ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಖಭಂಗ, ಟೈಂ ಸರಿ ಇಲ್ಲ ಕಂಡ್ರಿ!
ಬೆಂಗಳೂರು, ಫೆ. 16: 'ಈ ಟೈಮ್ ಅನ್ನೋದು ಪಕ್ಕಾ 420 ಕಂಡ್ರಿ' ಎಂದು ಮುಂಗಾರು ಮಳೆ ಗಣೇಶ್ ರೀತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೊಣಗಿದರೂ ಅಚ್ಚರಿ ಪಡಬೇಕಾಗಿಲ್ಲ. ಕಾಂಗ್ರೆಸ್ ಪಕ್ಷದ ಟೈಮ್ ಸರಿಯಿಲ್ಲ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಬೀದರ್ ನಲ್ಲಿ ಮಾತ್ರ ಕೈ ಗೆ ಬಲ ಸಿಕ್ಕಿದೆ.
'ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವನ್ನು ಒಪ್ಪಬೇಕು' ಎಂದು ಸಿಎಂ ಸಿದ್ದರಾಮಯ್ಯ ಅವರು ಸೊಲೊಪ್ಪಿಕೊಂಡಿದ್ದಾರೆ.ಬೀದರ್ ನಲ್ಲಿ ಗೆಲ್ಲುವ ನಿರೀಕ್ಷೆಯಿತ್ತು. ಹೆಬ್ಬಾಳದಲ್ಲಿ ಅನಿರೀಕ್ಷಿತ ಫಲಿತಾಂಶ' ಎಂದಿದ್ದಾರೆ.
ಸುದ್ದಿಗಾರರಿಗೆ ತಕ್ಷಣದ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಸಿಎಂ ಅವರು ತಮ್ಮ ಕಾಸ್ಟ್ಲಿ ವಾಚ್ ಕಡೆ ನೋಡಲಿಲ್ಲ ಎಂದು ನಮ್ಮ ಮೈಸೂರು ರಿಪೋರ್ಟರ್ ಗಮನಿಸಿ ವರದಿ ಮಾಡಿದ್ದಾರೆ.
ಟೈಮ್ ಸರಿ ಇಲ್ಲದಾಗ ದುಬಾರಿ ವಾಚ್ ಕಟ್ಟಿದ ತಕ್ಷಣ ಒಳ್ಳೆ ಟೈಮ್ ಬರುತ್ತಾ ಎಂದು ಯಾರೋ ಗೊಣಗುತ್ತಿದ್ದರು ಯಾರು ಎಂದು ಗೊತ್ತಾಗಲಿಲ್ಲ. [ಸಿದ್ದು ದುಬಾರಿ ವಾಚ್ : ದಿಗ್ವಿಜಯ್ ಸಿಂಗ್ ಮುಗ್ದತೆಯ ಪರಮಾವಧಿ!]
ಬೀದರ್ : ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಮುನ್ನಡೆ ಪಡೆದು ವಿಜಯೋತ್ಸವ ಆಚರಣೆ ಸಿದ್ಧತೆಯಲ್ಲಿದ್ದಾರೆ. ಬಿಜೆಪಿಯಲ್ಲಿ ಪ್ರಕಾಶ್ ಖಂಡ್ರೆ ಅವರು ಪಡೆದ ಮತಗಳ ಎರಡಷ್ಟು ಮತಗಳು ರಹೀಂ ಖಾನ್ ಗೆ ಸಿಕ್ಕಿದೆ. ಜೆಡಿಎಸ್ ನ ಎಂ ಡಿ ಅಯಾಜ್ ಖಾನ್ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.ಸಿದ್ದರಾಮಯ್ಯ ಅವರ ಮುಖಭಂಗಕ್ಕೆ ಪಕ್ಷದಲ್ಲಿನ ತಿಕ್ಕಾಟವೇ ಕಾರಣವಾಯಿತೇ? ಮುಂದೆ ಓದಿ... [ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿ ಪಡೆಯಿರಿ]
ಅಲ್ಪಸಂಖ್ಯಾತರ ಮನ ಓಲೈಕೆ ಎಂಬ ಹುಸಿ ತಂತ್ರ
ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ವರ ಪಡೆದು ಕಣಕ್ಕಿಳಿದು ಅಲ್ಪಸಂಖ್ಯಾತರ ಮನ ಓಲೈಕೆ ಮಾಡಿ ಗೆಲುವು ಸಾಧಿಸುವ ಗುರಿ ಹೊಂದಿದ್ದ ಸಿಕೆ ಅಬ್ದುಲ್ ರೆಹಮಾನ್ ಷರೀಫ್ ಗೆ ಮುಖಭಂಗವಾಗಿದೆ. ಬಿಜೆಪಿ ಅಭ್ಯರ್ಥಿ ವೈಎ ನಾರಾಯಣ ಸ್ವಾಮಿ ಅವರು ಕಾಂಗ್ರೆಸ್- ಜೆಡಿಎಸ್ ತಿಕ್ಕಾಟದ ನಡುವೆ ಜಯಭೇರಿ ಬಾರಿಸಿದ್ದಾರೆ.
ಹೆಬ್ಬಾಳದಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿತ ಭೈರತಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್ ಎಂ ರೇವಣ್ಣ ಅವರು 'ನಾನು ಟಿಕೆಟ್ ಬಯಸಿಲ್ಲ' ಎಂದು ಘೋಷಿಸಿದರು.
ಸಿಕೆ ಜಾಫರ್ ಷರೀಫ್ ಗೆ ಆಘಾತಕಾರಿ ಹಿನ್ನಡೆ
ಮಾಜಿ ಕೇಂದ್ರ ಸಚಿವ ಸಿಕೆ ಜಾಫರ್ ಷರೀಫ್ ಅವರು ತಮ್ಮ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಬಿ ಫಾರಂ ಕೊಡಿಸಿದ್ದರು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೂಡಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮುಂದುವರೆದಿತ್ತು. ಖುದ್ದು ಭೈರತಿ ಸುರೇಶ್ ಅವರು ರೆಹಮಾನ್ ಅವರಿಗೆ ನಿಮ್ಮ ಮತ ಹಾಕಿ ಎಂದರು ಮತದಾರರಲ್ಲಿ ಮೂಡಿದ ಗೊಂದಲ ನಿವಾರಣೆಯಾಗದೆ ಮತಗಳೆಲ್ಲವೂ ಬಿಜೆಪಿ ಕಡೆಗೆ ತಿರುಗಿತು.
ಮುಂದುವರೆದ ಮೂಲ ಕಾಂಗ್ರೆಸ್ vs ವಲಸೆ ಕಾಂಗ್ರೆಸ್
2006ರಲ್ಲಿ ಕಾಂಗ್ರೆಸ್ ಬಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಪಡೆದಿದ್ದು ಬಿಟ್ಟರೆ, ಪಕ್ಷದಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಮಾಜವಾದಿ ನೆಲೆಯ ನಾಯಕರಿಗೆ ಸಾಧ್ಯವಾಗಲೇ ಇಲ್ಲ. ಕುರುಬ ಜನಾಂಗ ಹಾಗೂ ಅಹಿಂದಕ್ಕೆ ಏನಾದರೂ ಒಳ್ಳೆಯದು ಮಾಡುತ್ತಾರೆ ಎಂಬ ನಿರೀಕ್ಷೆಯೂ ನಿಜವಾಗಲಿಲ್ಲ. ಕುರುಬ ಜನಾಂಗದ ಸುರೇಶ್ ಅವರಿಗೆ ಹೆಬ್ಬಾಳ ಟಿಕೆಟ್ ಕೈ ತಪ್ಪಿದ್ದು ಏಕೆ ಎಂಬುದು ಇನ್ನೂ ಸಿದ್ದರಾಮಯ್ಯ ಬೆಂಬಲಿಗರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿಕೆ ಶಿವಕುಮಾರ್ ಹಾಗೂ ಎಸ್ಸೆಂ ಕೃಷ್ಣ ಪದೇ ಪದೇ ಪಕ್ಷದಲ್ಲಿ ಮಿಂಚುತ್ತಿದ್ದಾರೆ.
ಚುನಾವಣೆ ಮತದಾನ ಶೇಕಡವಾರು ಎಷ್ಟಾಗಿತ್ತು?
ಹೆಬ್ಬಾಳದ ಶಾಸಕರಾಗಿದ್ದ ಜಗದೀಶ್ ಕುಮಾರ್ (ಬಿಜೆಪಿ), ಬೀದರ್ ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ (ಕೆಜೆಪಿ) ಮತ್ತು ದೇವದುರ್ಗದ ಶಾಸಕರಾಗಿದ್ದ ವೆಂಕಟೇಶ್ ನಾಯಕ್ ಅವರ ಅಕಾಲಿಕ ಮರಣದಿಂದಾಗಿ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ಎದುರಾಗಿತ್ತು
ಮೂರು ಕ್ಷೇತ್ರಗಳ ಪೈಕಿ ಹೆಬ್ಬಾಳದಲ್ಲಿ ಶೇ 46ರಷ್ಟು ಅಂದರೆ ಅತಿ ಕಡಿಮೆ ಮತದಾನವಾಗಿದ್ದು, ದೇವದುರ್ಗದಲ್ಲಿ ಶೇ 61ರಷ್ಟು ಮತದಾನವಾಗಿದೆ. ಬೀದರ್ ಕ್ಷೇತ್ರದಲ್ಲಿ ಶೇ 56ರಷ್ಟು ಮತದಾನವಾಗಿತ್ತು. ಕಡಿಮೆ ಮತದಾನದಿಂದ ಮತಗಳ ವಿಭಜನೆಯಾಗಿ ಬಿಜೆಪಿಗೆ ವರವಾಯಿತು.
ಕಾಂಗ್ರೆಸ್ ಗೆ ಹೆಬ್ಬಾಳ ಕೈತಪ್ಪಲು ಕಾರಣವೇನು?
ಹೆಬ್ಬಾಳ ಚುನಾವಣೆಗೆ ಅಭ್ಯರ್ಥಿ ಘೋಷಣೆಯಾದ ನಂತರ ಬಿಜೆಪಿಯ ಕೆಲವು ಮುಖಂಡರು ನನ್ನನ್ನು ಭೇಟಿಯಾಗಿದ್ದರು, ಅದರಲ್ಲಿ ಬಿಜೆಪಿಯ ಹಿರಿಯ ಮುಖಂಡರೂ ಇದ್ದರು ಎಂದು ಬಾಂಬ್ ಸಿಡಿಸಿರುವ ಡಿಕೆಶಿ, ನಾನು ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ಉತ್ತಮ ಸ್ನೇಹಿತರು ಎಂದಿದ್ದರು. [ವಿವರ ಇಲ್ಲಿದೆ]
ಜಾಗತಿಕ ಬಂಡವಾಳ ಹೂಡಿಕೆ ಇನ್ವೆಸ್ಟ್ ಕರ್ನಾಟಕದ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಸಮಯವನ್ನು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ನೀಡಿರಲಿಲ್ಲ. ಪ್ರಚಾರದ ಕೊರತೆ, ಸಮನ್ವಯತೆ, ಸಂಘಟನೆ ಕೊರತೆ ಸೋಲಿಗೆ ಕಾರಣವಾಯಿತು.ದೇವದುರ್ಗದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು
ಶಾಸಕ ವೆಂಕಟೇಶ್ ನಾಯಕ್ ಅವರ ನಿಧನದಿಂದ ತೆರವಾಗಿರುವ ದೇವದುರ್ಗ ಕ್ಷೇತ್ರದಲ್ಲಿ ಟಿಕೆಟ್ಗೆ ಹೆಚ್ಚಿನ ಪೈಪೋಟಿ ಇರಲಿಲ್ಲ. ವೆಂಕಟೇಶ್ ನಾಯಕ್ ಕುಟುಂಬದಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ನಿರ್ಧಾರವಾಗಿತ್ತು. ಟಿಕೆಟ್ ಪಡೆದ ಎ ರಾಜಶೇಖರ್ ನಾಯಕ್ ಅವರು ತಂದೆಯ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್ ಅವರು ಪ್ರಚಾರದ ಬಲದಿಂದ ಜಯ ದಕ್ಕಿಸಿಕೊಂಡಿದ್ದಾರೆ. ಜೊತೆಗೆ ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚಿಕೆ ಆರೋಪ ಕೂಡಾ ಕೇಳಿ ಬಂದಿದ್ದು, ಬಿಜೆಪಿಗೆ ವರವಾಯಿತು.