ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ: ಕ್ಯಾಬಿನೆಟ್ ಮೀಟಿಂಗ್ ನಲ್ಲಿ ನಡೆದದ್ದೇನು?
ಬುಧವಾರ (ಜುಲೈ 19) ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಹಿರಿಯ ಸಚಿವರ ಆಕ್ಷೇಪದ ನಡುವೆಯೂ, ಪ್ರತ್ಯೇಕ ಧ್ವಜದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಹೈಕಮಾಂಡಿನ ಮನವೊಲಿಸುವುದಾಗಿ ಹೇಳಿದ್ದಾರೆ.
ಚುನಾವಣಾ ವರ್ಷದ ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒಂದರ ಮೇಲೊಂದು ಕನ್ನಡಪರ ಆಡಳಿತಾತ್ಮಕ ನಿರ್ಧಾರಕ್ಕೆ, ಕಾಂಗ್ರೆಸ್ ಹೈಕಮಾಂಡ್ ಮತ್ತು ಸಚಿವ ಸಂಪುಟದ ಸದಸ್ಯರು ಅವರ ಬೆನ್ನಿಗೆ ನಿಲ್ಲುತ್ತಾರಾ? ಕನ್ನಡದ ಮೇಲಿನ ಅವರ ಪ್ರೇಮಕ್ಕೆ ಕನ್ನಡಿಗರು ಫಿದಾ ಆಗುತ್ತಾರಾ?
Recommended Video
ಬಂಟ್ವಾಳ ಗಲಭೆಯಿಂದ ಹಿಡಿದು ಕರ್ನಾಟಕಕ್ಕೊಂದು ಪ್ರತ್ಯೇಕ ಧ್ವಜದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ನಾವೆಲ್ಲಾ ಭಾರತೀಯರು, ಅದಕ್ಕೂ ಮೊದಲು ನಾವು ಕನ್ನಡಿಗರು ಎನ್ನುವುದು ರಾಜ್ಯ ಕಾಂಗ್ರೆಸ್ಸಿನ ನಿಲುವು ಎನ್ನುವುದನ್ನು ಸಿಎಂ ಸಾರಲು ಹೊರಟಿದ್ದಾರಾ?
ಪ್ರತ್ಯೇಕ ಧ್ವಜಕ್ಕೆ ಕಾನೂನಿನ ಅಡೆತಡೆಯಿಲ್ಲ : ಜಯಚಂದ್ರ
ಪ್ರತ್ಯೇಕ ಧ್ವಜದ ಪರ/ವಿರೋಧ ತೀವ್ರ ಚರ್ಚೆ, ಹೈಕಮಾಂಡಿನ ಅಪಸ್ವರದ ನಡುವೆಯೂ ಸಿಎಂ ಸಿದ್ದರಾಮಯ್ಯ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಹೈಕಮಾಂಡಿನ ಮನವೊಲಿಸುವುದಾಗಿ ಹೇಳಿದ್ದಾರೆ.
ಬುಧವಾರ (ಜುಲೈ 19) ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಹಿರಿಯ ಸಚಿವರು ಪ್ರತ್ಯೇಕ ಧ್ವಜದ ವಿಚಾರದಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು ಎಂದು ಕನ್ನಡ ಟಿವಿ ಮಾಧ್ಯಮಗಳು ವರದಿ ಮಾಡಿವೆ.
ಸಚಿವರುಗಳ ಆಕ್ಷೇಪದ ನಡುವೆಯೂ ಪ್ರತ್ಯೇಕ ಧ್ವಜದ ವಿಚಾರದಲ್ಲಿ ತಮ್ಮ ನಿಲುವಿನಿಂದ ಸಿಎಂ ಸಿದ್ದರಾಮಯ್ಯ ಹಿಂದಕ್ಕೆ ಸರಿಯಲಿಲ್ಲ ಎಂದು ವರದಿಯಾಗಿದೆ. ಮುಂದೆ ಓದಿ..
ಬಿಜೆಪಿಯ ರಾಷ್ಟ್ರೀಯತೆ, ಜೆಡಿಎಸ್ಸಿನ ಪ್ರಾದೇಶಿಕ ಪಕ್ಷ ನಿಲುವಿಗೆ ಸಡ್ಡು
ಬಿಜೆಪಿಯ ರಾಷ್ಟ್ರೀಯತೆ, ಜೆಡಿಎಸ್ಸಿನ ಪ್ರಾದೇಶಿಕ ಪಕ್ಷ ಬೇಕು ಎನ್ನುವ ನಿಲುವನ್ನು ಸಮರ್ಥವಾಗಿ ಎದುರಿಸಲು ಸಿದ್ದರಾಮಯ್ಯ ಕನ್ನಡಪರ ನಿಲುವಿನ ಮೂಲಕ ತಿರುಗೇಟು ನೀಡಲು ಮುಂದಾಗಿದ್ದಾರೆಂದು ಕೆಲವು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರ ರೀತಿ ಮಾತನಾಡಬೇಡಿ
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಿರಿಯ ಸಚಿವರ ವಿರೋಧಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾವೇನೂ ಪ್ರತ್ಯೇಕ ದೇಶ ಕೇಳುತ್ತಿಲ್ಲ. ನಮ್ಮದೇ ಪ್ರತ್ಯೇಕ ಧ್ವಜ ಇದ್ದರೆ ತಪ್ಪೇನು, ಯಾಕೆ ನೀವು ಬಿಜೆಪಿ ನಾಯಕರ ರೀತಿ ಮಾತನಾಡುತ್ತೀರಾ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಸರಕಾರದ ಪರವಾಗಿ ನಿಂತುಕೊಳ್ಳಿ
ಬಿಜೆಪಿ ನಾಯಕರಿಗೆ ಬೇರೇನೂ ಕೆಲಸವಿಲ್ಲ, ನೀವು ಸರಕಾರದ ಪರವಾಗಿದ್ದು ರಾಜ್ಯ ಸರಕಾರದ ನಿಲುವನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಬೇಕು. ಪ್ರತ್ಯೇಕ ಧ್ವಜದ ಪ್ರಸ್ತಾವನೆ ಬಂದಿದ್ದಕ್ಕಾಗಿ ಈ ಕೆಲಸಕ್ಕೆ ಕೈಹಾಕಿರುವುದು ಎಂದು ಸಿದ್ದರಾಮಯ್ಯ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಮಾಧ್ಯಮದ ಮುಂದೆ ಮುಜುಗರ ತರಬೇಡಿ
ಪ್ರತ್ಯೇಕ ಧ್ವಜದ ವಿಚಾರದಲ್ಲಿ ಯಾರೂ ಮಾಧ್ಯಮಗಳ ಮುಂದೆ ಮಾತನಾಡಬಾರದು, ಸರಕಾರಕ್ಕೆ ಮುಜುಗರ ತರುವ ಕೆಲಸವನ್ನು ಮಾಡಬೇಡಿ. ಸರಕಾರದ ಪರವಾಗಿ ಯಾವುದೇ ಹೇಳಿಕೆಯನ್ನು ನಾನು ಇಲ್ಲವೇ ಸಚಿವ ಜಯಚಂದ್ರ ಮಾತ್ರ ನೀಡುತ್ತಾರೆ - ಸಿಎಂ ಸಿದ್ದರಾಮಯ್ಯ.
ಕೆಂಪಯ್ಯ ವಜಾ ಸಾಧ್ಯವಿಲ್ಲ
ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಅವರನ್ನು ವಜಾ ಮಾಡುವ ಯಾವುದೇ ಸಾಧ್ಯತೆ ಸದ್ಯಕ್ಕಿಲ್ಲ. ಪರಪ್ಪನ ಅಗ್ರಹಾರದ ವಿಚಾರ ಚರ್ಚೆಯಲ್ಲಿರುವಾಗ ಕೆಂಪಯ್ಯ ಅವರನ್ನು ವಜಾಗೊಳಿಸಿದರೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ - ಸಿಎಂ ಸಿದ್ದರಾಮಯ್ಯ.