ಚುನಾವಣಾ ಹೊಸ್ತಿಲಲ್ಲಿ ಸಿದ್ದು ವಿರುದ್ದ ಡಿಕೆ ಶಿವಕುಮಾರ್ ಅಪಸ್ವರ!
ಕಾಂಗ್ರೆಸ್ ಸೇರಿದ ಮೂರೇ ವರ್ಷದಲ್ಲಿ ಸಿದ್ದರಾಮಯ್ಯ ಸಿಎಂ ಆಗಲಿಲ್ಲವೇ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದರೆ, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಡಿ ಕೆ ಶಿವಕುಮಾರ್.
ಬೆಂಗಳೂರು, ಆ 23: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ ಕೆ ಶಿವಕುಮಾರ್ ನಡುವೆ ಅಷ್ಟಕಷ್ಟೆ ಎಂದು ಹರಿದಾಡುತ್ತಿದ್ದ ಸುದ್ದಿಗೆ ಚುನಾವಣಾ ವರ್ಷದಲ್ಲಿ ಮತ್ತೆ ರೆಕ್ಕೆಪುಕ್ಕ ಸಿಕ್ಕಂತಾಗಿದೆ.
ನಗರದ ಹೊರವಲಯದ ನೆಲಮಂಗಲದಲ್ಲಿ ಬೃಹತ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಸೇರಿದ ಮೂರೇ ವರ್ಷದಲ್ಲಿ ಸಿದ್ದರಾಮಯ್ಯ ಸಿಎಂ ಆಗಲಿಲ್ಲವೇ ಎಂದು ಹೇಳಿದ್ದಾರೆ.
ಭ್ರಷ್ಟರನ್ನು ರಕ್ಷಿಸುತ್ತಿರುವ ಸಿದ್ದರಾಮಯ್ಯ: ಬಿಎಸ್ ವೈ ಆರೋಪ
ಕಾರ್ಯಕರ್ತರು ಬಯಸಿದರೆ, ಮುಂಬರುವ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿದರೆ, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಡಿ ಕೆ ಶಿವಕುಮಾರ್ ಹೇಳುವ ಮೂಲಕ, ಸಿದ್ದರಾಮಯ್ಯ ಜೊತೆಗಿನ 'ಬಾಂಡಿಂಗ್' ಸರಿಯಿಲ್ಲವೇ ಎಂದು ಜನಸಾಮಾನ್ಯರು ಅನುಮಾನ ಪಡುವಂತಾಗಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಡಿ ಕೆ ಶಿವಕುಮಾರ್ ಮನೆಯ ಮೇಲೆ ದಾಳಿ ನಡಿಸಿದಾಗ, ಡಿಕೆಶಿ ತಾಯಿ ಇದಕ್ಕೆಲ್ಲಾ ಸಿದ್ದರಾಮಯ್ಯನೇ ಕಾರಣ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಪಾದಕ್ಕೆ ಎರಗಿದ ಡಿಕೆ ಶಿವಕುಮಾರ್, ಕಾಲ ಮೇಲೆ ಕಾಲ್ ಹಾಕಿ ಕೂತ ಅಮಿತ್ ಶಾ
ಮಂಗಳವಾರ (ಆ 22) ನೆಲಮಂಗಲ ತಾಲೂಕಿನ ಹಾಲಿಡೇ ಫಾರ್ಮ್ಸ್ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಡಿಕೆಶಿ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ತಾಲೂಕಿನ ಜನರು ಬಯಸಿದರೆ ಮತ್ತು ಮಾಗಡಿಯಲ್ಲಿ ಕಾಂಗ್ರೆಸ್ ಗೆದ್ದರೆ ಮುಂದಿನ ಸಿಎಂ ನಾನೇ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿಗಳ ಬಗ್ಗೆ ಡಿ ಕೆ ಶಿವಕುಮಾರ್ ಹೇಳಿದ್ದೇನು, ಮುಂದೆ ಓದಿ..
ಅಧಿಕಾರ ಬಯಸಿ ಯಾರೂ ಕಾಂಗ್ರೆಸ್ ಪಕ್ಷಕ್ಕೆ ಬರುವುದು ಬೇಡ
ಅಧಿಕಾರ ಬಯಸಿ ಯಾರೂ ಕಾಂಗ್ರೆಸ್ ಪಕ್ಷಕ್ಕೆ ಬರುವುದು ಬೇಡ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎನ್ನುವರಿಗೆ ಮಾತ್ರ ಇಲ್ಲಿ ಜಾಗ. ಎಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ಚುನಾವಣಾ ಸಮಯದಲ್ಲಿ ನಾವೆಲ್ಲಾ ಒಂದಾಗಬೇಕು - ಡಿ ಕೆ ಶಿವಕುಮಾರ್.
ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಮೂರೇ ವರ್ಷದಲ್ಲಿ ಮುಖ್ಯಮಂತ್ರಿ
ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಮೂರೇ ವರ್ಷದಲ್ಲಿ ಮುಖ್ಯಮಂತ್ರಿಯಾದರು. ನಾನು ಕೈಕಟ್ಟಿಕೊಂಡು ಸಿಕ್ಕಿದ್ದೇ ಪ್ರಸಾದ ಎಂದು ಸುಮ್ಮನಿರಲಿಲ್ಲವೇ? ಎಷ್ಟು ದಿನದ ನಂತರ ನನಗೆ ಸಚಿವ ಸ್ಥಾನದ ಭಾಗ್ಯ ಲಭಿಸಿತು ಎನ್ನುವುದು ನಿಮಗೆಲ್ಲಾ ತಿಳಿದಿಲ್ಲವೇ ಎಂದು ಪರೋಕ್ಷವಾಗಿ ಸಿಎಂ ಹೆಸರು ಉಲ್ಲೇಖಿಸದೇ ಡಿ ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ವೇಣುಗೋಪಾಲ್ ಉಸ್ತುವಾರಿ ವಹಿಸಿಕೊಂಡ ನಂತರ ಸಿಎಂ ಉಲ್ಟಾ
ನಾನೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು, ವೇಣುಗೋಪಾಲ್ ಉಸ್ತುವಾರಿ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಲಾರಂಭಿಸಿದರು. ಇದು ಕಾರ್ಯಕರ್ತರನ್ನು ನಂಬಿರುವ ಪಕ್ಷ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕಾರ್ಯಕರ್ತರ ಸಭೆಯಲ್ಲಿ ತನ್ನನ್ನೇ ಉಲ್ಲೇಖಿಸಿ ಮಾತನಾಡಿದ ಡಿಕೆಶಿ
ಕಾರ್ಯಕರ್ತರ ಸಭೆಯಲ್ಲಿ ತನ್ನನ್ನೇ ಉಲ್ಲೇಖಿಸಿ ಮಾತನಾಡಿದ ಡಿ ಕೆ ಶಿವಕುಮಾರ್, ನೋಡ್ರೀ.. ಅಧಿಕಾರಕ್ಕಾಗಿ ಕಾಂಗ್ರೆಸ್ ಬರುವವರು ಈಗಲೇ ಪಕ್ಷವನ್ನು ತೊರೆಯಬಹುದು. ಹೈಕಮಾಂಡ್ ಕೊಟ್ಟಿದ್ದೇ ಪ್ರಸಾದ ಎಂದು ಸಚಿವ ಸ್ಥಾನ ಬರುವ ತನಕ ನಾನು ತಾಳ್ಮೆಯಿಂದ ಕಾಯುತ್ತಿರಲಿಲ್ಲವೇ ಎಂದು ಡಿಕೆಶಿ ಹೇಳಿಕೆಯನ್ನು ನೀಡಿದ್ದಾರೆ.
ಸಿಎಂ ವಿರುದ್ದ ಏಕವಚನದಲ್ಲಿ ಡಿಕೆಶಿ ತಾಯಿ ವಾಗ್ದಾಳಿ
ತನ್ನ ಮಗನ ಇಂದಿನ ಸ್ಥಿತಿಗೆ ಸಿದ್ದರಾಮಯ್ಯನೇ ಕಾರಣ ಎಂದು ಏಕವಚನದಲ್ಲಿ ಡಿ ಕೆ ಶಿವಕುಮಾರ್ ತಾಯಿ ಹರಿಹಾಯ್ದಿದ್ದರು. ಇದಕ್ಕೆ ಡಿ ಕೆ ಶಿವಕುಮಾರ್ ಸಿಎಂ ಅವರಲ್ಲಿ ಬಹಿರಂಗ ಕ್ಷಮೆಯಾಚಿಸಿದ್ದರು.