ಸುಡುತ್ತಿದೆ ಬೇಸಿಗೆ, ಉತ್ತರ ಕರ್ನಾಟಕ ಕೊತಕೊತ
ಬೆಂಗಳೂರು, ಮಾರ್ಚ್, 22: ಅಬ್ಬಾ ಏನು ಸೆಕೆ, ಈಗಲೇ ಹೀಗಾದರೆ ಮುಂದೆ ಕತೆಯೇನು? ಏಪ್ರಿಲ್-ಮೇ ತಿಂಗಳಲ್ಲಿ ದಿನ ಕಳೆಯುವುದು ಹೇಗೇ? ಇದು ಇಡೀ ರಾಜ್ಯದಾದ್ಯಂತ ಕೇಳಿ ಬರುತ್ತಿರುವ ಮಾತು. ಕಲಬುರಗಿ, ಚಿತ್ರದುರ್ಗ ಮತ್ತು ಗದಗ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ.
ಕಲಬುರಗಿಯಲ್ಲಿ ಅತಿಹೆಚ್ಚು ಅಂದರೆ 41 ಡಿಗ್ರಿ ಉಷ್ಣಾಂಶ ದಾಖಲಾಗಿದ್ದರೆ, ದಾವಣಗೆರೆಯಲ್ಲಿ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮಂಗಳವಾರ 38 ಡಿಗ್ರಿ ದಾಖಲಾಗಿದ್ದು ಗಾಳಿಯೇ ಸುಡುತ್ತಿದೆ.[ನೀರಿಗೆ ಬರ, ಬೆಂಗಳೂರಿಗೆ ವಾರಕ್ಕೊಮ್ಮೆ ನೀರು]
ರಾಜ್ಯದ ಬಹುತೇಕ ಕಡೆ ಸೂರ್ಯ ಮತ್ತಷ್ಟು ಶಾಖ ಬೀರಲಿದ್ದು ಉಷ್ಣಾಂಶ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಎಲ್ಲಡೆ ಉಷ್ಣಾಂಶ ಇನ್ನಷ್ಟು ಏರಿಕೆಯಾಗಲಿದೆ. ಇನ್ನೊಂದೆಡೆ ಜಲಾಶಯಗಳ ಮಟ್ಟ ಕುಸಿದಿದೆ. ಅಂತರ್ಜಲ ನಾಪತ್ತೆಯಾಗುತ್ತಿದೆ. ಹೀಗೆ ಮುಂದುವರಿದರೆ ಕರ್ನಾಟಕಕ್ಕೆ ಬೇಸಿಗೆ ಭೀಕರ ಆಗುವುದರಲ್ಲಿ ಅನುಮಾನವಿಲ್ಲ.
ದಾಖಲೆ ಬರೆದ ಚಿತ್ರದುರ್ಗ
ಕೋಟೆ ನಾಡಲ್ಲಿ ಉಷ್ಣಾಂಶ ಶನಿವಾರ 39.5 ಡಿಗ್ರಿ ಸೆಲ್ಸಿಯಸ್ ದಾಖಲಿಸಿ 80 ವರ್ಷದ ದಾಖಲೆಯನ್ನು ಮುರಿದಿದೆ. ಭಾನುವಾರ 39 ಡಿಗ್ರಿ ಸೆಲ್ಸಿಯಸ್ ಇತ್ತು. ಈ ಹಿಂದೆ 1925ರ ಮಾರ್ಚ್ ಅಂತ್ಯದ ವೇಳೆ 38.9 ಡಿಗ್ರಿ ಸೆಲ್ಸಿಯಸ್ ತಲುಪಿದ್ದು ದಾಖಲೆಯಾಗಿತ್ತು
ಉತ್ತರ ಕರ್ನಾಟಕ ಸುಡುತ್ತಿದೆ
ಕಲಬುರಗಿ, ಬಿಜಾಪುರ, ರಾಯಚೂರು, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳು ಸುಡುತ್ತಿವೆ. ರಾಯಚೂರಿನಲ್ಲಿ ಭಾನುವಾರ ಗರಿಷ್ಠ 41.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ಕಾದ ಕರಾವಳಿ
ಕರಾವಳಿ ಜಿಲ್ಲೆಗಳಲ್ಲೂ ಮೈ ಸುಡುತ್ತಿದೆ. ಮಂಗಳೂರು, ಕಾರವಾರ, ಉಡುಪಿ ಜಿಲ್ಲೆಗಳಲ್ಲೂ 40 ಡಿಗ್ರಿ ಸೆಲ್ಸಿಯಸ್ ಸಮೀಪಕ್ಕೆ ಉಷ್ಣತೆ ತಲುಪಿದೆ.
ಮಳೆ ಸಾಧ್ಯತೆ
ಉಷ್ಣಾಂಶ ತೀವ್ರ ತೆರವಾಗಿ ಏರಿಕೆಯಾಗುತ್ತಿದ್ದರೂ ಮಳೆ ಬೀಳುವ ಸಾಧ್ಯತೆ ಕಡಿಮೆಯಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ ಇದ್ದರೂ ಉತ್ತರ ಕರ್ನಾಟಕದ ಜನರಿಗೆ ಮಳೆ ಭಾಗ್ಯ ಸದ್ಯಕ್ಕೆ ಇಲ್ಲ.
ಬೆಂಗಳೂರು
ಬೆಂಗಳೂರಲ್ಲಿ ಕಳೆದ ವಾರ ತುಂತುರು ಮಳೆಯಾಗಿದ ನಂತರ ಉಷ್ಣತೆ ದ್ವಿಗುಣಗೊಂಡಿದೆ. ಹವಾಮಾನ ಇಲಾಖೆ ಹೇಳುವಂತೆ ಬೆಂಗಳೂರಲ್ಲೂ ಮಳೆ ಸಾಧ್ಯತೆ ಇಲ್ಲ.
ಸಾಮಾನ್ಯಕ್ಕಿಂತ ಅಧಿಕ
ಹವಾಮಾನ ಇಲಾಖೆ ವರದಿಯನ್ನು ನೋಡಿದರೆ ಎಲ್ಲ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಒಂದೆರಡು ಡಿಗ್ರಿ ಅಧಿಕ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು, ಮೈಸೂರು ಸಹ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಎರಡು ಡಿಗ್ರಿ ಹೆಚ್ಚಿನ ಉಷ್ಣಾಂಶ ದಾಖಲಿಸಿವೆ.