ಕಂದಾಯ ಇಲಾಖೆ ನೌಕರರು ಕಪ್ಪು ಪಟ್ಟಿ ಧರಿಸಿದ್ದು ಯಾಕೆ?
ಗದಗ,ಮಾರ್ಚ್,04: ಕಂದಾಯ ಇಲಾಖೆಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಮತ್ತು ಇತರೆ ಇಲಾಖೆಯ ನೌಕರರನ್ನು ವಿಲೀನ ಮಾಡಿರುವುದನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಕಂದಾಯ ಇಲಾಖೆ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಕಂದಾಯ ಇಲಾಖೆ ಉಪ ತಹಶಿಲ್ದಾರ ಹುದ್ದೆಗೆ ಬೇರೆ ಇಲಾಖೆ ನೌಕರರನ್ನು ವಿಲೀನಗೊಳಿಸಿ ಪದೋನ್ನತಿ ನೀಡುತ್ತಿರುವುದರಿಂದ ಕಂದಾಯ ನೌಕರರಿಗೆ ಅನ್ಯಾಯವಾಗುತ್ತಿದೆ. ಸರಕಾರ ಕೂಡಲೇ ಆದೇಶವನ್ನು ರದ್ದು ಪಡಿಸಿ ಕಂದಾಯ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಕಂದಾಯ ಇಲಾಖೆ ನೌಕರರು ಒತ್ತಾಯಿಸಿದರು.[ರಾಜ್ಯದಲ್ಲಿ ಮೂರು ವೈದ್ಯಕೀಯ ಕಾಲೇಜು ಈ ವರ್ಷ ಆರಂಭ]
ಬೇರೆ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಕೆಲಸದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಕೂಡಲೇ ಕಂದಾಯ ಇಲಾಖೆ ನೌಕರರಿಗೆ ಪದೋನ್ನತಿ ನೀಡಬೇಕೆಂದು ಒತ್ತಾಯಿಸಿ ಕಂದಾಯ ಇಲಾಖೆ ನೌಕರರು ಗದಗ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಶಿರೆಸ್ತೆದಾರ ಎಂ.ಎಸ್.ಕುಲಕಣಿ, ಎಸ್.ಎಮ್.ಹಿರೇಮಠ, ವಿ.ಕೆ.ರೇವಣಕರ, ಎಚ್.ಎನ್.ಪೂಜಾರ, ಪಿ.ಸಿ.ಕಳಾಲ, ಹನಸಿ, ಸಿ.ಕೆ.ಬಿಳೂಟಗಿ, ಪವನ ಚಿಪ್ಪಲಕಟ್ಟಿ, ಎಸ್.ಪಿ.ಸಾವಳಗಿಮಠ, ಎಂ.ಎಸ್.ಫರ್ನಾಂಡೀಸ, ಗಾಯತ್ರಿ ಜೋಶಿ, ಜಿ.ಎಸ್.ನಾಡಗೌಡರ, ಸುಜಾತಾ ಗೊಬ್ಬರಗುಂಪಿ, ಮೀನಾಕ್ಷಿ ಹೊಸಮನಿ ಪಾಲ್ಗೊಂಡಿದ್ದರು.