ಶಿರಸಿ ಜಾತ್ರೆ ಅದ್ದೂರಿ ಆರಂಭ, ಮೊಳಗಿದ ಜಯಘೋಷ
ಶಿರಸಿ, ಮಾರ್ಚ್, 23: ಕರ್ನಾಟಕದ ಅತಿದೊಡ್ಡ ಜಾತ್ರೆ ಶಿರಸಿ ಮಾರಿಕಾಂಬಾ ಜಾತ್ರೆಗೆ ಮಂಗಳವಾರ ವಿಧ್ಯುಕ್ತ ಚಾಲನೆ ಸಿಕ್ಕಿದೆ. ಮಾರಿಕಾಂಬಾ ದೇವಿಯನ್ನು ದೇವಾಲಯದಿಂದ ಗದ್ದುಗೆಗೆ ಕರೆದುಕೊಂಡು ಬರಲಾಗಿದ್ದು ಸಂಭ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾದರು.
ಮೂರು ಶತಮಾನಗಳ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಭಕ್ತರು ಸರದಿಯಲ್ಲಿ ನಿಂತು ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ.
ಮಾರಿಕಾಂಬಾ ದೇವಿಯನ್ನು ಶೋಭಾಯಾತ್ರೆ ಮೂಲಕ ಬಿಡಕಿ ಬಯಲಿನಲ್ಲಿ ನಿರ್ಮಾಣ ಮಾಡಿರುವ ಭವ್ಯ ವೇದಿಕೆಗೆ ಕರೆದುಕೊಂಡು ಬರಲಾಯಿತು. ಜಾತ್ರೆ ಮಾರ್ಚ್ 30 ರ ತನಕ ನಡೆಯಲಿದ್ದು ಸುಮಾರು 5 ಲಕ್ಷಕ್ಕೂ ಅಧಿಕ ಜನರು ಸಾಕ್ಷಿಯಾಗುವ ನಿರೀಕ್ಷೆ ಇದೆ.[ಶಿರಸಿ ಮಾರಿಕಾಂಬಾ ಜಾತ್ರೆಯ ಇತಿಹಾಸವೇನು?]
ಮಾರಿಜಾತ್ರೆ ಎಂದು ಸ್ಥಳೀಯರಿಂದ ಕರೆಸಿಕೊಳ್ಳುವ ಈ ಜಾತ್ರೆ ಬೇರೆ ಕ್ಷೇತ್ರಗಳ ಜಾತ್ರೆ, ರಥೋತ್ಸವಗಳಿಗಿಂತ ವಿಭಿನ್ನ. ಬೇರೆಡೆ, ಮೂಲ ವಿಗ್ರಹ ದೇವಸ್ಥಾನದಲ್ಲೇ ಇದ್ದು ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನ ನಡೆಯುತ್ತದೆ. ಉತ್ಸವ ಮೂರ್ತಿಯನ್ನು ರಥ ಅಥವಾ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ.(ಚಿತ್ರಗಳು-ಕಿರಣ್ ಹೆಗಡೆ, ಹಣಜಿ)
ದೇವಿಗೆ ಅಲಂಕಾರ
ಏಳು ಅಡಿ ಎತ್ತರದ ಭವ್ಯ ವಿಗ್ರಹ, ವಜ್ರ, ನವರತ್ನ ಖಚಿತ ಸ್ವರ್ಣ ಕಿರೀಟ, ಹಾರ, ನೂಪುರ, ಕಡಗಗಳು, ಬೆಳ್ಳಿ ಪ್ರಭಾವಳಿ, ಎಂಟು ಕೈಗಳು, ಒಂದೊಂದು ಕೈಲೂ ಒಂದೊಂದು ವಿಶಿಷ್ಟ ಸ್ವರ್ಣಖಚಿತ ಆಯುಧ ಹಿಡಿದ ಸಿಂಹವಾಹಿನಿ, ಮಹಿಷಮರ್ದಿನಿ, ಕೆಂಬಣ್ಣದ ಮುಖ, ಅರಳಿದ ಕಣ್ಣುಗಳ ಲಕ್ಷಣ ನೋಡಿದರೆ ಸಾಕ್ಷಾತ್ ದುರ್ಗೆಯೇ ನಿಂತಂತೆ ಭಾಸವಾಗುತ್ತದೆ.
ರಥೋತ್ಸವ
ಅಲಂಕೃತ ಮಾರಿಕಾಂಬಾ ದೇವಿಯನ್ನು ರಥೋತ್ಸವದ ಮೂಲಕ ಕರೆದುಕೊಂಡು ಬರಲಾಯಿತು.
ಕೋಣ ಬಲಿ ಇಲ್ಲ
ಕೋಣವನ್ನು ಜಾತ್ರೆಯ ಕೊನೆಯ ದಿನ ಬಲಿ ಕೊಡಲಾಗುತ್ತಿತ್ತು. ಆದರೆ 1933 ರಲ್ಲಿ ಮಹಾತ್ಮಾ ಗಾಂಧೀಜಿಯವರು ಶಿರಸಿ ಭೇಟಿ ನೀಡಿದ ನಂತರ ಪ್ರಾಣಿ ಬಲಿ ನಿಲ್ಲಿಸಿದರು.
ಹೋಳಿ ಹುಣ್ಣಿಮೆ ಇಲ್ಲ
ಇನ್ನೊಂದು ವಿಶೇಷವೆಂದರೆ ಮಾರಿಜಾತ್ರೆ ಇರೋ ವರ್ಷ ಇಡೀ ಶಿರಸಿ ನಗರದಲ್ಲಿ ಹೋಳಿಹುಣ್ಣಿಮೆ ಹಬ್ಬವನ್ನು ಆಚರಿಸುವುದಿಲ್ಲ. ಎಲ್ಲಿಯೂ ಕಾಮನ ಮೂರ್ತಿ ಪ್ರತಿಷ್ಠಾಪಿಸಲ್ಲ. ಬಣ್ಣದಾಟವನ್ನೂ ಕೂಡ ಯಾರೂ ಆಡುವುದಿಲ್ಲ.
ರಾಜ್ಯದ ಚಿತ್ತ ಶಿರಸಿ ಮೇಲೆ
ಪಕ್ಕದ ಜಿಲ್ಲೆಗಳು ಸೇರಿದಂತೆ ಇಡೀ ಉತ್ತರ ಕನ್ನಡದ ಚಿತ್ತ ಶಿರಸಿಯತ್ತ. ಶಿರಸಿ ತಾಲೂಕಿನ ಯಾವುದೇ ಊರಿನಲ್ಲೂ ಜಾತ್ರೆ ಮುಗಿಯುವ ತನಕ ಮದುವೆ-ಮುಂಜಿಗಳಂಥ ಕಾರ್ಯಕ್ರಮ ಹಮ್ಮಿಕೊಳ್ಳುವುದಿಲ್ಲ. ಸಾಂಪ್ರದಾಯಿಕ ಅಡಿಕೆ ವ್ಯಾಪಾರ ಜಾತ್ರೆಯಲ್ಲಿ ಬಂದ್.
ದೇವಾಲಯದಿಂದ ಹೊರಟ ಅಮ್ಮ
ಮಾರಿಕಾಂಬೆಯನ್ನು ದೇವಾಲಯದಿಂದ ಬನವಾಸಿ ರಸ್ತೆ ಮಾರ್ಗವಾಗಿ ಬಿಡಕಿ ಬಯಲಿಗೆ ಕರೆದುಕೊಂಡು ಬರಲಾಯಿತು. ಈ ವೇಳೆ ಕಂಡುಬಂದ ಜಾನಪದ ನೃತ್ಯ ಪದ್ಧತಿಗಳು ಗಮನ ಸೆಳೆದವು.
ಜಾತ್ರಾ ನೋಟ
ಮಾರಿಕಾಂಬಾ ದೇವಿ ಸ್ಥಳಕ್ಕೆ ಆಗಮಿಸುವ ವೇಳೆ ಕಂಡು ಬಂದ ಜಾತ್ರಾ ನೋಟ. ನೆರೆದಿದ್ದ ಭಕ್ತ ವೃಂದ.