ಸಂಧಾನ ಸಭೆ ಯಶಸ್ವಿː ವೈದ್ಯರ ಮುಷ್ಕರ ಅಂತ್ಯ
ಬೆಂಗಳೂರು, ಅ.29: ಮೂರು ದಿನಗಳ ಕಾಲ ಜಗ್ಗಾಡಿದ ವೈದ್ಯರ ರಾಜೀನಾಮೆ ಪ್ರಹಸನಕ್ಕೆ ಅಂತೂ ಇಂತೂ ತೆರೆಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ವಿಧಾನಸೌಧದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ವೈದ್ಯರ 14 ಬೇಡಿಕೆಗಳ ಪೈಕಿ 10ನ್ನು ನೆರವೇರಿಸಲು ಸರ್ಕಾರ ಒಪ್ಪಿಕೊಂಡಿದೆ.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಆರೋಗ್ಯ ಸಚಿವ ಯು.ಟಿ.ಖಾದರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್, ಸರ್ಕಾರಿ ವೈದ್ಯರ ಸಂಘದ ಗೌರವಾಧ್ಯಕ್ಷ ರವೀಂದ್ರ, ಅಧ್ಯಕ್ಷ ವೀರಭದ್ರಯ್ಯ ಪಾಲ್ಗೊಂಡಿದ್ದರು.[ರಾಜೀನಾಮೆ ನೀಡಿದ ಸರಕಾರಿ ವೈದ್ಯರ ಅಳಲುಗಳು]
ಸಭೆ ಬಳಿಕ ಮಾತನಾಡಿದ ಸಿಎಂ, ಜನರಿಗೆ ಸಮಸ್ಯೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಗಿದೆ. ವೈದ್ಯರು ಇಂಥ ಕಠಿಣ ಕ್ರಮ ಯಾಕೆ ತೆಗೆದುಕೊಂಡರೋ ತಿಳಿಯದು. ಆದರೆ ಮುಂದೆ ಮತ್ತೆ ಇಂಥ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ವೀರಭದ್ರಯ್ಯ ಮಾತನಾಡಿ, ನಾವು ರಾಜೀನಾಮೆ ನೀಡಿ ತಪ್ಪು ಮಾಡಿಬಿಟ್ಟೆವು. ಯಾವುದೇ ಸಮಸ್ಯೆಯಿದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದೇ ಉತ್ತಮವಾಗಿತ್ತು ಎಂದು ಹೇಳಿದರು.[ವೈದ್ಯರ ರಾಜೀನಾಮೆː ಸರ್ಕಾರಕ್ಕೆ ಹೈಕೋರ್ಟ್ ಚಾಟಿ]
ಸಿಬ್ಬಂದಿ ನೇಮಕ, ಔಷಧ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಯಿತು. ಒಟ್ಟಿನಲ್ಲಿ ವೈದ್ಯರ ಮುಷ್ಕರ ಕೊನೆಗೊಂಡಿರುವುದರಿಂದ ಗ್ರಾಮೀಣ ಭಾಗದ ಬಡವರು ಮತ್ತು ಮಧ್ಯಮ ವರ್ಗದ ಜನ ನಿಟ್ಟುಸಿರು ಬಿಡುವಂತಾಗಿದೆ.