ಸಂಪುಟ ಪುನಾರಚನೆ : ಶುಕ್ರವಾರದ 6 ಪ್ರಮುಖ ಬೆಳವಣಿಗೆಗಳು
ಬೆಂಗಳೂರು, ಜೂನ್ 17 : ಸಚಿವ ಸಂಪುಟ ಪುನಾರಚನೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಪಕ್ಷದ ಇತರ ನಾಯಕರ ನಡುವೆ ಒಮ್ಮತ ಮೂಡಿಲ್ಲ. ಆದ್ದರಿಂದ, ಶುಕ್ರವಾರ ಸ್ಪಷ್ಟವಾದ ಚಿತ್ರಣ ಲಭ್ಯವಾಗಿಲ್ಲ. ಶನಿವಾರ ಬೆಳಗ್ಗೆ 10 ಗಂಟೆಗೆ ಮತ್ತೊಂದು ಸುತ್ತಿನ ಸಭೆಗೆ ಮುಹೂರ್ತ ನಿಗದಿಯಾಗಿದೆ.
ಕರ್ನಾಟಕದ ರಾಜಕೀಯ ಸಂಪೂರ್ಣವಾಗಿ ದೆಹಲಿಗೆ ಶಿಫ್ಟ್ ಆಗಿದೆ. ಶುಕ್ರವಾರ ಸರಣಿ ಸಭೆಗಳು ನಡೆದರೂ ಎಲ್ಲೂ ಒಮ್ಮತದ ತೀರ್ಮಾನ ಹೊರಬಂದಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಸಭೆಯೂ ಅಪೂರ್ಣವಾಗಿದ್ದು, ಮುಂದೇನು? ಎಂಬ ಕುತೂಹಲ ಹುಟ್ಟು ಹಾಕಿದೆ. [ಸಂಪುಟ ಸೇರಲಿರುವ ಅದೃಷ್ಟವಂತರು ಯಾರು?]
ಶುಕ್ರವಾರ ಸಂಜೆ ಸಿದ್ದರಾಮಯ್ಯ, ಪರಮೇಶ್ವರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿದರು. ಸುಮಾರು 40 ನಿಮಿಷಗಳ ಕಾಲ ನಡೆದ ಸಭೆ ಒಮ್ಮತದ ತೀರ್ಮಾನ ಕೈಗೊಳ್ಳಲು ವಿಫಲವಾಗಿದೆ. [ಯಾರ ಕೈ ತಪ್ಪಲಿದೆ ಸಚಿವ ಸ್ಥಾನ?]
ಸೋನಿಯಾ ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ಇವತ್ತು ಪ್ರಾಥಮಿಕ ಹಂತದ ಚರ್ಚೆ ಮಾತ್ರ ನಡೆದಿದೆ. ಶನಿವಾರ ಬೆಳಗ್ಗೆ ಮತ್ತೊಮ್ಮೆ ಸೋನಿಯಾ ಗಾಂಧಿ ಅವರ ಜೊತೆ ಸಭೆ ನಡೆಸಲಿದ್ದೇವೆ. ಸೋನಿಯಾ ಅವರು ವಿದೇಶಕ್ಕೆ ಹೋಗುತ್ತಿಲ್ಲ' ಎಂದು ಸ್ಪಷ್ಟಪಡಿಸಿದರು. ಇಂದು ನಡೆದ ಪ್ರಮುಖ ಬೆಳವಣಿಗೆಗಳ ವಿವರ ಇಲ್ಲಿದೆ.....
ಸಂಸದರಿಂದ ಸಿದ್ದರಾಮಯ್ಯ ಭೇಟಿ
ತುಮಕೂರು ಸಂಸದ ಮುದ್ದಹನುಮೇಗೌಡ ಮತ್ತು ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಅವರು ಶುಕ್ರವಾರ ಬೆಳಗ್ಗೆ ಸಿದ್ದರಾಮಯ್ಯ ಅವರನ್ನು ಕರ್ನಾಟಕ ಭವನದಲ್ಲಿ ಭೇಟಿ ಮಾಡಿ, ಸಂಪುಟ ಪುನಾರಚನೆ ವೇಳೆ ತಮ್ಮ ಭಾಗದ ಶಾಸಕರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು. [ಚಿತ್ರ ಪ್ರಕಾಶ ಹುಕ್ಕೇರಿ]
ಖರ್ಗೆ-ಸೋನಿಯಾ ಭೇಟಿ
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಿದರು. ಸುಮಾರು 1 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ಕರ್ನಾಟಕದ ರಾಜಕೀಯ ಪರಿಸ್ಥಿತಿ ಬಗ್ಗೆ ಖರ್ಗೆ ಅವರು ವಿವರಣೆ ನೀಡಿದರು. ಸಚಿವರನ್ನು ಸೇರಿಸಿಕೊಳ್ಳುವ, ಕೈ ಬಿಡುವ ಲೆಕ್ಕಾಚಾರದ ಕುರಿತು ಮಾಹಿತಿ ನೀಡಿದರು.
ಸಿದ್ದರಾಮಯ್ಯ, ದಿಗ್ವಿಜಯ್ ಸಿಂಗ್ ಭೇಟಿ
ಹೈದರಾಬಾದ್ನಿಂದ ದೆಹಲಿಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ ದಿಗ್ವಿಜಯ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಮಾಡಿ, ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಸಿದರು. ಸೋನಿಯಾ ಗಾಂಧಿ ಅವರ ಭೇಟಿಗೂ ಮೊದಲು ಈ ಸಭೆ ನಡೆಯಿತು.
ಆಸ್ಕರ್-ಖರ್ಗೆ ಭೇಟಿ
ಸೋನಿಯಾ ಗಾಂಧಿ ಭೇಟಿ ಮಾಡಿದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್ ಅವರ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಖರ್ಗೆ ಅವರು, 'ಸಿದ್ದರಾಮಯ್ಯ ಅವರು ಸಲಹೆ ಕೇಳಿದರೆ ನೀಡುತ್ತೇವೆ' ಎಂದು ಹೇಳಿದರು.
ಅಪೂರ್ಣಗೊಂಡ ಸಭೆ
ಸಂಜೆ 4ಗಂಟೆಗೆ ಸಿದ್ದರಾಮಯ್ಯ, ದಿಗ್ವಿಜಯ್ ಸಿಂಗ್ ಮತ್ತು ಪರಮೇಶ್ವರ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. ಸುಮಾರು 40 ನಿಮಿಷಗಳ ಕಾಲ ನಡೆದ ಮಾತುಕತೆ ಅಪೂರ್ಣಗೊಂಡಿತು. ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ಶನಿವಾರ ಬೆಳಗ್ಗೆ 10 ಗಂಟೆಗೆ ಸೋನಿಯಾ ಗಾಂಧಿ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸುತ್ತೇವೆ. ಇಂದು ಕೇವಲ ಪ್ರಾಥಮಿಕ ಹಂತದ ಸಭೆ ನಡೆದಿದೆ' ಎಂದು ಹೇಳಿದರು.
'ನಾನೇನು ಸಚಿವರನ್ನು ಮಾಡಿ ಎಂದು ಕೇಳಿರಲಿಲ್ಲ'
'ನಾನು ಸಚಿವರನ್ನಾಗಿ ಮಾಡಿ ಎಂದು ಕೇಳಿರಲಿಲ್ಲ. ಸಂಪುಟದಿಂದ ನನ್ನನ್ನು ತೆಗೆದರೂ ತೆಗೆಯಲಿ' ಎಂದು ವಸತಿ ಸಚಿವ ಅಂಬರೀಶ್ ಹೇಳಿದರು. ಮಂಡ್ಯದಲ್ಲಿ ಶುಕ್ರವಾರ ಮಾತನಾಡಿದ ಅವರು, 'ನನಗೆ ಹೆಚ್ಚಿನ ಅಧಿಕಾರದ ಆಸೆ ಇಲ್ಲ. ನಾನು ಏನು ಕೆಲಸ ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತು. ಸಂಪುಟದಿಂದ ನನ್ನನ್ನು ತೆಗೆದರೂ ತೆಗೆಯಲಿ' ಎಂದರು.