ಶಿವರಾತ್ರಿಯಂದು ಗೋಕರ್ಣ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ವಿಶೇಷ ವ್ಯವಸ್ಥೆ
ಪುರಾಣ ಪ್ರಸಿದ್ದ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳ ಮಾರ್ಗದರ್ಶನದಲ್ಲಿ ಮಾರ್ಚ್ ಎರಡರಿಂದ ಮಾರ್ಚ್ ಒಂಬತ್ತರ ವರೆಗೆ ಹಲವಾರು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡಿದೆ.
ತಳಿಲುತೋರಣ - ವಿದ್ಯುದ್ದೀಪಾಲಂಕಾರಗಳಿಂದ ದೇವಾಲಯದ ಪರಿಸರವನ್ನು ಶೃಂಗರಿಸಲಾಗಿದ್ದು, ಸೋಮವಾರ (ಮಾ 7) ಶಿವರಾತ್ರಿಯ ಶಿವಯೋಗದ ಶುಭಪರ್ವದಂದು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. (ಶಿವನ ಪಾದ ಸೇರಿದ ಗೋಕರ್ಣ ರಾಜನಂದಿ)
ದಕ್ಷಿಣಕಾಶಿ ಎಂದೇ ಪ್ರಸಿದ್ದವಾಗಿರುವ ಗೋಕರ್ಣದ ಮಹಾಬಲೇಶ್ವರನ ಆತ್ಮಲಿಂಗ ದರ್ಶನಕ್ಕೆ ಶಿವರಾತ್ರಿಯಂದು ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕೆ ದೇವಾಲಯದ ಆಡಳಿತ ವ್ಯವಸ್ಥೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಶಿವರಾತ್ರಿಯ ದಿನದಂದು ದಿನದ 24ಗಂಟೆಯೂ ಆತ್ಮಲಿಂಗಕ್ಕೆ ಭಕ್ತರು ಸ್ವತಃ ಜಲಾಭಿಷೇಕ, ಬಿಲ್ವಾರ್ಚನೆ ಹಾಗೂ ಇತರ ವಿಶೇಷ ಪೂಜೆಗಳನ್ನು ನೆರವೇರಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಶಿವರಾತ್ರಿಯಂದು ದೇವಾಲಯದ ಪರಿಸರದಲ್ಲಿ ರುದ್ರಹವನ, ಮಹಾಕುಂಭಾಭಿಷೇಕ ಪೂರ್ವಕ ಮಹಾಪೂಜೆ, ಪುಷ್ಪ ರಥೋತ್ಸವ, ಜಲಯಾನೋತ್ಸವ, ದೀಪೋತ್ಸವಾದಿಗಳು ವಿಶೇಷವಾಗಿ ನಡೆಯಲಿದೆ.
ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಧಾರ್ಮಿಕ ವಿಧಿವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶ್ರಾಂತ ನ್ಯಾಯಮೂರ್ತಿ ರಾಮಾ ಜೋಯಿಸ್ ಅವರಿಂದ ಉದ್ಘಾಟನೆಗೊಂಡಿದ್ದು, ಕಡಲ ತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಹಲವು ಪ್ರಾಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಿದೆ.
ದೇಶದ ನಾನಾ ಭಾಗಗಳಿಂದ ಆಗಮಿಸುವ ಯಾತ್ರಾರ್ಥಿಗಳ ಅನುಕೂಲಕ್ಕೆ ಹಲವಾರು ವ್ಯವಸ್ಥೆಗಳನ್ನು, ಮುನ್ನೆಚ್ಚರಿಕಾ ಕ್ರಮಗಳನ್ನು ದೇವಾಲಯದ ಆಡಳಿತ ವ್ಯವಸ್ಥೆ ಕೈಗೊಂಡಿದೆ. (ಗೋಮಾತೆಯ ಆಶೀರ್ವಾದದಿಂದ ಶ್ರೀಗಳಿಗೆ ಏನೂ ಆಗಿಲ್ಲ)
ಎಂದಿನಂತೆ ಅಮೃತಾನ್ನ ಪ್ರಸಾದ ಭೋಜನವನ್ನು ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಕಲ್ಪಿಸಲು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು, ಯಾತ್ರಿಕರಿಗೆ ಅನುಕೂಲವಾಗುವಂತೆ ಇತರ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗಿದೆ.
ಪರಂಪರೆಯಿಂದ ರಾಮಚಂದ್ರಾಪುರ ಮಠಕ್ಕೆ ಸೇರಿದ್ದ ದೇವಾಲಯವನ್ನು 2008ರಲ್ಲಿ ಸರ್ಕಾರ ಪುನಃ ಶ್ರೀಮಠಕ್ಕೆ ವಹಿಸಿಕೊಟ್ಟ ನಂತರ, ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಎರಡು ಹೊತ್ತು ಅಮೃತಾನ್ನ ಪ್ರಸಾದ ಭೋಜನ ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುತ್ತಿದೆ.
ಯಾವುದೇ ಶುಲ್ಕವಿಲ್ಲದೇ, ಯಾವುದೇ ಬೇಧವಿಲ್ಲದೇ ಆತ್ಮಲಿಂಗದ ಅರ್ಚನೆಗೆ ಅವಕಾಶ, ನಿಂತುಹೋಗಿದ್ದ ಹಲವಾರು ಪೂಜಾ ವಿಧಿ ವಿಧಾನಗಳ ಪುನರಾರಂಭ, ಗೋಕರ್ಣದ ಸುತ್ತಮುತ್ತಲಿನ ಎಲ್ಲಾ ಸಮುದಾಯದ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಶ್ರೀಮಠದಿಂದ ನೀಡಲಾಗುತ್ತಿದೆ.
ಸ್ವಚ್ಚತೆ ಹಾಗೂ ಗೋಕರ್ಣದ ಸರ್ವತೋಮುಖ ಅಭಿವೃದ್ಧಿದೆ ಯೋಜನೆಗಳು ಸೇರಿದಂತೆ ಹಲವಾರು ಧನಾತ್ಮಕ ಬದಲಾವಣೆಗಳನ್ನು ದೇವಾಲಯದ ಆಡಳಿತ ವ್ಯವಸ್ಥೆ ರಾಮಚಂದ್ರಾಪುರ ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.