ಮಾಜಿ ಮುಖ್ಯಮಂತ್ರಿಗೆ ವಿಶ್ವನಾಥ್ ನೀಡಿದ ಟಾಂಗ್
ನವದೆಹಲಿ, ಜೂ 12: ಪ್ರಧಾನಿ ನರೇಂದ್ರ ಮೋದಿಯವರ ಒಂದು ನಡೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ತಮ್ಮ ಸಚಿವ ಸಂಪುಟದಲ್ಲಿ 75 ವರ್ಷ ಮೀರಿದ ವ್ಯಕ್ತಿಗಳಿಗೆ ಅವರು ಸಚಿವ ಸ್ಥಾನ ನೀಡಲಿಲ್ಲ. ಅದು ಅಡ್ವಾಣಿಯಾಗಲಿ ಅಥವಾ ಮುರಳಿ ಮನೋಹರ್ ಜೋಷಿಯಾಗಲಿ ಎಂದು ಮೈಸೂರಿನ ಮಾಜಿ ಸಂಸದ ಎಚ್ ವಿಶ್ವನಾಥ್ ಹೇಳಿದ್ದಾರೆ.
ಹಾಗೆಯೇ, ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಅವರು ರಾಜ್ಯಸಭೆಗೆ ಟಿಕೆಟ್ ಸಿಗಲಿಲ್ಲವೆಂದು ಬೇಸರಿಕೊಳ್ಳಬಾರದು. ಕಾಂಗ್ರೆಸ್ ಪಕ್ಷ ಅವರಿಗೆ ಎಲ್ಲವನ್ನೂ ನೀಡಿದೆ ಎಂದು ಮೈಸೂರಿನ ಮಾಜಿ ಸಂಸದ ಎಚ್ ವಿಶ್ವನಾಥ್. ಕೃಷ್ಣ ಅವರಿಗೆ ಟಾಂಗ್ ನೀಡಿದ್ದಾರೆ. (ಎಸ್.ಎಂ.ಕೃಷ್ಣ ಕೈ ತಪ್ಪಿದ ರಾಜ್ಯಸಭೆ ಟಿಕೆಟ್)
ಕೃಷ್ಣ ಅವರು ರಾಜಕೀಯದಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿದ್ದಾರೆ. ತಮ್ಮ ಅನುಭವವನ್ನು ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಮತ್ತು ಯವಕರಿಗೆ ದಾರೆ ಎರೆಯಲಿ ಎಂದು ವಿಶ್ವನಾಥ್ ಸಲಹೆ ನೀಡಿದ್ದಾರೆ.
ಎಷ್ಟೇ ಒತ್ತಡವದಿದ್ದರೂ ಪ್ರಧಾನಿ ತಮ್ಮ ಸಂಪುಟಕ್ಕೆ 75 ವರ್ಷ ಮೇಲ್ಪಟ್ಟವರನ್ನು ಸೇರಿಸಿಕೊಳ್ಳಲಿಲ್ಲ. ಅದಕ್ಕೆ ಅವರು ಅಭಿನಂದನೆಗೆ ಅರ್ಹರು. ನಾನು ಕೂಡಾ ಹಿಂದಿನಿಂದಲೂ 72 ವರ್ಷ ಮೀರಿದವರು ರಾಜಕೀಯದಿಂದ ನಿವೃತ್ತಿಯಾಗಬೇಕೆಂದು ಹೇಳಿಕೊಂಡು ಬರುತ್ತಿದ್ದವನು ಎಂದು ವಿಶ್ವನಾಥ್ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.
ಕೃಷ್ಣ ಅವರು ತನಗೆ ಟಿಕೆಟ್ ಸಿಗಲಿಲ್ಲವೆಂದು ಬೇಸರಿಸಿಕೊಳ್ಳಬಾರದು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಸ್ಥಾನಮಾನಗಳು ಅವರಿಗೆ ದೊರೆತಿವೆ. ಟಿಕೆಟ್ ಸಿಗದ ವಿಚಾರವನ್ನು ದೊಡ್ಡದು ಮಾಡುವುದು ಬೇಡವೆಂದು ವಿಶ್ವನಾಥ್ ಪಕ್ಷದ ಎಲ್ಲರಿಗೂ ಸಲಹೆ ನೀಡಿದ್ದಾರೆ.