ಬೈಕಿಗೆ ಕಾರು ಡಿಕ್ಕಿ, ಇಬ್ಬರ ಸಾವು, ಸುಟ್ಟು ಭಸ್ಮವಾದ ಕಾರು
ಮಂಡ್ಯ,ಮಾರ್ಚ್,31: ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಕಾರು ಬೈಕ್ ಸ್ಥಳದಲ್ಲಿಯೇ ಸುಟ್ಟು ಭಸ್ಮವಾದ ಘಟನೆ ಮಳವಳ್ಳಿ ತಾಲೂಕಿನ ಬೋಸೆಗೌಡನದೊಡ್ಡಿ ಸಮೀಪ ನಡೆದಿದೆ.
ರಸ್ತೆ ಅಪಘಾತದಲ್ಲಿ ಶಿವನಸಮುದ್ರಂನ (ಮಲ್ಲಿಕ್ಯಾತನಹಳ್ಳಿ) ಗ್ರಾಮದ ಮಹದೇವಪ್ಪ (55) ಸ್ಥಳದಲ್ಲೇ ಸಾವನ್ನಪ್ಪಿದರೆ, ಶಿವನಸಮುದ್ರಂನ ಗಗನಚುಕ್ಕಿ ಜಲಪಾತದ ಬಳಿ ಫೋಟೋಗ್ರಾಫರ್ ಆಗಿದ್ದ ಹರೀಶ (45) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.[ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿ ಕ್ರಾಸ್ ಪ್ರಯಾಣಿಕರ ಯಮಪಾಶ]
ಕೊಳ್ಳೇಗಾಲ ಕಡೆಯಿಂದ ಬರುತ್ತಿದ್ದ ಬೈಕ್ ಗೆ ತುಮಕೂರಿನಿಂದ ಯಳಂದೂರಿಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ಬೈಕ್ ಹಿಂಬದಿ ಕುಳಿತಿದ್ದ ಮಹದೇವಪ್ಪ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬೈಕ್ ಚಾಲನೆ ಮಾಡುತ್ತಿದ್ದ ಹರೀಶ್ ಅಚಾನಕ್ಕಾಗಿ ನಡೆದ ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದರು. ಹಾಗಾಗಿ ತಕ್ಷಣ ಹರೀಶ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರ ಪರಿಶ್ರಮ ಫಲಕಾರಿಯಾಗದೆ ಮೃತಪಟ್ಟರು.[ಪಾನಮತ್ತ ವೈದ್ಯನ ಉಪಟಳ, ಒಂದು ಸಾವು, ನಾಲ್ವರಿಗೆ ಗಾಯ]
ಅಪಘಾತದ ರಭಸಕ್ಕೆ ಬೈಕ್ ಮತ್ತು ಕಾರು ಸಂಪೂರ್ಣ ಜಖಂಗೊಂಡು ಸುಟ್ಟು ಭಸ್ಮವಾಗಿದೆ. ಈ ಘಟನೆಯಿಂದ ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಕೊಳ್ಳೇಗಾಲ-ಮಳವಳ್ಳಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.