ನ್ಯಾಯಾಲಯದಲ್ಲಿ ದಾಖಲೆ ಕದ್ದ ಭೂಪನಿಗೆ 5 ವರ್ಷ ಸಜಾ
ಚಿಕ್ಕಮಗಳೂರು, ಜನವರಿ 20: ಚಿಕ್ಕಮಗಳೂರು ನ್ಯಾಯಲಯದ ಕಚೇರಿಯಲ್ಲಿ ದಾಖಲೆ ಕಳವು ಮಾಡಿದ್ದ ಆರೋಪಿಗೆ ಸಿಜೆಎಂ ನ್ಯಾಯಾಲಯವು 7 ಸಾವಿರ ದಂಡ ಮತ್ತು 5 ವರ್ಷ ಜೈಲು ಸಜೆಯನ್ನು ವಿಧಿಸಿದೆ.
ಫೆ.3-2009ರಲ್ಲಿ ತ್ವರಿತಗತಿಯ ಎರಡನೇ ನ್ಯಾಯಾಲಯದ ಕಚೇರಿಯ ಸಿಬ್ಬಂದಿ ಕೊಠಡಿಯಲ್ಲಿದ್ದ ದಾಖಲೆಗಳನ್ನು ಆರೋಪಿ ಮೋಹನ್ ಕಳವು ಮಾಡಿದ್ದ. ಆ ಕಡತ ಸಂಬಂಧ ಪ್ರಕರಣ ವೇಳೆ ಸಿಬ್ಬಂದಿ ದಾಖಲೆಯನ್ನು ಹುಡುಕಿದಾಗ ದಾಖಲೆಗಳು ಕಳವಾಗಿರುವುದು ತಿಳಿದುಬಂದಿದ್ದು, ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಕಾರ್ಯಚರಣೆ ನಡೆಸಿ ಮೋಹನ್ ಅನ್ನು ಬಂಧಿಸಿದ್ದರು.[ಗೌರಿ ಲಂಕೇಶ್ ಗೆ ಶಿಕ್ಷೆ: 6 ತಿಂಗಳು ಜೈಲು,ರು 10,000 ದಂಡ]
ಪ್ರಕರಣ ವಿಚಾರಣೆ ವೇಳೆ ಆರೋಪ ಸಾಭೀತಾಗಿದ್ದು, ಈ ಸಂಬಂಧ ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕಿ ಕೆ.ಎಸ್.ವೀಣಾ ವಾದ ಮಂಡಿಸಿದ್ದರು. ಸಿಜೆಎಂ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ದಯಾನಂದ ಹಿರೇಮಠ್ ಅವರು, ಮೋಹನ್ ಗೆ ಐದು ವರ್ಷ ಜೈಲು ಮತ್ತು ಏಳು ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು.
ನ್ಯಾಯಾಲಯದಲ್ಲಿಯೇ ದಾಖಲೆಗಳನ್ನು ಕಳವು ಮಾಡುವ ಜನರು ಯಾರನ್ನು ಬಿಟ್ಟಿಯಾರು ಎಂದು ಚಿಕ್ಕಮಗಳೂರಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.