ನಿಯಮ ಪಾಲಿಸದ ಶಾಲೆಗಳಿಗೆ ಕಾದಿದೆ ಗಂಡಾಂತರ
ಕರ್ನಾಟಕ ವಿಧಾನಪರಿಷತ್ತಿನಲ್ಲಿಂದು ಕಾವೇರಿದ ಚರ್ಚೆ ನಡೆಯಿತು. ಸರಕಾರ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಅಧಿವೇಶನದಲ್ಲಿ ಆಶ್ವಾಸನೆ ನೀಡಿದ್ದು ಅವುಗಳು ಹೀಗಿವೆ.
ಬೆಂಗಳೂರು, ಮಾರ್ಚ್ 17: ಕರ್ನಾಟಕ ವಿಧಾನಪರಿಷತ್ತಿನಲ್ಲಿಂದು ಕಾವೇರಿದ ಚರ್ಚೆ ನಡೆಯಿತು.
ಸರಕಾರ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಅಧಿವೇಶನದಲ್ಲಿ ಆಶ್ವಾಸನೆ ನೀಡಿದೆ. ಇವುಗಳಲ್ಲಿ ಕಾಲೇಜು ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ, ಗ್ರೂಪ್ ಬಿ ಹುದ್ದೆಗಳಿಗೆ ಪಿಡಿಒ ಹುದ್ದೆಗಳ ಉನ್ನತೀಕರಣ ಹಾಗೂ ನಿಯಮ ಪಾಲಿಸದ ಶಾಲೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದು ಸೇರಿವೆ.[ಮೈಸೂರು ಸೇರಿ 5 ನಗರಗಳಲ್ಲಿ ಪ್ಲಾಸ್ಟಿಕ್ ನೋಟ್ ಪ್ರಯೋಗ]
ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳು ಇಲ್ಲಿವೆ. [ಮಲ್ಟಿಪ್ಲೆಕ್ಸ್ ನಲ್ಲಿ ಎಳೆನೀರು ಮಾರಾಟಕ್ಕೆ ಬಿಜೆಪಿ ಆಗ್ರಹ]
ಕಾಲೇಜು ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೆ ಚಿಂತನೆ
ರಾಜ್ಯದ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ತಿಳಿಸಿದ್ದಾರೆ.
ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಸಚಿವರು, ಯು.ಜಿ.ಸಿ. ಪ್ರಕಾರ ಪ್ರತಿ ಗಂಟೆಗೆ 1000 ರೂ. ಗೌರವಧನ ನೀಡುತ್ತಿದೆ. ಇದರ ಪ್ರಕಾರ ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸುವ ಕುರಿತು ಸರ್ಕಾರ ಪರಿಶೀಲಿಸಲಿದೆ. ಸದ್ಯ ನೀಡುತ್ತಿರುವ ಗೌರವಧನವೂ ಉತ್ತಮವಾಗಿದೆ ಎಂದರು.
ಪಿ.ಡಿ.ಓ ಹುದ್ದೆ ಗ್ರೂಪ್ ಬಿ ಗೆಜೆಟೆಡ್ ಹುದ್ದೆಗೆ ಉನ್ನತೀಕರಣ
ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ಹುದ್ದೆಯನ್ನು ಗ್ರೂಪ್ ಬಿ ಗೆಜೆಟೆಡ್ ಹುದ್ದೆಗೆ ಉನ್ನತೀಕರಿಸುವ ವಿಚಾರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಅವರು ತಿಳಿಸಿದ್ದಾರೆ.
ಎಂ.ಕೆ. ಪ್ರಾಣೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿ, ಪಿ.ಡಿ.ಓ ಹುದ್ದೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಆರ್ಥಿಕ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಅಭಿಪ್ರಾಯ ಕೋರಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಈ ಬಗ್ಗೆ ಆರ್ಥಿಕ ಇಲಾಖೆಯ ಅಭಿಪ್ರಾಯ ಪಡೆಯುವಂತೆ ತಿಳಿಸಿರುತ್ತದೆ. ಆರ್ಥಿಕ ಇಲಾಖೆ ಅನುಮೋದನೆ ದೊರೆತ ನಂತರ ಮುಂದಿನ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಹಳ್ಳಿ ಸಂತೆ ಸಮಿತಿ ರಚನೆ
ರಾಜ್ಯದ ಆಯ್ದ 45 ಗ್ರಾಮ ಪಂಚಾಯಿತಿಗಳಲ್ಲಿ ಆರಂಭಿಸಿರುವ "ಹಳ್ಳಿ ಸಂತೆ" ಯೋಜನೆ ಸಫಲತೆಗಾಗಿ ಹಾಗೂ ನಿರ್ವಹಣೆಗಾಗಿ ಸ್ಥಳೀಯ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳನ್ನೊಳಗೊಂಡ ಸಮಿತಿ ರಚಿಸಲು ಚಿಂತಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ್ ಅವರು ಸದನದಲ್ಲಿ ಹೇಳಿದ್ದಾರೆ.
"ಹಳ್ಳಿ ಸಂತೆ" ಯೋಜನೆಯಡಿ ಮಾರುಕಟ್ಟೆ ಕಟ್ಟಡ ಹಾಗೂ ಪ್ರಾಂಗಣವನ್ನು ನಿರ್ಮಿಸಲು 2016-17 ನೇ ಸಾಲಿನಲ್ಲಿ 12.20 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದರು.
ನಿಯಮ ಪಾಲಿಸದ ಶಾಲೆಗಳ ವಿರುದ್ಧ ಕಠಿಣ ಕ್ರಮ
ಕರ್ನಾಟಕ ಶಿಕ್ಷಣ ಕಾಯ್ದೆ 1983 ಸೆಕ್ಷನ್ 123 ರ ಪ್ರಕಾರ ನಿಯಮ ಪಾಲಿಸದ ಶಾಲೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ಅವರು ತಿಳಿಸಿದರು.
ಸರ್ಕಾರದ 2016 ರ ಸುತ್ತೋಲೆ ಪ್ರಕಾರ ಶಾಲೆಗಳನ್ನು ಆರಂಭಿಸಲು ಅರ್ಹ ಆಡಳಿತ ಮಂಡಳಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಶಾಲೆಗಳ ವಿರುದ್ಧ ಯಾವುದೇ ದೂರುಗಳು ಬಂದಲ್ಲಿ ಇಲಾಖೆಯ ಅಧಿಕಾರಿಗಳಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ತ್ಯಾಜ್ಯ ವಿಲೇವಾರಿಗೆ ಕ್ರಮ
ಗ್ರಾಮ ಪಂಚಾಯತಿಗಳ ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ತ್ಯಾಜ್ಯ ವಿಲೇವಾರಿಗಾಗಿ ಸೂಕ್ತ ಸ್ಥಳವನ್ನು ಗುರುತಿಸಿ, ಹಂತ ಹಂತವಾಗಿ ಘಟಕಗಳನ್ನು ನಿರ್ಮಿಸಲು ಹಾಗೂ ಅವಶ್ಯವಿದ್ದಲ್ಲಿ ಬಹು ಗ್ರಾಮ ಆಧಾರಿತ ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.