ಹಿಂದುಳಿದವರೆಗೆ ಆಂಜನೇಯ ಏನ್ ಮಾಡಿದಾರೆ? ಓದಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಕರ್ನಾಟಕ ಸರಕಾರ ಏನೇನು ಕ್ರಮಗಳನ್ನು ಕೈಗೊಂಡಿದೆ? ಯೋಜನೆಗಳು ಮತ್ತು ಉಪಯೋಜನೆಗಳ ಅನುಷ್ಠಾನ ಯಾವ ಯಾವ ಹಂತದಲ್ಲಿದೆ? ಯಾವ ಯಾವ ಯೋಜನೆಗಳಿಗೆ ಎಷ್ಟು ಹಣ ಮೀಸಗಿಡಲಾಗಿದೆ?
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮೇಲಿನ ಈ ಎಲ್ಲ ಪ್ರಶ್ನೆಗಳಿಗೆ ಸಮಗ್ರ ವಿವರಗಳನ್ನು ನೀಡಿದ್ದಾರೆ. ಅಂಕಿಅಂಶಗಳ ಸಮೇತ, 18 ಅಂಶಗಳ ರಿಪೋರ್ಟ್ ಕಾರ್ಡ್ ಅನ್ನು ನಮ್ಮ ವೆಬ್ ಸೈಟ್ನಲ್ಲಿ ದಾಖಲು ಮಾಡಲಾಗಿದೆ, ಓದಿ.
* ಜನಸಂಖ್ಯೆಯ ಶೇಕಡಾವಾರು ಪ್ರಮಾಣಕ್ಕೆ ಅನುಗುಣವಾಗಿ ಯೋಜನಾ ವೆಚ್ಚದಲ್ಲಿ ಪಾಲು ಪಡೆಯುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ 16,356 ಕೋಟಿಗಳನ್ನು ನಿಗದಿಪಡಿಸಲಾಗಿದೆ. 2014-15ನೇ ಸಾಲಿನಲ್ಲಿ ನಿಗದಿಪಡಿಸಿದ್ದ 15,833 ಕೋಟಿ ಯೋಜನಾ ಗಾತ್ರದಲ್ಲಿ ಬಳಕೆಯ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದು, ಯೋಜನೆಗಳ ಅನುಷ್ಠಾನ ಮೊದಲ ಭಾರಿಗೆ ಶೇಕಡ 93.50ರ ತಲುಪಿರುವುದು ದಾಖಲಾಗಿದೆ.
* ಕಾಂಗ್ರೆಸ್ ಸರ್ಕಾರದ ಬದ್ಧತೆಯ ಫಲವಾಗಿ ಜಾರಿಗೆ ತಂದ ಉಪಯೋಜನೆ ಕಾಯ್ದೆಯ ಫಲಶ್ರುತಿಯಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿ ಯೋಜನೆಗೆ ನಿಗದಿಪಡಿಸಿದ ಗಾತ್ರದಲ್ಲಿ ಶೇಕಡ 100ರ ಹೆಚ್ಚಳವಾಗಿದೆ.
* ಈ ಕಾಯ್ದೆಗೆ ಮುನ್ನಾ 2013-14ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯೋಜನಾ ವೆಚ್ಚ ರೂ. 8615 ಕೋಟಿ ನಿಗದಿಯಾಗುತ್ತಿತ್ತು. ದೇಶದಲ್ಲೇ ಮೊದಲ ಬಾರಿಗೆ ಜನಸಂಖ್ಯೆಗೆ ಅನುಗುಣವಾಗಿ ಯೋಜನಾ ವೆಚ್ಚದ ಪಾಲು ಪಡೆಯುವ ಕ್ರಾಂತಿಕಾರಕ ಕಾಯ್ದೆಯ ಲಾಭ ಈ ಜನಾಂಗಕ್ಕೆ ಆಗುತ್ತಿದೆ.
* ರಾಜ್ಯವನ್ನು ಗುಡಿಸಲು ಮುಕ್ತ ಮಾಡುವ ಸರ್ಕಾರದ ಸಂಕಲ್ಪದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಆಶ್ರಯ ಕಲ್ಪಿಸಲು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ "ಡಾ. ಬಿ.ಆರ್. ಅಂಬೇಡ್ಕರ್ ನಿವಾಸ" ಯೋಜನೆಯನ್ನು ರೂ. 2400 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದೆ.
* ಈ ಯೋಜನೆ ಕೆಳಗೆ ಗ್ರಾಮಾಂತರ ಪ್ರದೇಶದಲ್ಲಿ 1 ಲಕ್ಷ ಹಾಗೂ ನಗರ ಪ್ರದೇಶದಲ್ಲಿ 50 ಸಾವಿರ ಮನೆಗಳನ್ನು ವಸತಿ ರಹಿತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ನಿರ್ಮಿಸುವ ಉದ್ದೇಶವಿದೆ.
* ಈ ಮನೆಗಳ ನಿರ್ಮಾಣದ ಘಟಕ ವೆಚ್ಚವನ್ನು ಗ್ರಾಮಾಂತರ ಪ್ರದೇಶದಲ್ಲಿ ರೂ. 1 ಲಕ್ಷ 50 ಸಾವಿರ ಹಾಗೂ ನಗರ ಪ್ರದೇಶದಲ್ಲಿ ರೂ. 1 ಲಕ್ಷ 80 ಸಾವಿರ ರೂಗಳನ್ನು ನಿಗದಿಪಡಿಸಲಾಗಿದೆ. ಇದು ವಸತಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ.
* ಭಾರಿ ನೀರಾವರಿ ಇಲಾಖೆಯಲ್ಲಿ ಅಪೂರ್ಣಗೊಂಡ ನೀರಾವರಿ ಕಾಮಗಾರಿಗಳು, ಕಾಲೋನಿಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ನೇರವಾಗಿ ಪ್ರಯೋಜನವಾಗುವ ನೀರಾವರಿ ಸೌಲಭ್ಯಗಳಿಗೆ ಇಲಾಖೆಯು ರೂ. 2300 ಕೋಟಿ ವೆಚ್ಚ ಮಾಡಲಿದೆ.
* ವಿದೇಶ ವ್ಯಾಸಂಗ, ಸಫಾಯಿ ಕರ್ಮಚಾರಿಗಳ ಸರ್ವತೋಮುಖ ಅಭಿವೃದ್ಧಿ, ಭೋವಿ, ಬಂಜಾರ ಜನಾಂಗದ ಅಭಿವೃದ್ಧಿ, ವಿದ್ಯಾರ್ಥಿನಿಲಯಗಳ ಸ್ಥಿತಿ-ಗತಿ ಸುಧಾರಣೆ ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ರೂ. 3988 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ.
* 1 ಲಕ್ಷ 50 ಸಾವಿರ ಶೌಚಾಲಯ ನಿರ್ಮಾಣ, ಕಾಲೋನಿಗಳಿಗೆ ಕೊಳವೆ ನೀರಿನ ಸೌಲಭ್ಯ, ಸಂಪರ್ಕ ರಸ್ತೆಗಳ ನಿರ್ಮಾಣಕ್ಕಾಗಿ ಒಟ್ಟಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರೂ. 2120 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
* ಪ್ರಸಕ್ತ ವರ್ಷ ಯೋಜನಾ ಗಾತ್ರದಲ್ಲಿ 33 ಇಲಾಖೆಗಳಿಗೆ 346 ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಕೃಷಿ ಇಲಾಖೆಯಲ್ಲಿ ಟ್ರ್ಯಾಕ್ಟರ್ಗಳಿಗೆ ನೀಡುತ್ತಿದ್ದ ಸಹಾಯಧನವನ್ನು ರೂ. 75 ಸಾವಿರದಿಂದ 2 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಬಾಬ್ತಿಗೆ ರೂ. 30 ಕೋಟಿ ನಿಗದಿಪಡಿಸಲಾಗಿದೆ. ರೈತರಿಗೆ ಬೀಜ ವಿತರಣೆಯ ಸಹಾಯಧನವನ್ನು ಶೇಕಡ 50ರಿಂದ ಶೇಕಡ 75ಕ್ಕೆ ಹೆಚ್ಚಿಸಲಾಗಿದ್ದು ಅದಕ್ಕಾಗಿ ರೂ. 10 ಕೋಟಿ ರೂ.ಗಳನ್ನು ತೆಗೆದಿಡಲಾಗಿದೆ.
* ಹನಿ ಮತ್ತು ತುಂತುರು ನೀರಾವರಿಗೆ ಅದ್ಯತೆ ನೀಡಲಾಗಿದ್ದು, ಸಮಾಜ ಕಲ್ಯಾಣ ಇಲಾಖಾ ನಿಗಮಗಳಿಂದ ಕೊರೆದಿರುವ ಕೊಳವೆ ಬಾವಿಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ. ತೋಟಗಾರಿಕೆ ಬೆಳೆಗಳ ಪಾಲಿಹೌಸ್ ಕಾರ್ಯಕ್ರಮಕ್ಕೆ ಶೇಕಡ 90ರಷ್ಟು ಸಹಾಯಧನ ನೀಡಲು ತೀರ್ಮಾನಿಸಲಾಗಿದೆ. ಇದರ ಘಟಕ ವೆಚ್ಚವನ್ನು ರೂ. 20ರಿಂದ 25 ಲಕ್ಷಕ್ಕೆ ಹೆಚ್ಚಿಸಲಾಗಿದೆ.
* ರೇಷ್ಮೆ ಹುಳು ಸಾಕಾಣಿಕೆಗೆ ಮನೆ ನಿರ್ಮಾಣಕ್ಕಾಗಿ ನೀಡುವ ರೂ. 2 ಲಕ್ಷದ 75 ಸಾವಿರ ಘಟಕ ವೆಚ್ಚದಲ್ಲಿ ಶೇಕಡ 90ರಷ್ಟು ಸಹಾಯಧನ ನೀಡಲಾಗುವುದು. ರೇಷ್ಮೆ ಗೂಡಿನ ಪ್ರೋತ್ಸಾಹ ಧನವಾಗಿ ಪ್ರತಿ ಕೆ.ಜಿ.ಗೆ ರೂ. 30 ಹಾಗೂ ದ್ವಿತಳಿಗೆ ಕೆ.ಜಿ.ಗೆ ರೂ. 50 ನೀಡಲು ತೀರ್ಮಾನಿಸಲಾಗಿದೆ.
* ಪಶು ಸಂಗೋಪನಾ ಇಲಾಖೆಯಲ್ಲಿ ಹಾಲು ಉತ್ಪಾದನೆಗೆ ಪ್ರೋತ್ಸಾಹಿಸುವ ಜೊತೆಗೆ ಈ ಜನ ವರ್ಗದ ಆರ್ಥಿಕ ಸ್ಥಿತಿ-ಗತಿಗಳನ್ನು ಸುಧಾರಿಸಲು ಎಮ್ಮೆ, ಕುರಿ, ಮೇಕೆ ಮತ್ತು ಹಸು ಖರೀದಿಸಲು ನೀಡಲಾಗುತ್ತಿದ್ದ ಸಹಾಯಧನವನ್ನು ಶೇಕಡ 33ರಿಂದ ಶೇಕಡ 50ಕ್ಕೆ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ.
* ಸಹಕಾರ, ಪ್ರವಾಸೋದ್ಯಮ, ಯುವಜನ ಸೇವೆ, ಕಂದಾಯ, ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕಾನೂನು ಇಲಾಖೆಗಳಲ್ಲಿ ನಿಗದಿಪಡಿಸಿದ್ದ ಹಣವನ್ನು ನೂರಕ್ಕೆ ನೂರರಷ್ಟು ವೆಚ್ಚ ಮಾಡಲಾಗಿದೆ. ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಆದ ವಿಳಂಬದಿಂದಾಗಿ ಪ್ರಗತಿ ಕುಂಠಿತವಾಗಿದೆ.
* ಹೊಸ ಕಾಯ್ದೆ ಜಾರಿಗೆ ಬಂದ ಮೊದಲ ವರ್ಷದಲ್ಲಿ ಪ್ರಗತಿ ಆಶಾದಾಯಕವಾಗಿದ್ದು, ಕೇಂದ್ರ ಸರ್ಕಾರದಿಂದ ಕೃಷಿ (210), ತೋಟಗಾರಿಕೆ (129), ಉನ್ನತ ಶಿಕ್ಷಣ (105), ಸರ್ವಶಿಕ್ಷಣ (70), ಆರೋಗ್ಯ (100) ಹಾಗೂ ಇತರೆ ಇಲಾಖೆಗಳಿಗೆ ನಿಗದಿಯಾಗಿದ್ದ ಸುಮಾರು ರೂ. 700 ಕೋಟಿ ಅನುದಾನ ಬಿಡುಗಡೆ ಆಗದ ಕಾರಣ ಶೇ. 100ರ ಪ್ರಗತಿ ಸಾಧಿಸಲಾಗಿಲ್ಲ.
* ತಾಂತ್ರಿಕ ಕಾರಣಗಳು ಹಾಗೂ ಹಣ ಬಿಡುಗಡೆ ವಿಳಂಬದಿಂದಾಗಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ರೂ. 2258 ಕೋಟಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ರೂ. 819 ಕೋಟಿ ರೂಗಳು ವೆಚ್ಚವಾಗಿಲ್ಲ. ಈ ಹಣ ಮೊದಲಿನಂತೆ ಹಿಂದಕ್ಕೆ ಹೋಗುವುದಿಲ್ಲ. ಹೊಸ ಕಾಯ್ದೆಯಲ್ಲಿ ಅನುವು ಮಾಡಿಕೊಟ್ಟರುವಂತೆ ಅದನ್ನು ಮುಂದಿನ ವರ್ಷ ವೆಚ್ಚ ಮಾಡಬಹುದಾಗಿದೆ.
* ಇಲಾಖೆಯು ಯೋಜನೆಗಳ ಅನುಷ್ಠಾನದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದ್ದು, ಪೂರ್ಣ ಪ್ರಮಾಣದ ಹಣ ಬಳಕೆಗೆ ಇದ್ದ ಅಡ್ಡಿ ಆತಂಕಗಳನ್ನು ಪ್ರಸಕ್ತ ಸಾಲಿನಲ್ಲಿ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಸಿಬ್ಬಂದಿ ಮೊದಲಿಗಿಂತಲೂ ಹೆಚ್ಚಿನ ಶ್ರದ್ಧೆಯಿಂದ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ ಪಟ್ಟಿರುವುದು ಪ್ರಸಂಶಾರ್ಹವಾಗಿದೆ.
* ಪ್ರಸಕ್ತ ಸಾಲಿನಲ್ಲಿ ಯಾವುದೇ ಕಾರಣಕ್ಕೂ ನಿಗದಿಯಾದ ಅನುದಾನ ಉಳಿಯದಂತೆ ಶೇಕಡ ನೂರಕ್ಕೆ ನೂರರಷ್ಟು ವೆಚ್ಚ ಮಾಡಲೇಬೇಕು. ಮಾಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮೇ ತಿಂಗಳ ಕೊನೆಯ ವಾರದಲ್ಲಿ ನಡೆದ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯ ರಾಜ್ಯ ಪರಿಷತ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದ್ದಾರೆ.