ಚಿಕ್ಕಮಗಳೂರಿನಲ್ಲಿ ಶೀಘ್ರ ಸ್ಪೈಸ್ ಪಾರ್ಕ್ ಸ್ಥಾಪನೆ
ಚಿಕ್ಕಮಗಳೂರು, ನವೆಂಬರ್, 13: ಉತ್ಕೃಷ್ಟ ದರ್ಜೆಯ ಕಾಳು ಮೆಣಸು ಬೆಳೆಯುವ ಚಿಕ್ಕಮಗಳೂರಿನಲ್ಲಿ ರಾಜ್ಯ ಸರ್ಕಾರದ ಸಹಯೋಗದಲ್ಲಿ 'ಸ್ಪೈಸ್ ಪಾರ್ಕ್' ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ರಾಸಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ತಿಳಿಸಿದರು.
ಶನಿವಾರ ಚಿಕ್ಕಮಗಳೂರಿನಲ್ಲಿ ಹಮ್ಮಿಕೊಂಡಿದ್ದ ಬ್ಲಾಕ್ ಗೋಲ್ಡ್ ಲೀಗ್ ಜಾಗತಿಕ ಕಾಳು ಮೆಣಸು ಸಮ್ಮೇಳವನ್ನು ಉದ್ಘಾಟಿಸಿ ಅವರು ಮತನಾಡಿದರು.
"ಕಾಳು ಮೆಣಸು ಉತ್ಪಾದನೆಯಲ್ಲಿ ದೇಶಕ್ಕೆ ಅಗ್ರಸ್ಥಾನ ಕಲ್ಪಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ. ಪಾರ್ಕ್ ಸ್ಥಾಪನೆಗೆ ಕನಿಷ್ಟ 25ರಿಂದ 50 ಎಕರೆ ಜಾಗ ಬೇಕಾಗುತ್ತದೆ. ರಾಜ್ಯ ಸರ್ಕಾರ ಭೂಮಿ ಒದಗಿಸಿದರೆ ಕೇಂದ್ರ ಅನುದಾನ ಮತ್ತು ತಂತ್ರಜ್ಞಾನ ಒದಗಿಸಲಿದೆ" ಎಂದು ಅವರು ಹೇಳಿದರು.
ಸ್ಪೈಸ್ ಪಾರ್ಕ್ ಸ್ಥಾಪನೆಗೆ ಅವಶ್ಯವಿರುವ ಪ್ರಯೋಗಾಲಯ, ಉಗ್ರಾಣ, ಸಂಶೋಧನಾ ಕೇಂದ್ರ ಸೇರಿದಂತೆ ಎಲ್ಲ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಸುಂದರ ಪ್ರಾಕೃತಿಕ ಸೊಬಗು ಹೊಂದಿರುವ ಮತ್ತು ಜಾಗತಿಕ ಗುಣಮಟ್ಟದ ಕಾಳು ಮೆಣಸು ಬೆಳೆಯುವುದರಲ್ಲಿ ಹೆಸರಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ ಸ್ಥಾಪನೆ ವಿಪುಲ ಅವಕಾಶಗಳಿವೆ ಎಂದು ಅವರು ತಿಳಿಸಿದರು.
ಸಮ್ಮೇಳನದಲ್ಲಿ 50ಕ್ಕೂ ಹೆಚ್ಚು ವಸ್ತು ಪ್ರದರ್ಶನ ಮಳಿಗೆಗಳಲ್ಲಿ ಉತ್ಕೃಷ್ಟ ದರ್ಜೆಯ ಕಾಳು ಮೆಣಸು, ಮತ್ತು ಕಾಫಿಗೆ ಸಂಬಂಧಿಸಿದ ಯಂತ್ರೋಪಕರಣ, ಕೀಟನಾಶಕ, ಸಾವಯವ ಗೊಬ್ಬರ, ಕಾಫಿ, ಶುಂಠಿ, ವೈನ್ ಸೇರಿದಂತೆ ಹಲವು ಬಗೆಯ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಯುಎಸ್ ಎ ನೆದರ್ ಲ್ಯಾಂಡ್, ಪೋರ್ಚುಗಲ್, ಶ್ರೀಲಂಕಾ ಸೇರಿದಂತೆ ವಿವಿಧ ದೇಶದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.