ಬೆಂಗಳೂರು: ಆರ್ ಎಸ್ ಎಸ್ ವಾರ್ಷಿಕ ಶಿಬಿರ ಮುಕ್ತಾಯ
ಬೆಂಗಳೂರು, ಮೇ 10: ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ 20 ದಿನಗಳ ವಾರ್ಷಿಕ ಕಾರ್ಯಕರ್ತ ತರಬೇತಿ ಶಿಬಿರ 'ಸಂಘ ಶಿಕ್ಷಾ ವರ್ಗ-2015' ಮುಕ್ತಾಯವಾಯಿತು.
ಶಿಬಿರಾಧಿಕಾರಿ ವರದರಾಜನ್ ಮಾತನಾಡಿ. ಈ ಬಾರಿಯ ದ್ವಿತೀಯ ವರ್ಷದ ಪ್ರಶಿಕ್ಷಣ ವರ್ಗದಲ್ಲಿ 101 ಊರುಗಳಿಂದ 148 ಶಿಕ್ಷಾರ್ಥಿಗಳು ಹಾಗೂ ಪ್ರಥಮ ವರ್ಷದ ವರ್ಗದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ 329 ಊರುಗಳಿಂದ 642 ಶಿಕ್ಷಾರ್ಥಿಗಳು ಸೇರಿದಂತೆ ಒಟ್ಟು 780 ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು.[ಹಿಂದು ಸಮಾಜೋತ್ಸವಕ್ಕೆ ಹರಿದು ಬಂದ ಜನಸಾಗರ]
ಎಪ್ರಿಲ್ 19ರಿಂದ ಆರಂಭಗೊಂಡ 20 ದಿನಗಳ ಶಿಬಿರದಲ್ಲಿ 10ನೇ ತರಗತಿಯಿಂದ ಆರಂಭಗೊಂಡು ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಶಿಕ್ಷಣ ಪೂರೈಸಿದ ಶಿಕ್ಷಾರ್ಥಿಗಳು ಸೇರಿದಂತೆ ಕೃಷಿಕರು, ಉದ್ಯೋಗಿಗಳು, ಕಾರ್ಮಿಕರು ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಶಿಬಿರದ ನಿತ್ಯದ ಚಟುವಟಿಕೆಯಲ್ಲಿ ದಂಡಯುದ್ಧ, ನಿಯುದ್ಧ, ಯೋಗಾಸನ, ಆಟಗಳು ಮೊದಲಾದ ಶಾರೀರಿಕ ಶಿಕ್ಷಣದ ಜೊತೆಗೆ ಗುಂಪು ಚರ್ಚೆ, ಭಾಷಣ, ಕಥೆಗಳ ಮೂಲಕ ದೇಶದ ಇತಿಹಾಸ, ವರ್ತಮಾನಗಳನ್ನು ಅರಿಯುವ ಪ್ರಯತ್ನ ಮಾಡಲಾಯಿತು. ಜೊತೆಗೆ ದೇಶ ಮತ್ತು ಸಮಾಜ ಇಂದು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವ ಚಿಂತನೆಯನ್ನು ನಡೆಸಲಾಯಿತು ಎಂದು ತಿಳಿಸಿದರು.
ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್, ಆಖಿಲ ಭಾರತೀಯ ಸಂಪರ್ಕ ಪ್ರಮುಖ್ ಅನಿರುದ್ಧ ದೇಶಪಾಂಡೆ, ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ್ ಭೇಂಡೆ, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ಮುಕುಂದ್, ಪರಿವಾರ ಪ್ರಭೋದನ ಸಂಯೋಜಕ ಕಜಂಪಾಡಿ ಸುಬ್ರಮಣ್ಯ ಭಟ್, ಹಿರಿಯ ಪ್ರಚಾರಕರಾದ ಕೃ ಸೂರ್ಯನಾರಾಯಣ ರಾವ್, ಮೈ ಚ ಜಯದೇವ, ಸು ರಾಮಣ್ಣ ಮುಂತಾದವರು ಸೇರಿದಂತೆ ಅನೇಕರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸಮಾಜ ಸೇವೆ, ದೇಶದ ಏಕತೆ ಮತ್ತು ಭೂಕಂಪದಂಥ ತುರ್ತು ಪರಿಸ್ಥಿತಿ ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳು. ದೇಶವನ್ನು ಮುನ್ನಡೆಸಲು ನಡೆದಿಕೊಳ್ಳಬೇಕಾದ ರೀತಿ ಮುಂದಾದವುಗಳನ್ನು ವಿವರಿಸಲಾಯಿತು.