ಕಾರವಾರ: ಸಿದ್ದಾಪುರ ಗ್ರಾಮಸ್ಥರಿಂದ ರಸ್ತೆ ನಿರ್ಮಾಣ
ಕಾರವಾರ, ಜೂನ್ 23: 'ಇಪ್ಪತ್ತ ವರ್ಷಾ ಆತು, ಅರ್ಧ ಕಿ.ಮೀ ರಸ್ತೆ ಮಾಡಿಸಿ ಕೊಡ್ರಿ ಅಂತ ಕೇಳಾಕತ. ರಾಜಕೀಯದವ್ರ ಮನಿಗ ಅಡ್ಡ್ಯಾಡಿ ಹತ್ತು ಹನ್ನಾಡು ಜೋಡ ಚಪ್ಪಲಿ ಸವದಾವು, ಆದ್ರೂ ನಮಗ ಓಡಾಡಕ ರಸ್ತೆ ಆಗಿಲ್ಲ. ಅದಕ್ಕ ಇವರನ್ನ ಕೇಳ ಬಾರದು ಅಂತ ತಿರ್ಮಾನಾ ಮಾಡಿ ನಾವ ರಸ್ತೆ ಮಾಡಾಕತ್ತೇವಿ' ಇದು ಕಾರವಾರ ಜಿಲ್ಲೆಯ ಹಳಿಯಾಳ ತಾಲೂಕಿನ ಕಾಡಿನ ಮಧ್ಯೆದಲ್ಲಿರುವ ಸಿದ್ಧಾಪುರ ಗ್ರಾಮಸ್ಥರ ಆಕ್ರೋಶದ ನುಡಿ.
ಗ್ರಾಮಸ್ಥರ ಬೇಡಿಕೆ ಈಡೇರಿಸಲು ವಿಫಲವಾಗಿರುವ ವ್ಯವಸ್ಥೆ ವಿರುದ್ಧ ಆಕ್ರೋಶಗೊಂಡಿರುವ ಗ್ರಾಮಸ್ಥರು ತಾವೇ ರಸ್ತೆ ನಿರ್ಮಾಣ ಮಾಡಿಕೊಳ್ಳಲು ಮುಂದಾಗಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ಹೌದು, ತಾಲೂಕು ಕೇಂದ್ರ ಹಳಿಯಾಳದಿಂದ ಕೇವಲ 4 ಕಿ.ಮೀ ಅಂತರದಲ್ಲಿರುವ ಈ ಗ್ರಾಮದ ಸಂಪರ್ಕಕ್ಕೆ ಕೇವಲ ಅರ್ಧ ಕಿ.ಮೀ ರಸ್ತೆ ನಿರ್ಮಿಸಿ ಕೊಡದಷ್ಟು ನಿರ್ಲಕ್ಷ್ಯ ತೋರಿರಿವುದು ರಾಜ್ಯದ ಬೃಹತ್ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಅವರ ಸ್ವಕ್ಷೇತ್ರದಲ್ಲಿ ಎಂಬುದು ವಿಶೇಷ.
ಕೇವಲ 14 ಕುಟುಂಬಗಳ 85 ಜನಸಂಖ್ಯೆಯುಳ್ಳ ಈ ಪುಟ್ಟ ಹಾಡಿ ಸಂಪೂರ್ಣ ಕಾಡಿನಿಂದ ಆವೃತ್ತವಾಗಿದೆ. ಮಳೆಗಾಲದಲ್ಲಿ ಈ ಹಾಡಿ ಅಕ್ಷರಶಃ ದ್ವೀಪವಾದಂತಾಗುತ್ತಿದ್ದು, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆತರಬೇಕಾದರೆ ಹೊತ್ತುಕೊಂಡೆ ಬರುವ ಅನಿವಾರ್ಯ ಇತ್ತು.
''500 ಮೀಟರ್ ರಸ್ತೆಕ 500 ಸಲ ರಾಜಕಿಯದವ್ರ ಮನೀಗ ಹೋಗಿದ್ರೂ ಯಾವ ಉಪಯೋಗನೂ ಆಗಲಿಲ್ಲ. ಅದಕ್ಕ ನಮ್ಮ ಊರವರೆಲ್ಲಾ ಸೇರಿ ನಾವ ರಸ್ತೆ ಮಾಡಾಕತೇವಿ. ಇದಕ್ಕ ಒಂದು ಪೈಸಾ ಸರ್ಕಾರ ರೊಕ್ಕಾ ಕೊಟ್ಟಿಲ್ಲ. ಎಲೆಕ್ಷನ್ದಾಗ ವೋಟ ಕೇಳಾಕ ಬಂದವ್ರಿಗೆ ಇನ್ಮೇಲಾದ್ರೂ ನಾಚಿಕೆ ಆಗಲಿ. ಮುಂದ ವೋಟ ಕೇಳಾಗ ಬರ್ಲಿ ಆವಾಗ ಪಾಠ ಕಲಿಸ್ತಿವಿ'' ಎನ್ನುತ್ತಾರೆ ಗ್ರಾಮದ ಗಣಪತಿ ಗೌಡ.
''ನಾವು ಮನಷ್ಯಾರ ಅದೇವಿ. ನಾವೇನ ಡಾಂಬರ್ ರಸ್ತೆ ಕೇಳಾಕತ್ತಿಲ್ಲ. ಕಚ್ಚಾ ರಸ್ತೆಯಾದ್ರೂ ಮಾಡಿಸಿಕೊಡ್ರಿ ಅಂತ ಕೇಳಿದ್ರ ನಮ್ಮನ್ನ ಭಿಕ್ಷೆ ಬೇಡಾಕ ಬಂದವ್ರ ತರಾ ನೋಡೋದು ನಮ್ಮ ಸ್ವಾಭಿಮಾನಕ್ಕ ಧಕ್ಕೆ ಬಂತ. ಅದಕ್ಕ ನಮ್ಮ ಊರಿನ ರಸ್ತೆ ನಾವ ಮಾಡ್ಕೊಳಾಕತ್ತೇವಿ'' ಎನ್ನುತ್ತಾರೆ ಪಾಂಡುರಂಗ ಘಾಡಿ.
ಸಾವಿರಾರು ಕೋಟಿ ಅನುದಾನ ವಿರುವ ರಾಜ್ಯದ ಬೃಹತ್ ಕೈಗಾರಿಕೆ ಖಾತೆ ಸಚಿವ ಆರ್.ವಿ.ದೇಶಪಾಂಡೆ ಅವರು ಪ್ರತಿನಿಧಿಸುವ ಹಳಿಯಾಳ ಕ್ಷೇತ್ರದ ಸ್ಥಿತಿನೇ ಹೀಗಾದರೆ ಸಾಮಾನ್ಯ ಶಾಸಕರಾಗಿರುವ ಕ್ಷೇತ್ರಗಳ ಸ್ಥಿತಿ ಇನ್ನು ದೇವರಿಗೆ ಪ್ರೀತಿ.