ಸಂಪುಟದಿಂದ ಹೊರಹೋಗಲಿರುವ 13 ಸಚಿವರು
ಬೆಂಗಳೂರು, ಜೂನ್ 18 : ಮೂರು ದಿನಗಳ ಸಂಪುಟ ಪುನಾರಚನೆ ಹಗ್ಗ-ಜಗ್ಗಾಟ ಅಂತ್ಯಗೊಂಡಿದೆ. 13 ಸಚಿವರನ್ನು ಸಂಪುಟದಿಂದ ಕೈ ಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಹೈಕಮಾಂಡ್ ನಾಯಕರ ಅಂತಿಮ ಒಪ್ಪಿಗೆಯೂ ಇದಕ್ಕೆ ಸಿಕ್ಕಿದೆ.
ಯಾವ ಮಾನದಂಡದ ಆಧಾರದ ಮೇಲೆ ಸಚಿವರನ್ನು ಕೈ ಬಿಡಲಾಗಿದೆ? ಎನ್ನುವುದು ಸಿದ್ದರಾಮಯ್ಯ ಅವರಿಗೆ ಮಾತ್ರ ತಿಳಿದಿದೆ. 'ಯಾರು ಹೇಗೆ ಕೆಲಸ ಮಾಡಿದ್ದಾರೆ?. ಯಾರ ಮೇಲೆ ಆರೋಪ ಇದೆ?, ಎಂಬ ಬಗ್ಗೆ ಮುಖ್ಯಮಂತ್ರಿ ಯೋಚಿಸಬೇಕಿತ್ತು. ಆತ ಅದನ್ನು ಮಾಡಿಲ್ಲ' ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಏಕ ವಚನದಲ್ಲಿಯೇ ಸಿದ್ದರಾಮಯ್ಯ ವಿರುದ್ಧ ಅಸಮಧಾನ ಹೊರಹಾಕಿದರು. [ಸಂಪುಟ ಸೇರುವವರ ಪಟ್ಟಿ]
ಸದ್ಯದ ಪಟ್ಟಿಯ ಪ್ರಕಾರ 13 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಎಲ್ಲವೂ ಅಂದುಕೊಂಡಂತೆ ಆದರೆ, ಭಾನುವಾರ ಸುಮಾರು 10 ಶಾಸಕರು ಸಿದ್ದರಾಮಯ್ಯ ಅವರ ಸಂಪುಟ ಸೇರಲಿದ್ದಾರೆ. ಮಂತ್ರಿಗಿರಿ ಉಳಿಸಿಕೊಳ್ಳಲು ಲಾಬಿ ನಡೆಯುತ್ತಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. [ಸಂತೋಷ್ ಲಾಡ್ ಅವರಿಗೆ ಮತ್ತೆ ಸಚಿವ ಸ್ಥಾನ]
ಚಿಂಚನಸೂರು ಕೈ ತಪ್ಪಿದ ಮಂತ್ರಿ ಪದವಿ
ನಿರೀಕ್ಷೆಯಂತೆ ಜವಳಿ ಸಚಿವ ಬಾಬೂರಾವ್ ಚಿಂಚನಸೂರು ಅವರು ಮಂತ್ರಿ ಪದವಿ ಕಳೆದುಕೊಂಡಿದ್ದಾರೆ. ಈಗಾಗಲೇ ಕಾಮಗಾರಿಯ ಟೆಂಡರ್ ಮಂಜೂರು ಮಾಡಿಸಲು ಗುತ್ತಿಗೆದಾರರಿಂದ ಲಂಚ ಪಡೆದ ಆರೋಪವನ್ನು ಸಚಿವರು ಎದುರಿಸುತ್ತಿದ್ದಾರೆ. ಸಚಿವರನ್ನು ಕೈ ಬಿಡಿ ಎಂದು ಪ್ರತಿಪಕ್ಷಗಳು ಒತ್ತಾಯ ಮಾಡುತ್ತಿದ್ದವು.
ಕಿಮ್ಮನೆ ಕೈ ತಪ್ಪಿತು ಸಚಿವ ಸ್ಥಾನ
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವಾದಾಗಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಗಳು ಕೇಳಿಬಂದಿದ್ದವು. ಸಂಪುಟ ಪುನಾರಚನೆ ವೇಳೆ ಸಿದ್ದರಾಮಯ್ಯ ಅವರು ಕಿಮ್ಮನೆ ಅವರನ್ನು ಕೈ ಬಿಟ್ಟಿದ್ದಾರೆ. ಸಾಗರ ಶಾಸಕ ಕಾಗೋಡು ತಿಮ್ಮಪ್ಪ ಅವರಿಗೆ ಸಚಿವರಾಗುವ ಯೋಗ ಸಿಕ್ಕಿದೆ.
ಶಾಮನೂರು ಸಚಿವ ಸ್ಥಾನ ಕಳೆದುಕೊಳ್ತಾರೆ
ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದಾಗಿ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರನ್ನು ಸಂಪುಟದಿಂದ ಕೈಬಿಡಬಹುದು ಎಂಬ ಸುದ್ದಿ ಬಹಳ ದಿನಗಳಿಂದ ಹಬ್ಬಿತ್ತು.
ಪರಮೇಶ್ವರ ನಾಯಕ್ ಸಂಪುಟದಿಂದ ಔಟ್
ಮಾಜಿ ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ವಿಚಾರದಲ್ಲಿ ಭಾರೀ ವಿವಾದಕ್ಕೆ ಸಿಲುಕಿದ್ದ ಕಾರ್ಮಿಕ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯಕ್ ತಲೆದಂಡವಾಗಿದೆ. ಇಂದು ಅಂತಿಮಗೊಂಡ ಪಟ್ಟಿ ಪ್ರಕಾರ ಅವರು ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ.
ಅಂಬರೀಶ್ ಕೈ ತಪ್ಪಿದ ಸಚಿವ ಪಟ್ಟ
ವಸತಿ ಇಲಾಖೆ ಸಾಧನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಸಚಿವ ಅಂಬರೀಶ್ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ ಎಂಬ ಸುದ್ದಿ ಬಹಳ ಹಿಂದೆಯೇ ಹಬ್ಬಿತ್ತು. 'ತಮ್ಮನ್ನು ಮುಂದುವರೆಸಿದರೂ ಸಂತೋಷ ಕೈ ಬಿಟ್ಟರೂ ಸಂತೋಷ. ಅಧಿಕಾರ ಶಾಶ್ವತವಲ್ಲ' ಎಂದು ಅಂಬರೀಶ್ ಹೇಳಿದ್ದರು.
ಎಸ್.ಆರ್.ಪಾಟೀಲ್ ಅವರಿಗೆ ಯಾವ ಹೊಣೆ?
ವಿಧಾನಪರಿಷತ್ ಸದಸ್ಯ, ಐಟಿ-ಬಿಟಿ ಸಚಿವ ಎಸ್.ಆರ್.ಪಾಟೀಲ್ ಅವರನ್ನು ಸಂಪುಟದಿಂದ ಕೈ ಬಿಡುವ ಕುರಿತು ಸುದ್ದಿ ಹಬ್ಬಿತ್ತು. ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಪಾಟೀಲ್ ಅವರ ಹೆಸರು ಕೇಳಿಬರುತ್ತಿದ್ದು, ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ. ಆದರೆ, ಡಿ.ಕೆ.ಶಿವಕುಮಾರ್ ಅವರ ಹೆಸರೂ ಕೆಪಿಸಿಸಿ ಪಟ್ಟಕ್ಕೆ ಕೇಳಿಬರುತ್ತಿದೆ.
ಶ್ರೀನಿವಾಸ ಪ್ರಸಾದ್ ಹೊರಕ್ಕೆ
ಕಂದಾಯ ಸಚಿವ ವಿ.ಶ್ರಿನಿವಾಸ ಪ್ರಸಾದ್ ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ. ಸಿದ್ದರಾಮಯ್ಯ ಅವರ ವಿರುದ್ಧ ಸಚಿವರು ಏಕ ವಚನದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಯಾರು ಹೇಗೆ ಕೆಲಸ ಮಾಡಿದ್ದಾರೆ?. ಯಾರ ಮೇಲೆ ಆರೋಪ ಇದೆ?, ಎಂಬ ಬಗ್ಗೆ ಮುಖ್ಯಮಂತ್ರಿ ಯೋಚಿಸಬೇಕಿತ್ತು. ಆತ ಅದನ್ನು ಮಾಡಿಲ್ಲ' ಎಂದು ಆಕ್ರೋಶ ಹೊರಹಾಕಿದ್ದಾರೆ.
ಖಮರುಲ್ ಇಸ್ಲಾಂ ಸಂಪುಟದಿಂದ ಹೊರಕ್ಕೆ
ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ. ತಮ್ಮ ಖಾತೆಯಲ್ಲಿ ಸರಿಯಾಗಿ ಕೆಲಸ ಮಾಡದ ಅವರನ್ನು ಕೈ ಬಿಡಬಹುದು ಎಂಬ ಸುದ್ದಿ ಹಬ್ಬಿತ್ತು.
ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನವಿಲ್ಲ
ಮೊದಲು ಅಬಕಾರಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟು, ಪಟ್ಟು ಹಿಡಿದು ಖಾತೆಯನ್ನು ಬದಲಾವಣೆ ಮಾಡಿಸಿಕೊಂಡಿದ್ದರು. ಜಾರಕಿಹೊಳಿ ಅವರ ಮನವಿಯಂತೆ ಅವರಿಗೆ ಸಣ್ಣ ಕೈಗಾರಿಕಾ ಖಾತೆ ನೀಡಲಾಗಿತ್ತು. ಆದರೆ, ಈಗ ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತಿದೆ.
ದಿನೇಶ್ ಗುಂಡೂರಾವ್ ಸಂಪುಟದಿಂದ ಹೊರಕ್ಕೆ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಂಪುಟದಿಂದ ಕೈಬಿಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಆದರೆ, ಇದಕ್ಕೆ ನಿಜವಾದ ಕಾರಣ ಏನೆಂದು ತಿಳಿದಿಲ್ಲ. ಸಚಿವರ ಕಾರ್ಯ ವೈಖರಿಯ ಮೌಲ್ಯ ಮಾಪನ ಮಾಡಿ, ಈ ನಿರ್ಧಾರಕ್ಕೆ ಬರಲಾಗಿದೆಯೇ ಎಂದು ಸಿದ್ದರಾಮಯ್ಯ ಅವರೇ ಉತ್ತರ ನೀಡಬೇಕು.
ವಿನಯ್ ಕುಮಾರ್ ಸೊರಕೆಗಿಲ್ಲ ಸಚಿವ ಸ್ಥಾನ
ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಸಚಿವ ಸ್ಥಾನ ಕಳೆದುಕೊಳ್ಳುಲಿದ್ದಾರೆ. ಸೊರಕೆ ಅವರ ಬದಲು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಶಿವರಾಜ್ ತಂಗಡಗಿ ಸಂಪುಟದಿಂದ ಹೊರಕ್ಕೆ
ಕೊಪ್ಪಳದ ಯಲ್ಲಾಲಿಂಗನ ಕೊಲೆ ಪ್ರಕರಣದಲ್ಲಿ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಆಪ್ತರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಾಗ ತಂಗಡಗಿ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಈಗ ಸಿದ್ದರಾಮಯ್ಯ ಅವರೇ ಅವರನ್ನು ಸಂಪುಟದಿಂದ ಕೈ ಬಿಡುತ್ತಿದ್ದಾರೆ.
ಅಭಯ ಚಂದ್ರ ಜೈನ್ ಸಂಪುಟದಿಂದ ಹೊರಗೆ
ರಾಜ್ಯ ಯುವಜನ ಸೇವೆ, ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಅಭಯ ಚಂದ್ರ ಜೈನ್ ಸಂಪುಟದಿಂದ ಹೊರ ಹೋಗಲಿದ್ದಾರೆ. ಸಚಿವರನ್ನು ಕೈಬಿಡಬಹುದು ಎಂಬ ಸುದ್ದಿ ಹಲವು ತಿಂಗಳಿನಿಂದ ಹಬ್ಬಿತ್ತು.
ಮನೋಹರ್ ತಹಶೀಲ್ದಾರ್ ಹೊರಕ್ಕೆ
ಅಬಕಾರಿ ಮತ್ತು ಮುಜರಾಯಿ ಖಾತೆ ಸಚಿವ ಮನೋಹರ್ ತಹಶೀಲ್ದಾರ್ ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ. ಅಚ್ಚರಿ ಎಂದರೆ ಕೆಲವು ತಿಂಗಳ ಹಿಂದೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಅನಾರೋಗ್ಯದ ಕಾರಣ ಅವರನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ.