ಕೆಪಿಎಸ್ಸಿ ಅಧ್ಯಕ್ಷರಾಗಿ ಶ್ಯಾಂ ಭಟ್ ನೇಮಕ
ಬೆಂಗಳೂರು, ಆಗಸ್ಟ್ 09 : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ ಶ್ಯಾಂ ಭಟ್ ಅವರನ್ನು ನೇಮಕ ಮಾಡಲಾಗಿದೆ. ಸದ್ಯ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಮಂಗಳವಾರ ರಾಜ್ಯಪಾಲ ವಜುಭಾಯಿ ವಾಲಾ ಅವರು ಶ್ಯಾಂ ಭಟ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷರಾಗಿ ನೇಮಕ ಮಾಡುವ ಕಡತಕ್ಕೆ ಸಹಿ ಹಾಕಿದರು. ಆಗಸ್ಟ್ 10ರ ಬುಧವಾರ ಶ್ಯಾಂ ಭಟ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.[ಟಿ.ಶ್ಯಾಂ ಭಟ್ ಪರಿಚಯ]
2013ರಲ್ಲಿ ಗೋನಾಳ್ ಭೀಮಪ್ಪ ಅವರು ನಿವೃತ್ತರಾದ ಬಳಿಕ ಕೆಪಿಎಸ್ಸಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಹೆಸರನ್ನು ಕರ್ನಾಟಕ ಸರ್ಕಾರ ಮೊದಲು ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿತ್ತು. ಆದರೆ, ರಾಜ್ಯಪಾಲರು ಹೆಸರನ್ನು ತಿರಸ್ಕರಿಸಿದ್ದರು.[ಸರ್ಕಾರ, ರಾಜಭವನದ ನಡುವೆ ಕೆಪಿಎಸ್ ಸಿ ಗುದ್ದಾಟ]
ಶ್ಯಾಂ ಭಟ್ ನೇಮಕಕ್ಕೂ ಹಲವಾರು ವಿರೋಧಗಳು ಎದುರಾಗಿದ್ದವು. ಬಿಜೆಪಿ, ಜೆಡಿಎಸ್ ಮತ್ತು ಹಲವಾರು ಸಂಘಟನೆಗಳು ಶ್ಯಾಂ ಭಟ್ ಅವರನ್ನು ನೇಮಕ ಮಾಡಬಾರದು ಎಂದು ಒತ್ತಾಯಿಸಿದ್ದವು. ಶ್ಯಾಂ ಭಟ್ ಅವರ ಮೇಲಿದ್ದ ಆರೋಪಗಳ ಬಗ್ಗೆ ಅಡ್ವೊಕೇಟ್ ಜನರಲ್ ಅವರಿಂದ ಮಾಹಿತಿ ಪಡೆದ ಬಳಿಕ ನೇಮಕಕ್ಕೆ ರಾಜ್ಯಪಾಲರು ಒಪ್ಪಿಗೆ ಕೊಟ್ಟಿದ್ದಾರೆ.[ಕೆಪಿಎಸ್ ಸಿಗೆ ಶ್ಯಾಂ ಭಟ್ ನೇಮಕಕ್ಕೆ ತಾತ್ಕಾಲಿಕ ತಡೆ]
ಯಾರು ಶ್ಯಾಂ ಭಟ್? : 1992ನೇ ಬ್ಯಾಚ್ ಐಎಎಸ್ ಅಧಿಕಾರಿ ಶ್ಯಾಂ ಭಟ್ ಅವರು ಸದ್ಯ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತರಾಗಿದ್ದ ಅವರನ್ನು 2016ರ ಮೇ ತಿಂಗಳಿನಲ್ಲಿ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿತ್ತು.