ಸುಗ್ಗಿ ಕಾಲ ಬಂತು, ಸಂಕ್ರಾಂತಿ ಸಂಭ್ರಮ ತಂತು
ನಮ್ಮೆಲ್ಲ ಓದುಗರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸುಗ್ಗಿ ಕಾಲ ಬಂದಿದೆ. ಸಂಕ್ರಾಂತಿ ಸಡಗರ ತಂದಿದೆ. ರೈತನಿಗೆ ಕಷ್ಟಪಟ್ಟು ಬೆಳೆದ ಫಸಲು ಕೈ ಸೇರುವ ಸಂಭ್ರಮ. ಗ್ರಾಮೀಣ ಭಾಗದಲ್ಲಿ ಒಂದೆರಡು ದಿನ ಎಲ್ಲ ಕೃಷಿ ಕೆಲಸಗಳನ್ನು ಬದಿಗೊತ್ತಿ ಊರವರೆಲ್ಲ ಒಟ್ಟಾಗಿ ಹಬ್ಬ ಆಚರಣೆ ಮಾಡುವ ಸಂಕ್ರಾಂತಿ ಹಬ್ಬಕ್ಕೆ ಸಂಕ್ರಾಂತಿಯೇ ಸಾಟಿ.
ಅದು ಭತ್ತ, ಜೋಳದ ಪೈರಿರಬಹುದು, ಅಡಿಕೆಗೊನೆಯಿರಬಹುದು. ಪ್ರಕೃತಿಯಲ್ಲೇ ದೇವರನ್ನು ಕಂಡ ಭಾರತೀಯನ ಹಬ್ಬಗಳಿಗೆ ಇರುವ ವೈಜ್ಞಾನಿಕ ಹಿನ್ನಲೆ ಬಗ್ಗೆ ಹೇಳಬೇಕಿಲ್ಲ. ಹಬ್ಬದ ಸಂಭ್ರಮವನ್ನು ಗ್ರಾಮೀಣ ಕ್ರೀಡೆಗಳು ಇಮ್ಮಡಿಗೊಳಿಸುತ್ತವೆ. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿನ ಹೋರಿ ಬೆದರಿಸುವ ಸ್ಫರ್ಧೆಯಲ್ಲಿ ಭಾಗವಹಿಸುವುದೇ ಒಂದು ತೃಪ್ತಿ.[ಚೀನಿ ಕಾಯಿಗೆಷ್ಟು? ಜೋಡಿ ಕಬ್ಬಿಗೆಷ್ಟು? ಹೂವಿನ ದರ ಎಷ್ಟಿದೆ?]
ಇದೆಲ್ಲದರ ಜತೆಗೆ ಕಲ್ಲು ಎತ್ತುವ ಸ್ಪರ್ಧೆ ಎಳ್ಳು ಬೆಲ್ಲದ ಹಬ್ಬಕ್ಕೆ ಬೇಕೆ ಬೇಕು. ರೈತರೆಲ್ಲ ಒಗ್ಗೂಡಿ ವರ್ಷದ ಶ್ರಮವನ್ನು ಕಳೆಯುವ ದಿನವೇ ಸಂಕ್ರಾಂತಿ. ಇಲ್ಲಿ ಸೂರ್ಯ ತನ್ನ ಪಥ ಬದಲಾಯಿಸಿದರೆ ಜನರು ತಮ್ಮ ವರ್ಷದ ಹರ್ಷವನ್ನು ಲೆಕ್ಕ ಹಾಕಿಕೊಳ್ಳುತ್ತಾರೆ. ಉತ್ತಮ ಫಸಲು ಕೈಗೆ ಬಂದಿದ್ದರೆ ಸಂಭ್ರಮದ ಸಂಕ್ರಾಂತಿಗೆ ಯಾವ ಕೊರತೆ ಆಗುವುದಿಲ್ಲ. ಗೋವುಗಳಿಗೂ ವಿಶೇಷ ಪೂಜೆ ಸಲ್ಲಿಸುವ ವಾಡಿಕೆ ಹಲವೆಡೆ ಇದೆ.
ಹೋರಿ ಬೆದರಿಸುವ ಸ್ಪರ್ಧೆ
ಮಲೆನಾಡಿನ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡುವುದೇ ಚೆಂದ. ಕೆಲವೊಮ್ಮೆ ಹೋರಿ ಹಿಡಿಯಲು ಹೋಗಿ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಜೀವ ಕಳೆದುಕೊಂಡ ಪ್ರಕರಣಗಳು ನಡೆದಿದ್ದಿದೆ. ಹೋರಿ ಬೆದರಿಸುವ ಸ್ಪರ್ಧೆಗೂ ಕೊಬ್ಬರಿ ಕಾಯಿಯೂ ನಟು. ದೀಪಾವಳಿ ಸಂದರ್ಭವೂ ಹೋರಿ ಬೆದರಿಸುವ ಸ್ಪರ್ಧೆ ಮತ್ತೂ ಜೋರಾಗಿರುತ್ತದೆ.
ಬೆಜ್ಜವಳ್ಳಿಯಲ್ಲಿ ವಿಶೇಷ ಪೂಜೆ
ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಕರ್ನಾಟಕದ ಶಬರಿಮಲೆ ಎಂದೇ ಖ್ಯಾತಿ ಪಡೆದಿದೆ. ಶಿವಮೊಗ್ಗ ಜಿಲ್ಲೆಯ ಭಕ್ತಾ„ಗಳು ಮಾತ್ರವಲ್ಲದೆ, ರಾಜ್ಯದ ಎಲ್ಲೆಡೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಉತ್ಸವದಲ್ಲಿ ಭಾಗವಹಿಸುತ್ತಾರೆ.
ಪುಣ್ಯ ಸ್ನಾನ
ಉತ್ತರ ಭಾರತದಲ್ಲಿ ಪುಣ್ಯ ಸ್ನಾನಕ್ಕೆ ವಿಶೇಷ ಆದ್ಯತೆ. ಗಂಗಾ ನದಿಯಲ್ಲಿ ಸಂಕ್ರಾಂತಿ ದಿನ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆಯೂ ಇದೆ. ಹರಿದ್ವಾರದಲ್ಲೂ ಭಕ್ತರು ಮಿಂದೇಳುತ್ತಾರೆ.
ಮೊಲವನ್ನು ಪೂಜಿಸುತ್ತಾರೆ
ಚಿಕ್ಕಜಾಜೂರಿನಲ್ಲಿ ಸಂಕ್ರಾಂತಿ ನಿಮಿತ್ತ ಅರಣ್ಯದಿಂದ ಹಿಡಿದು ತಂದ ಮೊಲಕ್ಕೆ ಪೂಜೆ ಮಾಡುವ ಸಂಪ್ರದಾಯವೂ ಇದೆ. ಮೊಲವನ್ನು ಪೂಜಿಸಿ, ಪೂರ್ವದ ದಿಕ್ಕಿನ ಕಡೆ ಬಿಡಲಾಗುತ್ತದೆ. ಮೊಲವು ಹಿಂತಿರುಗದೆ ಮುಂದೆ ಓಡಿ ಹೋದರೆ, ಇಡೀ ವರ್ಷ ಗ್ರಾಮದಲ್ಲಿ ಸಮೃದ್ಧ ಮಳೆ-ಬೆಳೆ ಹಾಗೂ ಗ್ರಾಮಕ್ಕೆ ಒಳ್ಳೆಯದಾಗುವುದೆಂಬ ನಂಬಿಕೆ ಗ್ರಾಮಸ್ಥರಲ್ಲಿದೆ.