ಕರ್ನಾಟಕದಲ್ಲಿರುವ ಕಿವುಡರ ಸಂಖ್ಯೆ ಎಷ್ಟಿದೆ ಗೊತ್ತಾ?
ಬೆಂಗಳೂರು, ಮಾರ್ಚ್ 03 : ತಡೆಗಟ್ಟಬಹುದಾದ ಕಿವುಡುತನದ ಬಗ್ಗೆ ಅರಿವನ್ನುಂಟುಮಾಡುವ ಸಂಬಂಧ ಮಾರ್ಚ್ 3ರಂದು ವಿಶ್ವಾದಾದ್ಯಂತ ಶ್ರವಣ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ಕರ್ನಾಟಕ ಜನಸಂಖ್ಯೆಯಲ್ಲಿ ಸುಮಾರು ಶೇ 5.3ರಷ್ಟು ಜನರಿಗೆ, ಅಂದರೆ ಸುಮಾರು 33 ಲಕ್ಷ ಜನರಿಗೆ ಶ್ರವಣ ಸಮಸ್ಯೆ ಇದೆ ಎಂದು ಅಂದಾಜು ಮಾಡಲಾಗಿದೆ. ಅದರಲ್ಲಿ ಸುಮಾರು 3 ಲಕ್ಷ ಮಕ್ಕಳಿಗೆ ಸಮಸ್ಯೆ ಇದೆ.
2001ರಲ್ಲಿ ನಡೆಸಿದ ಗಣತಿಯ ಪ್ರಕಾರ, ತುಮಕೂರಿನಲ್ಲಿ ಗರಿಷ್ಠ ಶೇ.42ರಷ್ಟು ಕಿವುಡರಿದ್ದಾರೆ ಮತ್ತು ಬೆಂಗಳೂರಿನಲ್ಲಿ ಕನಿಷ್ಠ ಶೇ.27ರಷ್ಟು ಕಿವುಡರಿದ್ದಾರೆ. ಅದರಲ್ಲೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಶ್ರವಣ ಸಮಸ್ಯೆಯಿರುವ ಜನರ ಸಂಖ್ಯೆ ಹೆಚ್ಚು ಎಂದು ಗಣತಿ ತಿಳಿಸಿದೆ.
ಶ್ರವಣ ಸಮಸ್ಯೆ ಬಗ್ಗೆ ಅರಿವನ್ನು ಉಂಟು ಮಾಡಿ ಶ್ರೀಘವಾಗಿ ಪತ್ತೆ ಹಚ್ಚಿದಲ್ಲಿ, ದೀರ್ಘಕಾಲದ ಕಿವುಡುತನವನ್ನು ತಡೆಗಟ್ಟಬಹುದಾಗಿದೆ. ಕರ್ನಾಟಕ ಸರ್ಕಾರವು ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಅನುಷ್ಠಾನಗೊಳಿಸಲು ನಾನಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮ 30 ಜಿಲ್ಲೆಗಳಲ್ಲಿ ಅನುಷ್ಠಾನವಾಗಿದ್ದು, 19 ಜಿಲ್ಲೆಗಳಲ್ಲಿ ಆಡಿಯೋಲಾಜಿಸ್ಟ್, ಆಡಿಯೋಮೆಟ್ರಿಕ್ ಅಸಿಸ್ಟೆಂಟ್ ಹಾಗೂ ಇನ್ಸ್ಟ್ರಕ್ಟರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಜಿಲ್ಲೆಗಳಲ್ಲಿ ಈಗಾಗಲೇ 39686 ಜನರಿಗೆ ಶ್ರವಣ ಪರೀಕ್ಷೆಯನ್ನು ಮಾಡಿಸಲಾಗಿದೆ. ಅದರಲ್ಲಿ 6765 ಜನರಿಗೆ ಶ್ರವಣ ಸಮಸ್ಯೆ ನಿವಾರಣೆ ಮಾಡಲಾಗಿದೆ. 1,871 ಜನರಿಗೆ ಶ್ರವಣ ಯಂತ್ರವನ್ನು ಅಳವಡಿಸಲಾಗಿದ್ದು ಹಾಗೂ 498 ಜನರಿಗೆ ಶಸ್ತ್ರಚಿಕ್ಸಿತೆಯನ್ನು ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಿಗೆ ಆಡಿಯೋಲಾಜಿಸ್ಟ್ಗಳನ್ನು ಆಯ್ಕೆಮಾಡಿ, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಶ್ರವಣ ಪರೀಕ್ಷೆಯನ್ನು ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಉಚಿತ ತಪಾಸಣೆ, ಉಚಿತ ವೈದ್ಯಕೀಯ ಚಿಕಿತ್ಸೆ, ಉಚಿತ ಶಸ್ತ್ರಚಿಕಿತ್ಸೆ, ಉಚಿತ ಶ್ರವಣ ಯಂತ್ರ ವಿತರಣೆ ಹಾಗೂ ವಾಕ್ ಮತ್ತು ಶ್ರವಣ ಪುನ:ಶ್ಚೇತನ ಕಾರ್ಯಕ್ರಮದ ವಿಶೇಷ ಸೇವೆಗಳಾಗಿವೆ.
ಈ ಎಲ್ಲಾ ಸೇವೆಗಳು ಉಚಿತವಾಗಿ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವುದು. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 104 ಅನ್ನು ಸಂಪರ್ಕಿಸಬಹುದಾಗಿದೆ.