ಆರು ತಿಂಗಳಲ್ಲಿ ಸಿದ್ದರಾಮಯ್ಯರನ್ನು ಕಾಡಿದ 8 ವಿವಾದಗಳು!
ಬೆಂಗಳೂರು, ಜುಲೈ 14 : ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಪಾಲಿಗೆ 2016 ಸಂಕಟ ತರುತ್ತದೆಯೇ?. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ವರ್ಷದ ಆರು ತಿಂಗಳಿನಲ್ಲಿ ಹಲವಾರು ವಿವಾದಗಳಲ್ಲಿ ಮುಳುಗೆದ್ದಿದೆ. ಮುಂಬರುವ ಆರು ತಿಂಗಳಿನಲ್ಲಿ ಏನು ಕಾದಿದೆಯೋ?.
ವಜ್ರ ಖಚಿತ ಉಬ್ಲೋ ವಾಚ್ ವಿವಾದ ಈ ವರ್ಷದ ಆರಂಭದಲ್ಲಿ ಸ್ವತಃ ಮುಖ್ಯಮಂತ್ರಿಗಳನ್ನು ಕಾಡಿತು. ನಂತರ ಸಂಪುಟದ ಹಲವು ಸಚಿವರು ವಿವಾದವನ್ನು ಹುಟ್ಟು ಹಾಕುತ್ತಿದ್ದಾರೆ. ವಾಚ್ನಿಂದ ಆರಂಭವಾದ ಸರ್ಕಾರದ ವಿವಾದಗಳು ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ತನಕ ಬಂದು ನಿಂತಿವೆ. [ಸಿದ್ದರಾಮಯ್ಯ ಸರಕಾರದ 10 ಜನಪ್ರಿಯ ಯೋಜನೆಗಳು]
ವಾಚು, ಎಸಿಬಿ ರಚನೆ, ಲ್ಯಾಬ್ ಹಗರಣ, ಸಂಪುಟ ಪುನಾರಚನೆ, ಅನುಪಮಾ ಶೆಣೈ ರಾಜೀನಾಮೆ, ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆ, ಎಂ.ಕೆ.ಗಣಪತಿ ಆತ್ಮಹತ್ಯೆ ಹೀಗೆ 2016ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ವಿವಾದಗಳೇ ಕಾಡುತ್ತಿವೆ.['ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು']
ಮುಖ್ಯಮಂತ್ರಿಗಳ ಬಿಳಿ ಕಾರಿನ ಮೇಲೆ ಕಪ್ಪು ಕಾಗೆ ಕುಳಿತಿದ್ದಕ್ಕೆ ಹೀಗೆ ಆಗುತ್ತಿದೆಯೇ?, ಎಂದು ಪ್ರಶ್ನಿಸಿದರೆ ಮೌಡ್ಯ ನಿಷೇಧ ಕಾಯ್ದೆಯಡಿ ಬರುವ ಅಪಾಯವಿದೆ. ಸರ್ಕಾರವನ್ನು ಕಾಡಿದ 8 ವಿವಾದಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.....
ಪಾರದರ್ಶಕ ಆಡಳಿತದ ವಿವಾದ
2016ರ ಮಾರ್ಚ್ ತಿಂಗಳಿನಲ್ಲಿ ಸರ್ಕಾರ ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳವನ್ನು (Anti Corruption Bureau- ACB) ರಚನೆ ಮಾಡಿ ಆದೇಶ ಹೊರಡಿಸಿತು. ಎಸಿಬಿ ರಚನೆ ಮಾಡುವ ಮೂಲಕ ಲೋಕಾಯುಕ್ತ ಸಂಸ್ಥೆ ಮುಚ್ಚಲು ಸರ್ಕಾರ ಸಂಚು ರೂಪಿಸಿದೆ ಎಂದು ಭಾರೀ ಚರ್ಚೆ ನಡೆಯಿತು. ಎಸಿಬಿ ರಚನೆ ಕುರಿತು ಹಲವು ಸುತ್ತಿನ ಸ್ಪಷ್ಟನೆಗಳನ್ನು ನೀಡಿದರೂ ವಿವಾದ ತಣ್ಣಗಾಗಲಿಲ್ಲ. ವರ್ಷದ ಆರಂಭದಲ್ಲಿಯೇ ಎಸಿಬಿ ವಿಚಾರದಲ್ಲಿ ಸರ್ಕಾರ ವಿವಾದಕ್ಕೆ ಸಿಲುಕಿತು.
ಸಿದ್ದರಾಮಯ್ಯ ಕಾಡಿದ ವಜ್ರದ ವಾಚು
2016ರ ಆರಂಭದಲ್ಲಿ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಜ್ರ ಖಚಿತ ಊಬ್ಲೋ ವಾಚ್. ವಾಚ್ ಯಾರು ಕೊಟ್ಟರು, ಏಕೆ ಕೊಟ್ಟರು? ಎಂದು ವಾರಗಟ್ಟಲೇ ಚರ್ಚೆ ನಡೆಯಿತು. ಪ್ರತಿಪಕ್ಷಗಳ ತೀವ್ರ ಒತ್ತಾಯಕ್ಕೆ ಮಣಿದ ಸಿದ್ದರಾಮಯ್ಯ ಅವರು ಅಂತಿಮವಾಗಿ ವಾಚ್ ಅನ್ನು ಆಗ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಅವರ ಮೂಲಕ ಸರ್ಕಾರ ಹಸ್ತಾಂತರ ಮಾಡಿದರು. ವಾಚ್ ಈಗ ಸರ್ಕಾರದ ಆಸ್ತಿ. ಆದರೆ, ಈ ಬಗ್ಗೆ ಎಸಿಬಿಯಲ್ಲಿ ದೂರಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಪುತ್ರನ ಕಂಪನಿಗೆ ಟೆಂಡರ್ ಕೊಟ್ಟ ವಿವಾದ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಮಗ ಡಾ. ಯತೀಂದ್ರ ಅವರು ನಿರ್ದೇಶಕರಾಗಿರುವ ಕಂಪನಿ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯುಷನ್ಸ್ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಮತ್ತು ಡಯಾಗ್ನಸ್ಟಿಕ್ ಕೇಂದ್ರ ತೆರೆಯುಲು ಟೆಂಡರ್ ಕೊಟ್ಟಿದ್ದು ತೀವ್ರ ಟೀಕೆಗೆ ಗುರಿಯಾಯಿತು. ವಿಪಕ್ಷಗಳು ಮತ್ತು ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಪುಟ ಪುನಾರಚನೆ ಮಾಡಿ ವಿವಾದಕ್ಕೆ ಸಿಲುಕಿದ ಸಿಎಂ
ಜೂನ್ 19ರಂದು 14 ಸಚಿವರನ್ನು ಸಂಪುಟದಿಂದ ಕೈಬಿಟ್ಟು 13 ಶಾಸಕರನ್ನು ಸೇರಿಸಿಕೊಂಡ ಸಿದ್ದರಾಮಯ್ಯ ಅವರು ಸ್ವಪಕ್ಷೀಯ ನಾಯಕರಿಂದಲೇ ಅಸಮಾಧಾನ ಎದುರಿಸಬೇಕಾಯಿತು. ಸಚಿವ ಸ್ಥಾನ ಕಳೆದುಕೊಂಡವರು ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಅಂಬರೀಶ್, ವಿ.ಶ್ರೀನಿವಾಸ ಪ್ರಸಾದ್ ಅವರ ಅಸಮಾಧಾನ ಇನ್ನೂ ಶಮನಗೊಂಡಿಲ್ಲ.
ಅನುಪಮಾ ಶೆಣೈ ರಾಜೀನಾಮೆ
ಕೂಡ್ಲಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ರಾಜೀನಾಮೆ ನೀಡಿದ್ದು ಭಾರೀ ವಿವಾದ ಹುಟ್ಟು ಹಾಕಿತು. ಆಗ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪರಮೇಶ್ವರ ನಾಯಕ್ ಅವರ ಕಿರುಕುಳದಿಂದಾಗಿ ರಾಜೀನಾಮೆ ನೀಡಿದ್ದಾರೆ ಎಂದು ವಿವಾದ ಹುಟ್ಟುಕೊಂಡಿತು. ಸಾಮಾಜಿಕ ಜಾಲ ತಾಣದಲ್ಲಿ ಸರ್ಕಾರದ ವಿರುದ್ಧ ಬರೆಯುವ ಮೂಲಕ ಅನುಪಮಾ ಅವರು ಜನರ ಆಕ್ರೋಶವನ್ನು ಬಡಿದೆಬ್ಬಿಸಿದದರು. ಸಂಪುಟ ಪುನಾರಚನೆ ಸಂದರ್ಭದಲ್ಲಿ ಪರಮೇಶ್ವರ ನಾಯಕ್ ಸಚಿವ ಸ್ಥಾನ ಕಳೆದುಕೊಂಡರು, ಅನುಪಮಾ ಅವರ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿತು.
ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ
ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರು ಜುಲೈ 5ರಂದು ಆತ್ಮಹತ್ಯೆ ಮಾಡಿಕೊಂಡರು. ಉದ್ಯಮಿಯನ್ನು ಅಪಹರಣ ಮಾಡಿದ ಆರೋಪ ಎದುರಿಸುತ್ತಿದ್ದ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಠಾಣಾ ವ್ಯಾಪ್ತಿಯಲ್ಲಿರುವ ಮಾವನ ಮನೆಯಲ್ಲಿ ನೇಣಿಗೆ ಶರಣಾದರು. ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸರ್ಕಾರ ಆತ್ಮಹತ್ಯೆಯ ತನಿಖೆಯನ್ನು ಸಿಐಡಿಗೆ ವಹಿಸಿದೆ.
ಡಿವೈಎಸ್ಪಿ ಎ.ಕೆ.ಗಣಪತಿ ಆತ್ಮಹತ್ಯೆ
ಜುಲೈ 7ರಂದು ಮಂಗಳೂರು ಐಜಿ ಕಚೇರಿ ಡಿವೈಎಸ್ಪಿ ಎಂ.ಕೆ.ಗಣಪತಿ ಅವರು ಮಡಿಕೇರಿಯ ವಿನಾಯಕ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಸಾಯುವ ಮುನ್ನ ಗಣಪತಿ ಅವರು 'ನನಗೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು. ನಂತರ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಆದರೆ, ಪ್ರತಿಪಕ್ಷಗಳು ಸಿಬಿಐ ತನಿಖೆಗಾಗಿ ಪಟ್ಟು ಹಿಡಿದು ಅಹೋರಾತ್ರಿ ಧರಣಿ ನಡೆಸುತ್ತಿವೆ.
ಇತರ ಕೆಲವು ವಿವಾದಗಳು
ಸಿದ್ದರಾಮಯ್ಯ
ಅವರನ್ನು
ಕಾಡಿದ
ದೊಡ್ಡ
ವಿವಾದಗಳು
ಇವು.
ಆದರೆ,
ಇನ್ನೂ
ಕೆಲವು
ವಿವಾದಗಳು
ಸುದ್ದಿ
ಮಾಡಿದವು.
ಅವುಗಳು...
*
ಸಿದ್ದರಾಮಯ್ಯ
ಅವರು
ಹೊಸ
ಕಾರು
ಖರೀದಿ
ಮಾಡಿದ್ದು
*
ಮೈಸೂರು
ಜಿಲ್ಲಾಧಿಕಾರಿಗೆ
ಸಿದ್ದರಾಮಯ್ಯ
ಪರಮಾಪ್ತ
ಬೆದರಿಕೆ
ಹಾಕಿದ್ದು
*
ಲೋಕಾಯುಕ್ತರ
ನೇಮಕ
ಕಡತ
ಎರಡು
ಬಾರಿ
ವಾಪಸ್
ಬಂದದ್ದು