ಸರಕಾರದ ಅವಧಿಯಲ್ಲಿ ಎಲ್ಲವೂ ನನ್ನ ಅಣತಿಯಂತೇ ನಡೆಯುತ್ತದೆ ಎನ್ನುವ ಮಾತು ಕೇಳಿ ಬರುತ್ತಿದ್ದ ಬಗ್ಗೆ ದೇವೇಗೌಡರೂ ಬೇಸರ ವ್ಯಕ್ತಪಡಿಸಿದ್ದರು. ನನ್ನನ್ನು ವಿನಾ ಕಾರಣ ಸ್ಕೇಪ್ ಗೋಟ್ ಮಾಡಲಾಗುತ್ತಿದೆ ಎಂದು ಗೌಡ್ರು ಹೇಳಿಕೆ ನೀಡಿದ್ದರು.
ಧರಂಸಿಂಗ್ ಆತ್ಮಕ್ಕೆ ಶಾಂತಿಸಿಗಲಿ
ಯಾವುದೇ ರಾಜಕಾರಣಿಗಳಿಗೆ ಮುಖ್ಯಮಂತ್ರಿಯಾಗ ಬೇಕು ಎನ್ನುವ ಕನಸು ಇರುವುದು ಸಹಜ. ಆದರೆ ದಿವಂಗತ ಧರಂಸಿಂಗ್ ತಾನು ಅಧಿಕಾರದಲ್ಲಿದ್ದ 610 ದಿನ (28.05.2004 - 28.01.2006) ದೇವೇಗೌಡರ ಅಣತಿಯಂತೆಯೇ ನಡೆಯಬೇಕಾಗಿದ್ದದ್ದು ಧರಂಸಿಂಗ್ ರಾಜಕೀಯ ಜೀವನದ ಗತಇತಿಹಾಸ. ಧರಂಸಿಂಗ್ ಆತ್ಮಕ್ಕೆ ಶಾಂತಿಸಿಗಲಿ.