ಜನರ ಮನ ಗೆಲ್ಲಲು ಅಂಕಿ ಅಂಶಗಳೇ ಆಧಾರ: ಅಮಿತ್ ಶಾ
ಬೆಂಗಳೂರು, ಏ. 3: ಬಿಜೆಪಿ ಸರ್ಕಾರ ಕಳೆದ 10 ತಿಂಗಳಿನಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕಂಡುಬಂದಿರುವ ಗಮನಾರ್ಹ ಬೆಳವಣಿಗೆ ಮಹತ್ತರ ಸಾಧನೆಯಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾರ್ಯಕರ್ತರು ಪಕ್ಷ ಬಲಪಡಿಸಲು ಇನ್ನು ಹೆಚ್ಚಿನ ಕೆಲಸ ಮಾಡಬೇಕಾಗಿದೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಹೆಜ್ಜೆ ಇಡಬೇಕು ಎಂದು ತಿಳಿಸಿದರು.[ಬೆಂಗಳೂರಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆಗೆ ಚಾಲನೆ]
ಭೂ ಸ್ವಾಧೀನ ಕಾಯ್ದೆಯ ಅನಿವಾರ್ಯತೆ
ವಿರೋಧ ಪಕ್ಷಗಳು ಅಡ್ಡಿ ವ್ಯಕ್ತಪಡಿಸುತ್ತಿರುವ ಭೂ ಸ್ವಾಧೀನ ಮಸೂದೆ ಕುರುತಾಗಿ ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಯಿತು. ಮಸೂದೆಯ ಮಂಡನೆ ನಂತರ ದೇಶಕ್ಕಾಗಬಹುದಾದ ಲಾಭಗಳನ್ನು ತಿಳಿಸುವ ಬುಕ್ ಲೆಟ್ ಗಳನ್ನು ವಿತರಿಸಲಾಯಿತು.
ಭೂ ಸ್ವಾಧೀನ ಕಾಯ್ದೆ ಜನವಿರೋಧಿಯಲ್ಲ. ಇದು ಅಭಿವೃದ್ಧಿ ಪೂರಕ ಎಂದು ದೇಶಕ್ಕೆ ತಿಳಿಸಬೇಕಾಗಿದೆ. ಕಾರ್ಯಕರ್ತರು ಜನರಿಗೆ ಇದನ್ನು ಮನದಟ್ಟು ಮಾಡಿಕೊಡಬೇಕು ಎಂದು ಶಾ ತಿಳಿಸಿದರು.[ಬಿಜೆಪಿ ಕಾರ್ಯಕಾರಣಿಯಲ್ಲಿ ಏನೇನಾಯ್ತು?]
ಪಕ್ಷ ಮತದಾರರ ಮನ ಗೆಲ್ಲಬೇಕಾಗಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದ ಚುನಾವಣೆ ನಮ್ಮ ಮುಂದಿರುವ ಸವಾಲು. ಒಂದು ಸರಳ ಸೂತ್ರದ ಮೂಲಕ ಒಗ್ಗೂಡಿ ಕೆಲಸ ಮಾಡಿದರೆ ಎರಡು ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಶಾ ಹೇಳಿದರು.
ನಮ್ಮ ಎಲ್ಲ ಚುನಾವಣೆ ಕ್ಯಾಂಪೆನ್ ಗಳು ಅಂಕಿ ಅಂಶದ ಮೇಲೆ ಆಧಾರವಾಗಿರಬೇಕು. ಪಕ್ಷ ಅಧಿಕಾರಕ್ಕೆ ಬಂದ ನಂತರ ಆಗಿರುವ ಬೆಳವಣಿಗೆಯನ್ನು ಎಲ್ಲರಿಗೂ ತಿಳಿಸಬೇಕಾದ ಜವಾಬ್ದಾರಿ ನಾಯಕರು ಮತ್ತು ಕಾರ್ಯಕರ್ತರ ಮೇಲಿದೆ ಎಂದು ಅಮಿತ್ ಶಾ ಹೇಳಿದರು.