ಹೆದ್ದಾರಿ ಪಕ್ಕದ ಬಾರ್, ಪಬ್ ಗಳಿಗೆ ಇನ್ನೂ ಗ್ರಹಣ; ಹೈಕೋರ್ಟ್ ಗರಂ
ನಗರದ ಪ್ರದೇಶದ ಹೆದ್ದಾರಿಗಳ ಪಕ್ಕದ ಬಾರ್, ಪಬ್ ಗಳಿಗಾಗಿ ಹೊಸ ನಿಯಮ ಅಳವಡಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ. ಬಾರ್ ಮತ್ತು ಪಬ್ ಗಳ ಮಾಲೀಕರು ಸಲ್ಲಿಸಿದ್ದ ದೂರಿನ ವಿಚಾರಣೆ ಮೇರೆಗೆ ಸೂಚನೆ ನೀಡಿದ ಹೈಕೋರ್ಟ್.
ಬೆಂಗಳೂರು, ಜುಲೈ 21: ರಾಜ್ಯದ ನಗರಗಳ ಮೂಲಕ ಹಾದು ಹೋಗುವ ಹೆದ್ದಾರಿಗಳ ಅಕ್ಕಪಕ್ಕದಲ್ಲಿರುವ ಬಾರ್ ಅಥವಾ ಪಬ್ ಗಳು ಮದ್ಯ ಸರಬರಾಜು ಮಾಡಲು ಗ್ರಹಣ ಹಿಡಿದಿದೆ. ಈ ಹಿನ್ನೆಲೆಯಲ್ಲಿ, ನಗರಗಳ ಬಾರ್ ಹಾಗೂ ಪಬ್ ಮಾಲೀಕರಿಗೆ ಅನುಕೂಲವಾಗುವಂತೆ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಹೆದ್ದಾರಿಗಳಿಂದ ಮದ್ಯದಂಗಡಿಗಳು ದೂರ ಉಳಿಯಲಿ: ಸುಪ್ರೀಂಕೋರ್ಟ್
ಕೇಂದ್ರ ಹೆದ್ದಾರಿ ಪ್ರಾಧಿಕಾರವು, ನಗರದೊಳಗಿನ ಹೆದ್ದಾರಿಗಳ ಅಕ್ಕಪಕ್ಕದ ಸ್ಥಳಗಳನ್ನು ಡಿನೋಟಿಫೈ ಮಾಡಿ, ಅಲ್ಲಿ ಮದ್ಯದ ಸರಬರಾಜಿಗೆ ಅನುಕೂಲ ಮಾಡಿಕೊಡಬಹುದು ಎಂದು ಒಪ್ಪಿಗೆ ನೀಡಿದೆ. ಆದರೆ, ಈ ಬಗ್ಗೆ ಅಧಿಕೃತ ಆದೇಶವಾಗಲೀ, ಸಲಹೆ, ಸೂಚನೆಗಳಾಗಲೀ ಕೇಂದ್ರ ಸರ್ಕಾರದಿಂದ ಬಂದಿಲ್ಲ.
ನಗರದೊಳಗಿರುವ ಬಾರ್ ಗಳಿಗೆ ಮದ್ಯ ನಿಷೇಧ ಅನ್ವಯಿಸುವುದಿಲ್ಲ: ಸುಪ್ರೀಂ
ಇದು, ಶೀಘ್ರದಲ್ಲೇ ತಮ್ಮ ವ್ಯವಹಾರ ಮತ್ತೆ ಆರಂಭಿಸುವ ಕನಸು ಕಾಣುತ್ತಿದ್ದ ಬಾರ್ ಹಾಗೂ ಪಬ್ ಮಾಲೀಕರನ್ನು ನಿರಾಸೆಗೊಳಿಸಿದೆ. ಆದ್ದರಿಂದ ಈ ಬಾರ್, ಪಬ್ ಗಳ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದು, ಹೈ ಕೋರ್ಟ್ ಈ ಸಮಸ್ಯೆಯನ್ನು ಬೇಗ ಇತ್ಯರ್ಥಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಆಲ್ಕೋಹಾಲ್ ಮಾರಾಟಕ್ಕೆ ನಿಷೇಧ
ಕೆಲ ತಿಂಗಳುಗಳ ಹಿಂದೆ, ಸುಪ್ರೀಂ ಕೋರ್ಟ್, ತಾನು ನೀಡಿದ್ದ ಆದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕದ ಸುಮಾರು 500 ಮೀ. ಒಳಗಿನ ಪ್ರದೇಶದಲ್ಲಿ ಆಲ್ಕೋಹಾಲ್ ಮಾರಾಟವನ್ನು ನಿರ್ಬಂಧಿಸಿತ್ತು. ಹಾಗಾಗಿ, ಜುಲೈ 1ರಿಂದಲೇ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಮದ್ಯ ಮಾರಾಟ ನಿಂತಿದೆ.
ಸುಪ್ರೀಂ ಕೋರ್ಟ್, ಪ್ರಾಧಿಕಾರದಿಂದ ಸಮಸ್ಯೆ ಇತ್ಯರ್ಥ
ಸುಪ್ರೀಂ ಕೋರ್ಟ್ ನ ಆದೇಶ, ನಗರ ಪ್ರದೇಶಗಳಲ್ಲಿ ಹಾದು ಹೋಗುವ ಹೆದ್ದಾರಿಗಳ ಅಕ್ಕಪಕ್ಕದಲ್ಲಿದ್ದ ಬಾರ್ ಮತ್ತು ಪಬ್ ಗಳ ಮೇಲೆ ಪರಿಣಾಮ ಬೀರಿತ್ತು. ಇದನ್ನು ರಾಜ್ಯ ಸರ್ಕಾರವು ಕೇಂದ್ರ ಹೆದ್ದಾರಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಾಗ, ಈ ಸಮಸ್ಯೆ ಬಗೆಹರಿದಿತ್ತು. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಸಭೆ ನಡೆಸಿದ ಹೆದ್ದಾರಿ ಪ್ರಾಧಿಕಾರ, ನಗರದೊಳಗೆ ಸಾಗುವ ಹೆದ್ದಾರಿಗಳ ಅಕ್ಕಪಕ್ಕದ ಸ್ಥಳಗಳನ್ನು ಡಿನೋಟಿಫೈ ಮಾಡಿ, ಮದ್ಯ ಮಾರಾಟಕ್ಕೆ ಅನುಮತಿ ಕೊಡಬಹುದೆಂದು ಆದೇಶ ನೀಡಿತು.
ಹೈಕೋರ್ಟ್ ಮೊರೆ ಹೋದ ಮಾಲೀಕರು
ನಗರಗಳ ಮೂಲಕ ಸಾಗುವ ಹೆದ್ದಾರಿ ಪ್ರದೇಶಗಳನ್ನು ಡಿನೋಟಿಫೈ ಮಾಡಬಹುದು ಎಂದು ಆದೇಶವಾಗಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಾಗಲೀ, ಕೇಂದ್ರ ಸರ್ಕಾರದಿಂದಾಗಲೀ ಯಾವುದೇ ಆದೇಶದ ಪ್ರತಿ ಹಾಗೂ ಸಲಹೆ, ಸೂಚನೆಗಳು ಬಂದಿಲ್ಲ. ಹೀಗಾಗಿ, ಇಲ್ಲಿನ ಬಾರ್ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ರಾಜ್ಯ ಸರ್ಕಾರಕ್ಕೆ ಆದೇಶ
ಪ್ರಕರಣದ ವಿಚಾರಣೆ ನಡೆಸಿರುವ ರಾಜ್ಯ ಸರ್ಕಾರದ ಅಹವಾಲನ್ನೂ ಆಲಿಸಿದೆ. ಹಾಗಾಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಕೇಂದ್ರ ಸರ್ಕಾರದ ಸೂಚನೆಯನ್ನು ಕಾಯುತ್ತಾ ಕೂರುವುದು ಬೇಡ. ನಗರಗಳಲ್ಲಿನ ಹೆದ್ದಾರಿ ಪಕ್ಕದ ಮದ್ಯದಂಗಡಿ ಮಾಲೀಕರಿಗೆ ಅನುಕೂಲವಾಗುವಂಥ ನಿಯಮಾವಳಿಗಳನ್ನು ನೀವೇ ಅನುಷ್ಠಾನಗೊಳಿಸಿ ಎಂದು ಸೂಚನೆ ನೀಡಿದೆ. ಆದರೂ, ಈ ಬಗ್ಗೆ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಸಂಪರ್ಕಿಸುವುದಾಗಿ ರಾಜ್ಯ ಸರ್ಕಾರ ಕೋರಿರುವುದರಿಂದ ಜುಲೈ 27ಕ್ಕೆ ವಿಚಾರಣೆ ಮುಂದೂಡಲ್ಪಟ್ಟಿದೆ.