ಜೆಡಿಎಸ್ ಕಚೇರಿಯಲ್ಲಿ ಗೌಡರಿಂದ ಸುದರ್ಶನ ಹೋಮ
ಬೆಂಗಳೂರು, ಮಾ.28: ಜೆಡಿಎಸ್ ನೂತನ ಕಚೇರಿಯಲ್ಲಿ ವರಿಷ್ಠ ದೇವೇಗೌಡರು ಸುದರ್ಶನ ಹೋಮ ನಡೆಸಿದ್ದಾರೆ. ಶನಿವಾರ ಬೆಳಗ್ಗೆಯಿಂದಲೇ ಪೂಜೆಯಲ್ಲಿ ಪಾಲ್ಗೊಂಡ ಗೌಡರು ಸಕಲ ಸಂಕಷ್ಟ ನಿವಾರಣೆಗಾಗಿ ಪ್ರಾರ್ಥಿಸಿದರು.
ಕಚೇರಿಗೆ ಜಯಪ್ರಕಾಶ್ ನಾರಾಯಣ್ ಅವರ ಹೆಸರಿಡಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಅಂತೆಯೇ ರಾಮನವಮಿ ವಿಶೇಷ ಪೂಜೆ ಹಿನ್ನೆಲೆಯಲ್ಲಿ ಹೋಮ ನಡೆಸಲಾಯಿತು ಎಂದು ತಿಳಿಸಿದರು. ಕಟ್ಟಡ ನಿರ್ಮಾಣಕ್ಕೆ ನಕ್ಷೆ ತಯಾರಿಸಿ ನಂತರ ನಿರ್ಮಾಣ ಕಾರ್ಯ ಕೈಗೊಳ್ಳುವುದಾಗಿ ಹೇಳಿದರು. ಶಾಸಕ ಸುರೇಶ್ಬಾಬು, ಎಂಎಲ್ಸಿ ಶರವಣ, ತಿಮ್ಮೇಗೌಡ, ಪ್ರಕಾಶ್, ಪಾಲಿಕೆ ಸದಸ್ಯರು ಮತ್ತಿತರು ಸಮಾರಂಭದಲ್ಲಿ ಹಾಜರಿದ್ದರು.[ಕಚೇರಿ ಉದ್ಘಾಟನೆ ಚಿತ್ರಗಳು]
ಪಾಲಿಕೆ ವಿಭಜನೆ ಬೇಡ
ಬೆಂಗಳೂರನ್ನು ವಿಭಜನೆ ಮಾಡಿ ಆಡಳಿತ ನಡೆಸುವುದು ಸರಿಯಲ್ಲ. ಅನೇಕ ಕಡೆ ಇಂತಹ ಪ್ರಯೋಗಗಳು ನಡೆದಿವೆ. ಆದರೆ ಅದು ಯಶಸ್ವಿಯಾಗಿಲ್ಲ. ನೇರವಾಗಿ ಮೇಯರ್ ಆಯ್ಕೆ ಮಾಡುವ ಕ್ರಮ ಜಾರಿಯಾಗಬೇಕು ಎಂದು ಗೌಡರು ಹೇಳಿದರು.
ರಾಜ್ಯಾದ್ಯಂತ ಪ್ರವಾಸ
ಪಕ್ಷಕ್ಕೆ ಇನ್ನಷ್ಟು ಕಾರ್ಯಕರ್ತರ ನೋಂದಣಿ ಮಾಡಿಕೊಳ್ಳಲಾಗುವುದು. ರಾಜ್ಯಾದ್ಯಂತ ನಾನು ಮತ್ತು ಕುಮಾರಸ್ವಾಮಿ ಪ್ರವಾಸ ಮಾಡಿ ಕೆಲಸಗಳನ್ನು ಜನರ ಮುಂದಿಡಲಿದ್ದೇವೆ. 40 ಮಂದಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೂ ಜವಾಬ್ದಾರಿ ವಹಿಸಲಾಗುವುದು ಎಂದು ಗೌಡರು ತಿಳಿಸಿದರು.
ಆತ ಕರೆದರೆ ಹೋಗುತ್ತೇನೆ
ಸುದ್ದಿಗಾರರೊಂದಿಗೆ ಮಾತನಾಡಿದ್ದ ಗೌಡರು ನಾನು ಯಾರಿಗೂ ಮೋಸ ಮಾಡಿಲ್ಲ. ಜೆಡಿಎಸ್ ನ್ನು ಅಧಿಕಾರಕ್ಕೆ ತಂದ ನಂತರವೇ ನನ್ನ ವಿದಾಯ. ಭಗವಂತ ಕರೆದರೆ ಹೋಗಲೇ ಬೇಕು ಎಂದು ಹೇಳಿದ್ದರು.
ಕೈ ತಪ್ಪಿದ ಕಚೇರಿ
ಬೆಂಗಳೂರು ರೇಸ್ ಕೋರ್ಸ್ ರಸ್ತೆಯ ಕಚೇರಿಯನ್ನು ನ್ಯಾಯಾಲಯದ ಆದೇಶದಂತೆ ಕಾಂಗ್ರೆಸ್ ಗೆ ಬಿಟ್ಟು ಕೊಟ್ಟ ನಂತರ ಜೆಡಿಎಸ್ ಕಚೇರಿಗಾಗಿ ಹುಡುಕಾಟ ನಡೆಸಿತ್ತು. ಅಂತಿಮವಾಗಿ ಶ್ರೀರಾಂಪುರದ ಓಕಳಿಪುರಂ ಬಳಿ ಹೊಸ ಕಚೇರಿ ತೆರೆಯಲಾಗಿದ್ದು ಹೋಮ-ಹವನ-ಪೂಜೆ ನಡೆಸಲಾಗಿದೆ.
ಆತಂಕ ತಂದ ಭಿನ್ನಮತ
ಶಾಸಕ ಜಮೀರ್ ಅಹಮದ್, ಬಾಲಕೃಷ್ಣ ಅವರ ಇತ್ತೀಚಿನ ನಡೆಗಳು ಗೌಡರಿಗೆ ಆತಂಕ ಹುಟ್ಟಿಸಿದ್ದವು. ಮಮಸ್ಸಿದ್ದವರು ಇರಬಹುದು, ಇಲ್ಲದವರು ಹೋಗಬಹುದು ಎಂದು ಗೌಡರು ಬೇಸರದಿಂದ ಹೇಳಿದ್ದರು.
ಜನವಿರೋಧಿ ರಾಜ್ಯ ಸರ್ಕಾರ
ಅತ್ತ ಬೆಳಗಾವಿಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರ ಜನವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಡಿಕೆ ರವಿ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನಗಳು ನಡೆದಿದ್ದು ಜೆಡಿಎಸ್ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.