ಸಮೃದ್ಧ ಮಳೆಗಾಗಿ ತಲಕಾವೇರಿಯಲ್ಲಿ ವಿಶೇಷ ಪೂಜೆ
ಮಡಿಕೇರಿ, ಮೇ 09 : ನಾಡಿಗೆ ಉತ್ತಮ ಮಳೆಯಾಗಿ ಬರ ಪರಿಹಾರವಾಗಲಿ ಎಂದು ತಾಯಿ ಕಾವೇರಮ್ಮನನ್ನು ಪ್ರಾರ್ಥಿಸಿ ಕಾವೇರಿ ಉಗಮಸ್ಥಾನ ತಲಕಾವೇರಿಯ ಬೃಹ್ಮಕುಂಡಿಕೆಯಲ್ಲಿ ಸಚಿವರು ಮತ್ತು ಶಾಸಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ ಅವರು ಮೊದಲಿಗೆ ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ತೆರಳಿ ಭಗಂಡೇಶ್ವರ, ಮಹಾಗಣಪತಿ, ಸುಬ್ರಮಣ್ಯ, ಮಹಾವಿಷ್ಣು ದೇವರುಗಳಿಗೆ ಪೂಜೆ ಸಲ್ಲಿಸಿದರು. [ಮಲೆನಾಡಿನಲ್ಲೂ ಜಲಕ್ಷಾಮ! ಇದಕ್ಕೆ ಕಾರಣಗಳು ಇಲ್ಲಿವೆ]
ಆ ನಂತರ ತಲಕಾವೇರಿಗೆ ತೆರಳಿ ಬೃಹ್ಮಕುಂಡಿಕೆಯಲ್ಲಿ ಕುಂಕುಮಾರ್ಚನೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಅಲ್ಲಿರುವ ಅಗಸ್ತೇಶ್ವರ ಹಾಗೂ ಗಣಪತಿ ದೇವರುಗಳಿಗೆ ಪೂಜೆ ಸಲ್ಲಿಸಿ ಉತ್ತಮ ಮಳೆ ದಯಪಾಲಿಸಿ ನಾಡಿಗೆ ಬಂದಿರುವ ಸಂಕಷ್ಟವನ್ನು ಪರಿಹರಿಸುವಂತೆ ಬೇಡಿಕೊಂಡರು.
ಈ ಸಂದರ್ಭ ಮಾತನಾಡಿದ ದಿನೇಶ್ ಗುಂಡೂರಾವ್, ನಾಡಿನಲ್ಲಿ ಹೆಚ್ಚಿನ ಮಳೆಯಾಗಿ ಜನರಲ್ಲಿ ನೆಮ್ಮದಿ ಬದುಕು ತರುವಂತಾಗಲಿ ಎಂದು ತಾಯಿ ಕಾವೇರಿ ಮಾತೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಕೋಟ್ಯಂತರ ಜನರ ಜೀವನನಾಡಿಯಾದ ಕಾವೇರಿ ಕಣಿವೆ ಭಾಗದಲ್ಲಿ ಹೆಚ್ಚಿನ ಮಳೆಯಾಗಿ ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯಗಳ ಜನರಲ್ಲಿ ಸಂತಸ ತರುವಂತಾಗಲಿ ಎಂದು ಬೇಡಿಕೊಂಡಿರುವುದಾಗಿ ತಿಳಿಸಿದರು. [ಆರ್ಭಟಿಸಿದ ಮುಂಗಾರು ಪೂರ್ವ ಮಳೆ, ಸೆಕೆ ಇಳಿಕೆ]
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಈ ಬಾರಿ ಭೀಕರ ಬರಗಾಲ ಬಂದಿದೆ, ಮಳೆ ಬಾರದೆ ಜನರು ಬರ ಅನುಭವಿಸುತ್ತಿದ್ದಾರೆ. ತಾಯಿ ಕಾವೇರಿ ಮಾತೆ ಹೆಚ್ಚಿನ ಮಳೆ ತಂದು ನಾಡಿನ ಜನರಲ್ಲಿ ಸುಖ, ಶಾಂತಿ, ನೆಮ್ಮದಿ ನೀಡುವಂತಾಗಲಿ ಎಂದು ಅವರು ಆಶಿಸಿದರಲ್ಲದೆ, ಕುಂಡಿಕೆ ಮೇಲಿನ ಛಾವಣಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯನ್ನು ತೆಗೆದು ಗುಣಮಟ್ಟದ ಹಾಗೂ ಅಗತ್ಯವಿರುವ ಶೀಟನ್ನು ಅಳವಡಿಸುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭ ತಲಕಾವೇರಿ-ಭಾಗಮಂಡಲ ದೇವಾಲಯಗಳ ಆಡಳಿತಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ತಹಸೀಲ್ದಾರ್ ಕುಂಞಮ್ಮ, ದೇವಾಲಯಗಳ ಕಾರ್ಯನಿರ್ವಹಕ ಅಧಿಕಾರಿ ಜಗದೀಶ್ ಕುಮಾರ್, ಸಂಪತ್ಕುಮಾರ್, ವಿನು, ಪ್ರಮುಖರಾದ ಟಿ.ಪಿ.ರಮೇಶ್, ಬಿ.ಟಿ.ಪ್ರದೀಪ್, ರವೀಂದ್ರ ಹೆಬ್ಬಾರ್, ಸುನಿಲ್ ಪತ್ರಾವೊ ಮತ್ತಿತರರು ಇದ್ದರು. [ಮುನಿಸಿಕೊಂಡಿರುವ ವರುಣ ಮಹಾಶಯನಿಗಾಗಿ ಕತ್ತೆಗಳ ಮದುವೆ]
ಚಾಮರಾಜನಗರದಲ್ಲಿ ಮಳೆಗಾಗಿ ಹೋಮ : ಪಟ್ಟಣದ ಗುಂಡ್ಲುಪೇಟೆ ವೃತ್ತದ ಬಳಿಯಿರುವ ಶ್ರೀದೇವಿ ಭೂದೇವಿ ಸಮೇತ ಶ್ರೀ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಸಮ್ಮುಖದಲ್ಲಿ ಉತ್ತಮ ಮಳೆಗಾಗಿ ಭಾನುವಾರ ಹೋಮ ನೆರವೇರಿಸಲಾಯಿತು.
ದೇಶಾದ್ಯಂತ ಉತ್ತಮ ಮಳೆ-ಬೆಳೆಯಾಗಿ ಸಮೃದ್ದಿ ನೆಲೆಸಲು ಎಂದು ಪ್ರಾರ್ಥನೆ ಸಲ್ಲಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬೆಳಿಗ್ಗೆ 6ರಿಂದಲೇ ಸ್ವಾಮಿಗೆ ಗಂಧದಾಭಿಷೇಕ, ಕುಂಕುಮಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ತುಳಸಿಹಾರ ಹಾಗೂ ವಿಶೇಷ ಹೂವಿನ ಅಲಂಕಾರ ಮಾಡಿ ಮಹಾಮಂಗಳಾರತಿ ಮಾಡಲಾಯಿತು.