1,000 ಕೋಟಿ ಕೊಟ್ಟಿದ್ದು ನಿಜವೇ ಆದರೆ ರಾಜೀನಾಮೆ ನೀಡ್ತೀರಾ? ಸಿಎಂಗೆ ಬಿಎಸ್ವೈ ಚಾಲೆಂಜ್
ಸ್ಟೀಲ್ ಫ್ಲೈ ಓವರಿನಲ್ಲಿ 150 ಕೋಟಿ ಡೀಲ್ ನಡೆದಿದೆ ಎಂದು ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯ ಸರಕಾರದ ಹಗರಣಗಳನ್ನು ಬಯಲಿಗೆಳೆಯುತ್ತೇನೆಂದು ಅಬ್ಬರಿಸಿದ್ದ ಯಡಿಯೂರಪ್ಪ ಈ ಮೂಲಕ ಮೊದಲ ಬಾಂಬ್ ಎಸೆದಿದ್ದಾರೆ.
ಬೆಂಗಳೂರು, ಫೆಬ್ರವರಿ 12: ಸ್ಟೀಲ್ ಫ್ಲೈ ಓವರಿನಲ್ಲಿ 150 ಕೋಟಿ ಡೀಲ್ ನಡೆದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯ ಸರಕಾರದ ಹಗರಣಗಳನ್ನು ಬಯಲಿಗೆಳೆಯುತ್ತೇನೆ ಎಂದು ಅಬ್ಬರಿಸಿದ್ದ ಯಡಿಯೂರಪ್ಪ ಈ ಮೂಲಕ ಮೊದಲ ಬಾಂಬ್ ಎಸೆದಿದ್ದಾರೆ. [ಮೋದಿ ಮೇಲಿನ ಗೌರವದಿಂದ ಕೃಷ್ಣ ಬಿಜೆಪಿ ಸೇರ್ಪಡೆ: ಯಡಿಯೂರಪ್ಪ]
ಇಂದು ಬೆಂಗಳೂರಿನ ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಸ್ಟೀಲ್ ಫ್ಲೈ ಓವರಿನಲ್ಲಿ ಒಟ್ಟು 150 ಕೋಟಿ ಡೀಲ್ ನಡೆದಿದೆ. ಇದರಲ್ಲಿ 65 ಕೋಟಿ ಸಿದ್ದರಾಮಯ್ಯನವರ ಕೈ ತಲುಪಿದೆ ಎಂದು ನೇರ ಆರೋಪ ಮಾಡಿದ್ದಾರೆ. [ಬಿಎಸ್ವೈ ತಾವೇ ಗಾಜಿನ ಮನೆಯಲ್ಲಿದ್ದಾರೆ : ಧ್ರುವನಾರಾಯಣ ವ್ಯಂಗ್ಯ]
ಹೇಳಿದ್ದೆಲ್ಲವೂ ಸತ್ಯ
ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲಿ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ಗೆ ಒಂದು ಸಾವಿರ ಕೋಟಿ ನೀಡಿದ್ದಾರೆ. ನನ್ನ ಆರೋಪ ಸತ್ಯವಾಗಿದ್ದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡುತ್ತಾರಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲೆಸೆದಿದ್ದಾರೆ.
ಸಿದ್ದರಾಮಯ್ಯ ಡೈರಿ
ಸಾರ್ವಜನಿಕ ವಲಯದಲ್ಲಿ ಸಿದ್ದರಾಮಯ್ಯನವರ ಖಜಾಂಚಿ ಎಂದೇ ಕರೆಯುವ ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಡೈರಿಯಲ್ಲಿ ಹೈಕಮಾಂಡ್ಗೆ ಕೊಟ್ಟಿರುವ ಹಣದ ವಿವರಗಳಿವೆ. ನಾನು ಇದನ್ನು ಪ್ರಜ್ಞಾ ಪೂರ್ವಕವಾಗಿಯೇ ಹೇಳುತ್ತಿದ್ದೇನೆ. ನಾಳೆ (ಸೋಮವಾರ) ಈ ಬಗ್ಗೆ ಸದನದಲ್ಲಿ ಸ್ಪಷ್ಟಪಡಿಸಿ. ಇಲ್ಲದಿದ್ದಲ್ಲಿ ರಾಜೀನಾಮೆ ನೀಡಿ ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ .
ಡೈರಿ ಎಲ್ಲಿ ಸಿಕ್ಕಿತು?
ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗೋವಿಂದರಾಜ್ ಮನೆ ಮೇಲೆ ದಾಳಿ ನಡೆಸಿದಾಗ ಹಲವು ದಾಖಲೆಗಳು ಸಿಕ್ಕಿದ್ದವು. ಅದರಲ್ಲಿ ಒಂದಾದ 'ಡೈರಿಯಲ್ಲಿ ಯಾರು ಯಾರಿಗೆ, ಯಾವ ಯಾವ ಸಮಯದಲ್ಲಿ ಎಷ್ಟು ಹಣ ಸಂದಾಯವಾಗಿದೆ ಎಂಬ ವಿವರಗಳಿವೆ. ಇನ್ನು ತಮ್ಮ ಹತ್ತಿರದವರ ಬಳಿ ಗೋವಿಂದರಾಜು ಇದನ್ನು ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿಗೆ ಇದೆಲ್ಲಾ ಗೊತ್ತಿಲ್ವಾ? ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಮಧ್ಯವರ್ತಿಗಳ ಮೂಲಕ ರವಾನೆ
ಕಾಂಗ್ರೆಸ್ ಹೈಕಮಾಂಡಿಗೆ ಮಧ್ಯವರ್ತಿಗಳ ಮೂಲಕವೇ 1,000 ಕೋಟಿ ತಲುಪಿಸಲಾಗಿದೆ. ಈ ಮಾಹಿತಿಯನ್ನು ನನಗೆ ನೀಡಿದವರು ಬೇರೆ ಯಾರೂ ಅಲ್ಲ, ಸ್ವತಃ ಕಾಂಗ್ರೆಸ್ನ ಹಿತೈಷಿಗಳು ಹಾಗೂ ಪ್ರಾಮಾಣಿಕ ಅಧಿಕಾರಿಗಳೇ ನೀಡಿದ್ದಾರೆ.
ಸಚಿವರ ಕಮಿಷನ್
ಸ್ಟೀಲ್ ಫ್ಲೈ ಓವರ್ ಕಾಮಗಾರಿಗೆ ರಾಷ್ಟ್ರೀಯ ಹಸಿರು ನ್ಯಾಯಪೀಠದ ತಡೆಯಾಜ್ಞೆ ಇದೆ. ಹೀಗಿದ್ದೂ ಸಿದ್ದರಾಮಯ್ಯ ಸಂಪುಟದಲ್ಲಿರುವ ಪ್ರಭಾವಿ ಸಚಿವರೊಬ್ಬರು ಹೆಚ್ಚಿನ ಕಮಿಷನ್ ನೀಡುವ ಕಂಪೆನಿಗೆ ಕಾಮಗಾರಿ ನೀಡಲು ಮುಂದಾಗಿದ್ದಾರೆ. ಮೊದಲ ಕಂತಿನಲ್ಲೇ 150 ಕೋಟಿ ಕಿಕ್ ಬ್ಯಾಕ್ ಪಡೆದಿದ್ದು, ಮುಖ್ಯಮಂತ್ರಿಗೆ 65 ಕೋಟಿ ಸಂದಾಯವಾಗಿದೆ. ನ್ಯಾಯಪೀಠ ತಡೆಯಾಜ್ಞೆ ಇದೆ ಹೀಗಿರುವಾಗ ಯಾವ ಉದ್ದೇಶಕ್ಕಾಗಿ ಕಾಮಗಾರಿ ನಡೆಸಲು ಮುಂದಾಗಿದ್ದಾರೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಸಿದ್ದರಾಮಯ್ಯ ದರೋಡೆ
ಸಿದ್ದರಾಮಯ್ಯ ಹಗಲು ದರೋಡೆಗೆ ಇಳಿದಿದ್ದಾರೆ. ಸ್ವಚ್ಛ, ಪಾರದರ್ಶಕ, ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಬೊಬ್ಬೆ ಹಾಕುತ್ತಿದ್ದಾರೆ ಅಷ್ಟೆ. ಕುರ್ಚಿ ಉಳಿಸಿಕೊಳ್ಳುವುದು ಅವರ ಒಂದಂಶದ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರ ಮತ್ತಷ್ಟು ಕರ್ಮಕಾಂಡ ಬಯಲಿಗೆಳೆಯುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹೈಕಮಾಂಡಿಗೆ 1,000 ಕೋಟಿ ನೀಡಿದ್ದಾರೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಾರಿ ನೇರವಾಗಿ ಯಾವ ಹಗರಣ ಎಷ್ಟು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆದರೆ ಯಾವುದೇ ದಾಖಲೆಗಳನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ.