ಕ್ಷೀರಭಾಗ್ಯ ಯೋಜನೆ ಕೊಂಡಾಡಿದ ಶಾಲಾ ಮಕ್ಕಳು!
ಶಾಲಾ ಮಕ್ಕಳಿಗೆ ಬಿಸಿಹಾಲು ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ 'ಕ್ಷೀರಭಾಗ್ಯ'. ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದ ಈ ಯೋಜನೆಯಿಂದ ಅಂಗನವಾಡಿ ಮಕ್ಕಳೂ ಸೇರಿದಂತೆ 1 ರಿಂದ 10ನೇ ತರಗತಿ ವರೆಗಿನ 1 ಕೋಟಿಗೂ ಅಧಿಕ ಮಕ್ಕಳಿಗೆ ಪ್ರಯೋಜನವಾಗುತ್ತಿದೆ.
ಹಾವೇರಿ ಜಿಲ್ಲೆಯ ಕುರಬಗೊಂಡ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಕೀರ್ತಿ ಆನಂದ್ ದೊಡ್ಡಗೌಡರ್, ಹಾವೇರಿ ಜಿಲ್ಲೆಯ ವರದಹಳ್ಳಿ ಗ್ರಾಮದ ೮ನೇ ತರಗತಿಯ ಕುಮಾರಿ ರಕ್ಷಿತ ಮಲ್ಲೇಶಪ್ಪ ಹಡಪದ್ ಕ್ಷೀರಭಾಗ್ಯ ಯೋಜನೆಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. [ಕ್ಷೀರಭಾಗ್ಯ ಯೋಜನೆ ಐದು ದಿನಗಳಿಗೆ ವಿಸ್ತರಣೆ]
* 'ಬೆಳಗಾಗೆದ್ದು ಮನೆಯ ಕೆಲಸ ಮುಗಿಸಿ ಒಂದು ತುತ್ತು ಉಂಡು ಶಾಲೆಗೆ ಬಂದರೆ ಮತ್ತೆ ಊಟ ಕಾಣುತ್ತಿದ್ದುದು ರಾತ್ರಿಯೇ. ಶಾಲೆಯಲ್ಲಿ ಅಪೌಷ್ಠಿಕತೆಯಿಂದಾಗಿ, ಹಸಿವಿನಿಂದಾಗಿ, ರಕ್ತ ಹೀನತೆಯಿಂದಾಗಿ ಬಳಲಿ ಹೋಗುತ್ತಿದ್ದೆವು. ಮನೆಯಲ್ಲಿ ಹಾಲು ಕೊಳ್ಳುವಷ್ಟು ಶಕ್ತಿ ಇರಲಿಲ್ಲ. ಈಗ ವಾರದಲ್ಲಿ ಮೂರುದಿನ ಶಾಲೆಯಲ್ಲಿಯೇ ಬಿಸಿ ಹಾಲು ಕೊಡುತ್ತಿದ್ದು ಉತ್ಸಾಹದಿಂದ ಪಾಠ ಕಲಿಯಲು ಅನುಕೂಲವಾಗುತ್ತಿದೆ' ಎಂದು ಅಭಿಪ್ರಾಯ ಹಂಚಿಕೊಂಡರು. [ಹೊಸವರ್ಷದ ಶುಭಾಶಯ, ನಂದಿನಿ ಹಾಲಿನ ದರ 4 ರು. ಏರಿಕೆ!]
* ಬಳ್ಳಾರಿ ಜಿಲ್ಲೆ ಸಂಜೀವರಾಯನ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹುಲುಗಪ್ಪ ಮತ್ತು ಎರಿಸ್ವಾಮಿ ಎಂಬ ವಿದ್ಯಾರ್ಥಿಗಳು "ಸಾ ನಮಗೆ ಸ್ಕೂಲಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಹಾಲು ಕೊಡ್ತಾರೆ. ನಿಜವಾಗಲೂ ನಮಗೆ ಇಷ್ಟ ಆಗೈತ್ ಸಾ" ಎಂದರು.
* ರಾಯಚೂರಿನ ಪೊಲೀಸ್ ಕಾಲೋನಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಂಧ್ಯಾ ಹಾಗೂ ರಾಯಚೂರಿನ ಲಾಲ್ಬಹದ್ದೂರ್ ಶಾಸ್ತ್ರೀ ನಗರದ ಸುಮಾ ಅವರು ಸಂತೋಷದಿಂದ ಹಾಲು ಕುಡಿಯುವುದಾಗಿ ಯೋಜನೆಯನ್ನು ಶ್ಲಾಘಿಸಿದರು.