ಆರೇ ಗಂಟೆಯಲ್ಲಿ ಸ್ವಚ್ಛವಾಯಿತು ಪುರಾತನ ಪುಷ್ಕರಣಿ
ಬೆಂಗಳೂರು, ಅ. 15 : ಅಲ್ಲಿಗೆ ಮೊದಲು ಕಾಲಿಡಲು ಸಾಧ್ಯವಾಗುತ್ತಿರಲಿಲ್ಲ. ಪುರಾತನ ಪುಷ್ಕರಣಿಯೊಂದಿತ್ತು ಎಂಬ ಕುರುಹು ಮಾತ್ರ ಕಾಣುತ್ತಿತ್ತು. ಕಸ-ಕಡ್ಡಿ ಮುಳ್ಳುಗಳಿಂದ ತುಂಬಿದ್ದ ಪುಷ್ಕರಣಿಗೆ ಮಾನವನ ಸ್ಪರ್ಶವಾಗಿ ಅದಾವ ಕಾಲವಾಗಿತ್ತೋ? ಆ ಪುಷ್ಕರಣಿಗೆ ವಿದ್ಯಾರ್ಥಿಗಳ ತಂಡವೊಂದು ಮರುಜೀವ ನೀಡಿದೆ. ಸ್ವಚ್ಛ ಭಾರತ ಕಲ್ಪನೆ ಸಾಕಾರ ಕಂಡಿದೆ.
ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರೇಪಿತರಾದ ವಿದ್ಯಾರ್ಥಿಗಳು ಕಸ ಕಡ್ಡಿಗಳಿಂದ ತುಂಬಿದ್ದ ಪುಷ್ಕರಣಿಯನ್ನು ಕೇವಲ ಆರೇ ಗಂಟೆಯಲ್ಲಿ ಸಂಪೂರ್ಣ ಸ್ವಚ್ಛ ಮಾಡಿದ್ದಾರೆ. ಬೆಂಗಳೂರಿನ ಸೌಂದರ್ಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅನೇಕ ವರ್ಷದಿಂದ ಪಾಳುಬಿದ್ದಿದ್ದ ಪುಷ್ಕರಣಿಯೊಂದನ್ನು ಶುದ್ಧ ಮಾಡಿದ್ದಾರೆ.
ಪುರಾತನ ಕಲ್ಯಾಣಿಗಳು, ಪುಷ್ಕರಣಿಗಳು, ಇತಿಹಾಸ ಪ್ರಸಿದ್ಧ ಕೆರೆಗಳು ಒಂದೊಂದಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಲದಲ್ಲಿ ವಿದ್ಯಾರ್ಥಿಗಳ ತಂಡವೊಂದು ಮಾದರಿ ಕೆಲಸ ಮಾಡಿದೆ. ರಾಜಧಾನಿ ಬೆಂಗಳೂರಿನ ಮಗ್ಗುಲಲ್ಲಿಯೇ ಇಂಥದ್ದೊಂದು ಕೆಲಸ ಸದ್ದಿಲ್ಲದೇ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಬಳಿಯ ದಾಸನಪುರ ಪುರಾತನ ಪುಷ್ಕರಣಿಯನ್ನು ವಿದ್ಯಾರ್ಥಿಗಳು ಸ್ವಚ್ಛಮಾಡಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆ, ಆರ್ಟ್ ಆಫ್ ಲಿವಿಂಗ್ ನ ನಾಯಕತ್ವ ತರಬೇತಿಯಡಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಮಹತ್ ಕಾರ್ಯವೊಂದನ್ನು ಸಾಧಿಸಿದ್ದಾರೆ.[ಬೆಂಗಳೂರು ಯುವಕರ ಸ್ವಚ್ಛ ಭಾರತ ಕನಸು]
ಅಕ್ಟೋಬರ್ 8 ರಂದು ಸೌಂದರ್ಯ ಪಿಯು ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮತ್ತು ಮೂರು ಜನ ಸ್ವಯಂ ಸೇವಕರು ನಿರಂತರ ಶ್ರಮಿಸಿ ಕಸ ಕಡ್ಡಿಗಳಿಂದ ತುಂಬಿದ್ದ ಪುಷ್ಕರಣಿಯನ್ನು ಸ್ವಚ್ಛ ಮಾಡಿ ಜಾಗವನ್ನು ಸುಂದರ ಪ್ರವಾಸಿ ತಾಣವನ್ನಾಗಿಸಿದ್ದಾರೆ.
ಪಾಳುಬಿದ್ದ ಪುಷ್ಕರಣಿ
ಪುಷ್ಕರಣಿ ಮೊದಲಿದ್ದ ಸ್ಥಿತಿ.
ಸ್ವಚ್ಛತಾ ಕಾರ್ಯ ನಡೆಸಿದ ವಿದ್ಯಾರ್ಥಿಗಳು
ಅಕ್ಟೋಬರ್ 8 ರಂದು ಸ್ವಚ್ಛತಾ ಕಾರ್ಯ ನಡೆಸಿದ ವಿದ್ಯಾರ್ಥಿಗಳು.
ನಿರಂತರ ಶ್ರಮ
ಕಸ ಕಡ್ಡಿಗಳನ್ನು ತೆಗೆದ ಸ್ವಯಂ ಸೇವಕರು.
ಸಂಪೂರ್ಣ ಸ್ವಚ್ಛವಾದ ಪುಷ್ಕರಣಿ
ಕಸ ಕಡ್ಡಿಗಳಿಂದ ತುಂಬಿದ್ದ ಪುಷ್ಕರಣಿ ಶುದ್ಧ ಮಾಡಿದ ಮೇಲೆ.
ವಿದ್ಯಾರ್ಥಿಗಳ ತಂಡ
ಪುಷ್ಕರಣಿ ಶುದ್ಧಮಾಡಿದ ವಿದ್ಯಾರ್ಥಿಗಳ ತಂಡ