ಮಂಡ್ಯ: ಎಸ್ಎಸ್ಎಲ್ಸಿ ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆ
ಮಂಡ್ಯ, ಏಪ್ರಿಲ್ 14 : ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ನಿರಾಳರಾಗಿದ್ದ ವಿದ್ಯಾರ್ಥಿಗಳಿಗೆ ಶಾಕ್ ನೀಡುವ ವರದಿ ಮಂಡ್ಯದಿಂದ ಬಂದಿದೆ. ಬುಧವಾರ ನಡೆದ ಹಿಂದಿ ಪ್ರಶ್ನೆ ಪತ್ರಿಕೆ ಮಂಡ್ಯದಲ್ಲಿ ಸೋರಿಕೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಶಿಕ್ಷಣ ಇಲಾಖೆಯು ಜಿಲ್ಲೆಯ ವಿವಿಧೆಡೆ 98 ಪರೀಕ್ಷಾ ಕೇಂದ್ರಗಳನ್ನು ತೆರೆದಿತ್ತು. ಜಿಲ್ಲೆಯ ಎಲ್ಲ 443 ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ 24,717 ವಿದ್ಯಾರ್ಥಿಗಳು (ಖಾಸಗಿಯವರು ಸೇರಿದಂತೆ) ಪರೀಕ್ಷೆ ಬರೆದಿದ್ದರು. [SSLC ಗಣಿತ ಪತ್ರಿಕೆ ಸೋರಿಕೆಯಾಗಿಲ್ಲ]
ರಾಜ್ಯದಲ್ಲಿ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಉಂಟಾದ ಫಜೀತಿಯನ್ನು ಅರಿತ ಜಿಲ್ಲಾಡಳಿತ ಸರ್ಕಾರದ ಸೂಚನೆಯಂತೆ ಎಲ್ಲ ಪರೀಕ್ಷಾ ಕೇಂದ್ರಗಳತ್ತ ಹದ್ದಿನ ಕಣ್ಣಿಟ್ಟಿತ್ತಲ್ಲದೆ, ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಆದರೂ ಶಿಕ್ಷಕನೊಬ್ಬ ಪ್ರಶ್ನೆ ಪತ್ರಿಕೆಯನ್ನು ಹಂಚಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. [ಲೀಕಾಗಿದ್ದ ಕೆಮಿಸ್ಟ್ರಿ ಪಿಯು ಪ್ರಶ್ನೆ ಪತ್ರಿಕೆ ಬೆಲೆ 10 ಲಕ್ಷ ರು!]
ಪತ್ರಿಕೆ ಹಂಚಿದ ಶಿಕ್ಷಕ : ಜಿಲ್ಲೆಯ ಪಾಂಡವಪುರ ತಾಲೂಕಿನ ತಾಳಶಾಸನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಂಜುಂಡಸ್ವಾಮಿ ಎಂಬಾತನೇ ಹಿಂದಿ ಪ್ರಶ್ನೆಪತ್ರಿಕೆ ಲೀಕ್ ಮಾಡಿ ಸಿಕ್ಕಿಬಿದ್ದವನು. ಈತನನ್ನು ಪಾಂಡವಪುರ ಸಮೀಪದ ಹಿರೋಡ್ ಗ್ರಾಮದ ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಪಾಂಡವಪುರ ಖಜಾನೆಯಿಂದ ಪ್ರಶ್ನೆಪತ್ರಿಕೆ ಶಾಲೆ ತಲುಪುತ್ತಿದ್ದಂತೆಯೇ ಬಂಡಲ್ ತೆರೆದು ಶಾಲೆಯ ಹೊರಗೆ ಇದ್ದ ತನ್ನ ಸ್ನೇಹಿತ ಪುರುಷೋತ್ತಮ್ಗೆ ನೀಡಿದ್ದಾನೆ. [ಪಿಯು ಪತ್ರಿಕೆ ಖರೀದಿ ಆಗಿದೆ, ಮಾರಿದವರು ಯಾರು?]
ಪುರುಷೋತ್ತಮ್ ಸಮೀಪದಲ್ಲೇ ಇದ್ದ ಕಂಪ್ಯೂಟರ್ ಸೆಂಟರ್ವೊಂದರಲ್ಲಿ ಪ್ರಿಂಟ್ ಔಟ್ ತೆಗೆಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರಿಗೆ ಸಂಶಯ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪಾಂಡವಪುರ ಪೊಲೀಸರು ಪುರುಷೋತ್ತಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಂಜುಂಡಸ್ವಾಮಿ ಪತ್ರಿಕೆ ನೀಡಿದ್ದಾಗಿ ಮಾಹಿತಿ ಕೊಟ್ಟಿದ್ದಾನೆ. ತಕ್ಷಣ ನಂಜುಂಡಸ್ವಾಮಿಯನ್ನು ವಶಕ್ಕೆ ಪಡೆಯಲಾಗಿದೆ.
ವಿದ್ಯಾರ್ಥಿಗಳಲ್ಲಿ ಆತಂಕ : ಆರೋಪಿಗಳು ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿ ಸಿಕ್ಕಿಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ. ಕೇವಲ ಹಿಂದಿ ಪ್ರಶ್ನೆಪತ್ರಿಕೆ ಮಾತ್ರವೇ ಈ ರೀತಿಯಾಗಿದ್ದಾ? ಅಥವಾ ಹಿಂದಿನ ಪತ್ರಿಕೆಗಳು ಸೋರಿಕೆಯಾಗಿವೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಆರೋಪಿಗಳು ಈ ಹಿಂದೆಯೂ ಇಂತಹ ಕೃತ್ಯ ಮಾಡಿದ್ದರಾ? ಅಥವಾ ಇದೇ ಮೊದಲ ಬಾರಿಗೆ ಮಾಡಿ ಸಿಕ್ಕಿ ಬಿದ್ದಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಇದುವರೆಗೆ ಪಿಯುಸಿ ಮಕ್ಕಳು ಮಾತ್ರ ಆತಂಕಕ್ಕೀಡಾಗಿದ್ದರು. ಆದರೆ, ಮಂಡ್ಯದಲ್ಲಿ ಬೆಳಕಿಗೆ ಬಂದ ಈ ಪ್ರಕರಣದಿಂದ ಎಸ್ಎಸ್ಎಲ್ಸಿ ಮಕ್ಕಳು ಕೂಡ ಆತಂಕ ಪಡುವಂತಾಗಿದೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆಯಿಂದಷ್ಟೆ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ಅಂದಹಾಗೆ ಮಾ.21 ಮತ್ತು 31ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದ್ದು, ಇದುವರೆಗೂ 8 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಏ.12ರಂದು ರಸಾಯನಶಾಸ್ತ್ರ ಮರು ಪರೀಕ್ಷೆ ಮುಗಿದಿದೆ.