ಶಿರಸಿ: ಬನವಾಸಿ ಕದಂಬೋತ್ಸವಕ್ಕೆ ಭರದ ಸಿದ್ಧತೆ
ಶಿರಸಿ, ಜ. 26 : ತಾಲೂಕಿನ ಬನವಾಸಿಯಲ್ಲಿ ಫೆ. 7 ಹಾಗೂ 8ರಂದು ಕದಂಬೋತ್ಸವ ನಡೆಯಲಿದ್ದು ಆಚರಣೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪೂರ್ವಭಾವಿ ಸಭೆ ನಡೆಸಿದ ಅಧಿಕಾರಿಗಳ ತಂಡ ಕಾರ್ಯಕ್ರಮದ ವಿವರ ನೀಡಿತು.
ಈ ಬಾರಿ ಉತ್ಸವದಲ್ಲಿ ಜಾನುವಾರು ಪ್ರದರ್ಶನ ಹಾಗೂ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗುವುದು ಎಂದು ಕದಂಬೋತ್ಸವ ಸಮಿತಿ ಅಧ್ಯಕ್ಷ, ಉಪವಿಭಾಗಾಧಿಕಾರಿ ಪವನಕುಮಾರ ಮಲಪಾಟಿ ತಿಳಿಸಿದರು.
ಬನವಾಸಿ ಭಾಗದಲ್ಲಿ ಕೃಷಿ ಭೂಮಿಗಳೇ ಹೆಚ್ಚಿರುವುದರಿಂದ ಜಾನುವಾರು ಪ್ರದರ್ಶನ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ಸಭೇಯಲ್ಲಿ ಕೇಳಿಬಂತು. ಎರಡು ದಿನಗಳ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ನಡೆಸಲು ಸ್ಥಳೀಯ ವೈದ್ಯರ ಸಹಕಾರ ಪಡೆಯಬೇಕು ಎಂದು ಸೂಚಿಸಲಾಯಿತು.
ಜಿಲ್ಲೆ, ರಾಜ್ಯ ಚಿತ್ರಕಲಾ ಕಲಾವಿದರನ್ನು ಸೇರಿಸಿ ಬನವಾಸಿ ಮಧುಕೇಶ್ವರ ದೇವಾಲಯದ ಚಿತ್ರ ಬಿಡಿಸಿ ಅವುಗಳ ಪ್ರದರ್ಶನ ಮಾಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯನ್ನು ಪುನರ್ ನಿರ್ಮಾಣಕ್ಕೆಮ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಡಿಡಿಪಿಐ ಎಂ.ಎಸ್. ಪ್ರಸನ್ನಕುಮಾರ, ತಹಶೀಲ್ದಾರ ಬಸಪ್ಪ ಪೂಜಾರಿ, ಸಿಪಿಐ ಗಣಪತಿ ಜಿ.ಎಲ್., ಲೋಕೋಪಯೋಗಿ ಅಧಿಕಾರಿ ಬಿ.ಎನ್. ಭಟ್ಟ, ಪಶು ಸಂಗೋಪನಾ ಅಧಿಕಾರಿ ನರಸಿಂಹ ಮಾರ್ಕಂಡೆ, ಕೃಷಿ ಅಧಿಕಾರಿ ನಾಗರಾಜ ನಾಯ್ಕ, ತೋಟಗಾರಿಕಾ ಅಧಿಕಾರಿ ಅಣ್ಣಪ್ಪ ನಾಯ್ಕ ಹಾಜರಿದ್ದರು.