ಸಂಗೊಳ್ಳಿ ರಾಯಣ್ಣ ನೇಣಿಗೆ ಹಾಕಿದ ಜಾಗದಲ್ಲಿನ ಹನುಮನ ಮೂರ್ತಿ ಕಣ್ತೆರೆದಾಗ!
ಬೆಳಗಾವಿ, ಆಗಸ್ಟ್ 20: ಗಡಿನಾಡ ಜಿಲ್ಲೆ ಬೆಳಗಾವಿಯ ಖಾನಾಪುರ ತಾಲೂಕಿನ ನಂದಗಡ ಎನ್ನುವ ಗ್ರಾಮದಲ್ಲಿ ವಿಸ್ಮಯಕಾರಿ ಘಟನೆಯೊಂದು ವರದಿಯಾಗಿದೆ.
ಗ್ರಾಮಸ್ಥರು ಚಿಕ್ಕದಾಗಿ ನಿರ್ಮಿಸಿದ್ದ ಆಂಜನೇಯನ ಗುಡಿಯಲ್ಲಿನ ವಿಗ್ರಹದ ಕಣ್ಣು ಕಳೆದ ರಾತ್ರಿಯಿಂದ ಮನುಷ್ಯನ ಕಣ್ಣಿನಂತೆ ಗೋಚರಿಸಲಾರಂಭಿಸಿದೆ.
ಈ ಹನುಮನ ಗುಡಿ ವೀರ ಸೇನಾನಿ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ನೇಣಿಗೆ ಹಾಕಿದ ಆಲದಮರದ ಕೆಳಗೆ ಇರುವುದು ವಿಶೇಷ. (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪರಿಚಯ)
ಆಂಜನೇಯ ಕಣ್ತೆತೆರೆದಿರುವ ವಿಷಯ ಊರೆಲ್ಲಾ ಸುದ್ದಿಯಾಗಿದ್ದು, ಜನರು ತಂಡೋಪತಂಡವಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಗ್ರಾಮದ ಯುವಕರು ಆಂಜನೇಯನ ವಿಗ್ರಹವನ್ನು ಗುಡಿಯಿಂದ ಹೊರ ತೆಗೆದು ಬೇರೆ ಕಡೆ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ.
ನಂದಗಡ ಗ್ರಾಮದ ಜನರು, ಗ್ರಾಮದ ಒಳಿತಿಗಾಗಿ ಈ ಆಲದಮರದ ಅಡಿಯಲ್ಲಿ ಸಣ್ಣದೊಂದು ಗುಡಿಯನ್ನು ಕಟ್ಟಿ ಮೂರು ಅಡಿ ಎತ್ತರದ ಕಲ್ಲಿನ ಆಂಜನೇಯನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದರು.
ಬುಧವಾರ (ಆ 19) ಸಂಜೆಯಿಂದ ಆಂಜನೇಯನ ವಿಗ್ರಹದಲ್ಲಿ ಹಲವು ಬದಲಾವಣೆಗಳು ಕಂಡುಬಂದಿವೆ. ಮನುಷ್ಯನ ಕಣ್ಣುಗಳಂತೆ ಕಣ್ಣಗಲಿಸಿದ ರೂಪದಲ್ಲಿ ವಿಗ್ರಹ ಗೋಚರಿಸುತ್ತಿದೆ.