ಸಿದ್ದು ಕುರ್ಚಿ ಉಳಿವಿಗಾಗಿ ಹೈಕಮಾಂಡಿಗೆ ಸಾವಿರ ಕೋಟಿ ರವಾನೆ?
ಮುಖ್ಯಮಂತ್ರಿಗಳ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಮೂಲಕ ದೆಹಲಿ ಹೈಕಮಾಂಡಿಗೆ ರು.1 ಸಾವಿರ ಕೋಟಿ ಹಣ ತಲುಪಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಖ್ಯಮಂತ್ರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬಾಗಲಕೋಟೆ, ಫೆಬ್ರವರಿ,10: ಮುಖ್ಯಂಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ದೆಹಲಿ ಕೆಲವು ನಾಯಕರಿಗೆ ರು.1 ಸಾವಿರ ಕೋಟಿ ಹಣ ಸಂದಾಯ ಮಾಡುತ್ತಿದ್ದಾರೆ ಎಂದು ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮುಖ್ಯಮಂತ್ರಿಗಳ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಮೂಲಕ ದೆಹಲಿ ಹೈಕಮಾಂಡಿಗೆ ರು.1 ಸಾವಿರ ಕೋಟಿ ಹಣ ತಲುಪಿಸುತ್ತಿದ್ದಾರೆ. ಇದನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರು ಡೈರಿಯ ಮಾಹಿತಿ ಆಧಾರದ ಮೇಲೆ ಗೋವಿಂದರಾಜು ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.[ನಂಜನಗೂಡು ಉಪಚುನಾವಣೆಗೆ ಕಾಂಗ್ರೆಸ್ ಗೆ ಅಭ್ಯರ್ಥಿ ಬೇಕಾಗಿದ್ದಾರೆ!]
ರಾಜ್ಯ ಕಾಂಗ್ರೆಸ್ ಮುಖಂಡರಿಂದ ದೆಹಲಿ ರಾಷ್ಟ್ರೀಯ ಕಾಂಗ್ರೆಸ್ ಮುಖಂಡರಿಗೆ ರು. 1 ಸಾವಿರಕ್ಕೂ ಹೆಚ್ಚು ದೇಣಿಗೆ ರವಾನೆಯಾಗಿದೆ. ಈ ಹಣವನ್ನು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಕೈಯಿಂದ ಕೇಂದ್ರದ ನಾಯಕರಿಗೆ ಕಳುಹಿಸಲಾಗಿದೆ. ಈ ಬಗ್ಗೆ ಡೈರಿಯಲ್ಲಿ ಉಲ್ಲೇಖವಿದೆ ಅದನ್ನು ದಾಖಲೆ ಸಹಿತ ಬಿಡುಗಡೆಗೊಳಿಸಲು ನಾನು ಸಿದ್ಧ, ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಸತ್ಯ ಹೊರಹಾಕಬೇಕು ಎಂದು ಸವಾಲು ಹಾಕಿದರು.
ಇನ್ನು ಕುಷ್ಟಗಿ ವಿಭಾಗದಲ್ಲಿ ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಮಾಡದೇ ₹43 ಕೋಟಿ ಕಾಂಗ್ರೆಸ್ ತಿಂದಿದೆ ಇದರ ಬಗ್ಗೆ ದಾಖಲೆಗಳಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಗೂ ಮುನ್ನ ಎಸ್ಸೆಂ ಕೃಷ್ಣ ಮತ್ತು ಅಂಬರೀಶ್ ಪಕ್ಷ ಸೇರುವ ವಿಷಯವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದು, ಈ ಬಗ್ಗೆ ದಿನಪತ್ರಿಕೆಯಲ್ಲಿ ಓದುತ್ತಿದ್ದೇನೆ ಹೊರತು ಯಾವುದೇ ಖಚಿತ ಮಾಹಿತಿ ನನ್ನ ಬಳಿ ಬಂದಿಲ್ಲ ಎಂದು ತಿಳಿಸಿದರು.