ಬ್ಯಾಡಗಿ ತಾಲೂಕು ಪಂಚಾಯ್ತಿ ಸಭೆಗೆ ಅಧಿಕಾರಿಗಳ ಗೈರು: ಅಧ್ಯಕ್ಷರು ಗರಂ
ಬ್ಯಾಡಗಿ (ಹಾವೇರಿ ಜಿಲ್ಲೆ), ಫೆಬ್ರವರಿ 9: ತಾಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ಸುತ್ತಕೋಟಿಯವರು ಬುಧವಾರ ಕರೆದಿದ್ದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರು ಎದ್ದುಕಾಣುತ್ತಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷರು ಮುಂದಿನ ಸಭೆಗಳಿಗೆ ಗೈರಾಗದಂತೆ ತಪ್ಪದೇ ಹಾಜರಾಗಬೇಕೆಂದು ಕಟ್ಟುನಿಟ್ಟಾದ ಸೂಚನೆ ನೀಡಿದ್ದಾರೆ.
ಸಭೆ ಆರಂಭವಾಗಿ ಸಾಕಷ್ಟು ಸಮಯ ಕಳೆದರೂ ಕೆಲವಾರು ಅಧಿಕಾರಿಗಳು, ಸಭೆಗೆ ಹಾಜರಾಗಲಿಲ್ಲ. ಈ ಹಿನ್ನೆಲೆಯಲ್ಲಿ, ಬೇಸರಗೊಂಡ ಅವರು, "ಅಧಿಕಾರಿಗಳು ಸಭೆಗೆ ಸತತವಾಗಿ ಗೈರು ಹಾಜರಾಗುತ್ತಿರುವುದರಿಂದಾಗಿ ಅವರ ಸಹಾಯಕರು ಸಭೆಗೆ ತಪ್ಪು ಮಾಹಿತಿ ನೀಡುತ್ತಾರೆ. ಅಧಿಕಾರಿಗಳೇ ಸಭೆಗೆ ಗೈರಾದಾಗ ಅವರಿಂದ ಸಭೆಗೆ ಸಿಗಬೇಕಾದ ಮಾಹಿತಿ ಅಲಭ್ಯವಾಗುತ್ತದೆ'' ಎಂದರು.
ತಮ್ಮ ಮಾತನ್ನು ಮುಂದುವರಿಸಿದ ಅವರು, ''ಅಧಿಕಾರಿಗಳ ಬದಲಿಗೆ ಅವರ ಸಹಾಯಕರು ಸಭೆಗೆ ಬರುತ್ತಿರುವ ಸಂಪ್ರದಾಯ ಶುರುವಾಗಿದ್ದು, ಅವರು ಸಭೆಗೆ ಅಪೂರ್ಣ ಮಾಹಿತಿ ನೀಡುತ್ತಿರುವುದು ತಿಳಿದುಬಂದಿದೆ. ಇದರಿಂದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಅಡ್ಡಿಯಾಗುತ್ತಿದೆ" ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ, ಮುಂದಿನ ತಾಲೂಕು ಪಂಚಾಯ್ತಿ ಮಾಸಿಕ ಅಭಿವೃದ್ಧಿ ಸಭೆಗೆ ಅಧಿಕಾರಿಗಳು ತಪ್ಪದೇ ಹಾಜರಾಗಬೇಕೆಂದು ಸೂಚನೆ ನೀಡಿದರು.
ಫೋಟೋ ಕ್ಯಾಪ್ಷನ್: ಹಾವೇರಿ ಜಿಲ್ಲೆಯ ಭೂಪಟ