ಚಿಕ್ಕಮಗಳೂರು: ತಬ್ಬಲಿಯಾಗಲಿದ್ದ ಯುವತಿಗೆ ಅಣ್ಣನಾದ ಎಸ್ಪಿ ಅಣ್ಣಾಮಲೈ
ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಓರ್ವ ಯುವತಿಗೆ ಅಣ್ಣನಾಗಿ, ಮತ್ತೊಮ್ಮೆ ಆದರ್ಶ ಮೆರೆದಿದ್ದಾರೆ. ತಬ್ಬಲಿಯಾಗಲಿದ್ದ ಯುವತಿಯ ವಿದ್ಯಾಭ್ಯಾಸ ಮತ್ತು ಇತರ ಖರ್ಚುಗಳನ್ನು ಭರಿಸುವ ಭರವಸೆಯನ್ನು ಅವರು ನೀಡಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ 3: ಉಡುಪಿಯ 'ಸಿಂಗಂ' ಎಂದೇ ಖ್ಯಾತಿ ಪಡೆದಿದ್ದ ಎಸ್ಪಿ ಅಣ್ಣಾಮಲೈ ಚಿಕ್ಕಮಗಳೂರಿಗೆ ವರ್ಗಾವಣೆಯಾದ ವಿಷಯ ಎಲ್ಲರಿಗೂ ತಿಳಿದದ್ದೇ. ಇದೀಗ ಅಣ್ಣಾಮಲೈ ತಬ್ಬಲಿಯಾಗಲಿದ್ದ ಯುವತಿಯ ವಿದ್ಯಾಭ್ಯಾಸ ಮತ್ತು ಇತರ ಖರ್ಚುಗಳನ್ನು ಭರಿಸುವ ಅಭಯ ನೀಡಿ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.
ನಡೆದಿದ್ದೇನು?
ಪ್ರೇಮ ಪ್ರಕರಣವೊಂದು ಚಿಕ್ಕಮಗಳೂರಿನ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಯುವತಿಯೊಬ್ಬಳು ಯುವಕನೊಬ್ಬನನ್ನು ಪ್ರೀತಿಸಿ ಮನೆ ಬಿಟ್ಟು ಹೊರಟು ನಿಂತಿದ್ದಳು. ಇದರಿಂದ ಆಕೆಯ ಇನ್ನೊಬ್ಬಾಕೆ ಸಹೋದರಿ ಒಂಟಿಯಾಗುತ್ತಿದ್ದಳು.[ಚಿಕ್ಕಮಗಳೂರು ಹನಿಟ್ರ್ಯಾಪ್, ಕಿಡಿಕಾರಿದ ಎಸ್ ಪಿ ಅಣ್ಣಾಮಲೈ]
ಹೀಗೆ ಒಂದು ಕಡೆ ಮದುವೆ, ಇನ್ನೊಂದು ಕಡೆ ಅನಾಥವಾಗುತ್ತಿದ್ದ ಯುವತಿ. ಅಣ್ಣಾಮಲೈ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದರು. ಈ ಹಂತದಲ್ಲಿ ಅಣ್ಣಾಮಲೈ ಕಾನೂನನ್ನು ಮೀರಿ ಒಬ್ಬರ ಪರವಾಗಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಸ್ಪಿ ಅಣ್ಣಾಮಲೈ, ಕಿರಿಯ ಸಹೋದರಿಯ ಎಲ್ಲ ಅಗತ್ಯಗಳನ್ನು ಹಾಗೂ ವಿದ್ಯಾಭ್ಯಾಸದ ಹೊರೆಯನ್ನು ಹೊರುವುದಾಗಿ ಅಭಯ ನೀಡಿದರು.[ಕಷ್ಟದ ಅರಿವಿದ್ದವರು ಎಂದೂ ಅಪರಾಧ ಮಾಡಲಾರರು: ಅಣ್ಣಾಮಲೈ]
''ನಿನ್ನ ಅಕ್ಕ ಪ್ರೀತಿಸಿ ಮದುವೆಯಾದರೆಂಬ ಕಾರಣಕ್ಕೆ ನೀನು ಒಂಟಿಯಾದೆ ಎಂದು ಹೆದರಬೇಡ. ನಿನ್ನ ವಿದ್ಯಾಭ್ಯಾಸ ಮುಂದುವರೆಯುತ್ತದೆ. ನಿನ್ನ ವಿದ್ಯಾಭ್ಯಾಸ ಮುಗಿಯುವವರೆಗೆ ಸಂಪೂರ್ಣ ವೆಚ್ಚವನ್ನು ಭರಿಸುತ್ತೇನೆ. ನಂತರ ಕೆಲಸಕ್ಕೆ ಸೇರಿಸುವ ಜವಾಬ್ದಾರಿಯು ನನ್ನದು, ನಂತರ ನಿನ್ನ ದಾರಿ ನೋಡಿಕೋ," ಎಂದು ಹೇಳಿದ್ದಾರೆ.
ಮಾನವೀಯತೆ ಎಲ್ಲವನ್ನು ಮೀರಿದ್ದು, ಮನುಷ್ಯನಲ್ಲಿ ಮಾನವೀಯ ಗುಣ ಅಗತ್ಯ . ಎಸ್ಪಿ ಅಣ್ಣಾಮಲೈ ಅವರು ಮಾನವೀಯತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಅವರ್ಣನೀಯ . ಅವರ ಈ ಆದರ್ಶಕ್ಕೆ ನಮ್ಮದೊಂದು ಸೆಲ್ಯೂಟ್ .