ಮೂಢನಂಬಿಕೆ: ಮುಖ್ಯಮಂತ್ರಿಗಳಿಗೆ ನಟ ಶಿವಣ್ಣ ನೀಡಿದ ಗಂಭೀರ ಸಲಹೆ
ಅಣ್ಣಾವ್ರ ಕುಟುಂಬದ ಮೊದಲ ಸೊಸೆ ಗೀತಾ ಶಿವರಾಜ್ ಕುಮಾರ್, ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದನ್ನು ಬಿಟ್ಟರೆ, ರಾಜ್ ಕುಟುಂಬವರು ಹಿಂದಿನಿಂದಲೂ ರಾಜಕೀಯದಿಂದ ಅಂತರ ಕಾಯ್ದುಕೊಂಡು ಬಂದಿದ್ದವರು.
ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ತಮ್ಮನ್ನು ಟೀಕಿಸಿದ ರಾಜಕಾರಣಿಗಳಿಗೆ ತಿರುಗೇಟು ನೀಡಿದ್ದನ್ನು ಬಿಟ್ಟರೆ, ಶಿವರಾಜ್ ಕುಮಾರ್ ಆಗಲಿ ರಾಜ್ ಕುಟುಂಬದ ಇತರರು ರಾಜಕೀಯದ ಬಗ್ಗೆ ಹೇಳಿಕೆ ನೀಡಿದ ಉದಾಹರಣೆಗಳು ತೀವ್ರ ಅಪರೂಪ. (ಪತ್ನಿ ಗೀತಾ ಸ್ಪರ್ಧೆ ಕುರಿತು ಶಿವಣ್ಣ ಹೇಳಿದ್ದು)
ಇತ್ತೀಚೆಗೆ ದಾವಣಗೆರೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಶಿವಣ್ಣ, ಮೂಢನಂಬಿಕೆ ಮತ್ತು ಕಳಸಾ ಬಂಡೂರಿ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಸಲಹೆಯನ್ನು ನೀಡಿದ್ದಾರೆ.
ಸಾರ್ವಜನಿಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಬೆಟ್ಟದಷ್ಟಿರುವಾಗ, ಮೊದಲು ಸರಕಾರ ಅದರ ಬಗ್ಗೆ ಗಮನ ಹರಿಸುವುದು ಸೂಕ್ತ. ನಂತರ ಮೂಢನಂಬಿಕೆ ಮುಂತಾದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಜನರ ನಂಬಿಕೆಯನ್ನು ದುರಪಯೋಗ ಪಡಿಸಿಕೊಳ್ಳುವ ಮೂಢನಂಬಿಕೆ ಪದ್ದತಿ ನಿಷೇಧಕ್ಕೆ ಸರಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿಗಳು ಇತ್ತೀಚಿಗೆ ಹೇಳಿದ್ದರು. (ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಸಿದ್ದು ಪಣ)
ಸರಕಾರಕ್ಕೆ ಶಿವಣ್ಣ ನೀಡಿದ ಸಲಹೆ, ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆಯ ವೇಳೆ ಆಯನೂರು ಮಂಜುನಾಥ್, ಶಿವಣ್ಣಗೆ ಲೇವಡಿ ಮಾಡಿದ್ದು, ಸ್ಲೈಡಿನಲ್ಲಿ ಓದಿ..
ಕಳಸಾ - ಬಂಡೂರಿ ಯೋಜನೆ
ರೈತರ ನಮ್ಮ ದೇಶದ ಬೆನ್ನೆಲುಬು, ಉತ್ತರ ಕರ್ನಾಟಕದ ಭಾಗದ ಜನರಿಗೆ ಮಹದಾಯಿ ಯೋಜನೆ ಅತ್ಯಂತ ಮಹತ್ವದ್ದು. ನಾವು ಕಲಾವಿದರೆಲ್ಲರೂ ರೈತರ ಪರವಾಗಿದ್ದೇವೆ. ಈ ಹೋರಾಟಕ್ಕೆ ಕನ್ನಡಪರ ಸಂಘಟನೆಗಳ ಬೆಂಬಲವೂ ಬೇಕಾಗಿದೆ - ಶಿವರಾಜ್ ಕುಮಾರ್
ಮೂಢನಂಬಿಕೆ
ಮೂಢನಂಬಿಕೆ ನಿಷೇಧದಂತಹ ಕಾಯ್ದೆ ಜಾರಿಗೊಳಿಸುವ ಬದಲು ರಾಜ್ಯದಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಎಚ್ಚೆತ್ತುಕೊಂಡು ಅದನ್ನು ಬಗೆಹರಿಸುವ ಮೂಲಕ ಜನರಿಗೆ ಸೂಕ್ತ ಅನುಕೂಲ ಕಲ್ಪಿಸಬೇಕು, ಮೂಢನಂಬಿಕೆ ಬಗ್ಗೆ ಸರಕಾರ ಆಮೇಲೆ ನಿರ್ಧಾರ ತೆಗೆದುಕೊಳ್ಳಲಿ ಎಂದು ಶಿವಣ್ಣ ಸರಕಾರಕ್ಕೆ ದಾವಣಗೆರೆಯಲ್ಲಿ ಸಲಹೆ ನೀಡಿದ್ದಾರೆ.
ಶಿವಲಿಂಗ ಚಿತ್ರ
ಶಿವಲಿಂಗ ಚಿತ್ರದ ಯಶಸ್ಸು ಖುಷಿ ತಂದಿದೆ. ಚಿತ್ರ 120 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದೆ. ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ, ನಮ್ಮ ಚಿತ್ರಕ್ಕಿರುವ ಮಾರುಕಟ್ಟೆಯಲ್ಲಿ ಗಣನೀಯ ಸುಧಾರಣೆ ಕಂಡಿದೆ - ಶಿವರಾಜ್ ಕುಮಾರ್.
ಸಿದ್ದರಾಮಯ್ಯ ನೀಡಿದ್ದ ಹೇಳಿಕೆ
ತುಮಕೂರು ಜಿಲ್ಲೆ ಹಳ್ಳಿಯೊಂದರಲ್ಲಿ ನಡೆದ ಗ್ರಾಮದೇವತೆಯ ಜಾತ್ರೆಯಲ್ಲಿ ಕೊಂಡ ಹಾಯುವ ಪದ್ದತಿಯ ವೇಳೆ ನಡೆದ ದುರಂತದಲ್ಲಿ ಹಲವಾರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು ಇಂತಹ ಅನಿಷ್ಟ ಮೂಢನಂಬಿಕೆ ಪದ್ದತಿಯನ್ನು ಸರಕಾರ ಸದ್ಯದಲ್ಲೇ ನಿಷೇಧಿಸಲಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಶಿವಣ್ಣ Vs ಆಯನೂರು ಮಂಜುನಾಥ್
ಜೋಗಿ ಸ್ಟೈಲಿನಲ್ಲಿ ಮತ ಯಾಚಿಸೋಕೆ ಸಂಸತ್ತು ಅನ್ನೋದು ಮನರಂಜನೆಯ ತಾಣವೇ. ಹಾಡ್ಕೊಂಡು, ಡ್ಯಾನ್ಸ್ ಮಾಡ್ಕೊಂಡು ಮತಯಾಚಿಸುತ್ತಿದ್ದಾರಲ್ಲಾ, ಶಿವಮೊಗ್ಗದ ರಾಜಕೀಯ ಎಲ್ಲಿಗೆ ಬಂದು ನಿಂತಿತು ಎಂದು ಆಯನೂರು ಮಂಜುನಾಥ್, ಶಿವಣ್ಣ ವಿರುದ್ದ ಕಳೆದ ಲೋಕಸಭಾ ಚುನಾವಣೆಯ ವೇಳೆ ಲೇವಡಿ ಮಾಡಿದ್ದರು.
ತಿರುಗಿಬಿದ್ದಿದ್ದ ಕಲಾವಿದರು
ಆಯನೂರು ಮಂಜುನಾಥ್ ಹೇಳಿಕೆಗೆ ಕಲಾವಿದರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು. ಬಣ್ಣ ಹಚ್ಚಿ, ಜನರನ್ನು ರಂಜಿಸುವುದು ನಮ್ಮ ಧರ್ಮ ಎಂದು ಆಯನೂರುಗೆ ತಿರುಗೇಟು ನೀಡಿದ್ದರು.
ಶಿವಣ್ಣ ಪ್ರತಿಕ್ರಿಯೆ
ಈಗಾಗಲೇ ಹಲವಾರು ಬಾರಿ ನಾನು ಹೇಳಿದ್ದೇನೆ. ನಾನು ಯಾವ ಪಕ್ಷದ ಜೊತೆಗೂ ಇಲ್ಲ, ನನ್ನ ಪತ್ನಿ ಗೀತಾ ಜೆಡಿಎಸ್ ಪಕ್ಷದ ಟಿಕೆಟಿನಿಂದ ಸ್ಪರ್ಧಿಸುತ್ತಿದ್ದಾರೆ. ನಾನು ನನ್ನ ಪತ್ನಿಗೆ ಟಿಕೆಟ್ ನೀಡಿ ಎಂದು ಮತದಾರರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆಯೇ ಹೊರತು ಜೆಡಿಎಸ್ ಪಕ್ಷಕ್ಕೆ ಮತನೀಡಿ ಎಂದಲ್ಲ ಎಂದು ಚುನಾವಣೆಯ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಹೇಳಿದ್ದರು.
ಕಲಾವಿದರ ಬಗ್ಗೆ ಎಚ್ಚರಿದಿಂದ ಮಾತನಾಡಲಿ
ರಾಜಕಾರಣಿಗಳು ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಲಿ, ಅವರು ಜನಪ್ರತಿನಿಧಿಗಳು ಎನ್ನುವುದನ್ನು ಮೊದಲು ಅರಿತುಕೊಳ್ಳಲಿ. ಅವರು ನೀಡುವ ಬೇಕಾಬಿಟ್ಟಿ ಹೇಳಿಕೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡದಿರಲಿ, ನಾವೆಲ್ಲಾ ಬಣ್ಣದ ಲೋಕದಿಂದ ಬಂದವರು ಎಂದು ಶಿವಣ್ಣ ಪರೋಕ್ಷವಾಗಿ ಆಯನೂರು ಮಂಜುನಾಥ್ ಗೆ ತಿರುಗೇಟು ನೀಡಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.