ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ಮತ್ತೊಂದು ದೂರು
ಬೆಂಗಳೂರು, ಏಪ್ರಿಲ್ 29 : ಗಣಿ ಕಂಪನಿಗಳ ಪರವಾನಗಿ ನವೀಕರಣ ಮಾಡಿ 500 ಕೋಟಿ ರೂ. ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ದಾಖಲಾಗಿದೆ. ಭ್ರಷ್ಟಾಚಾರ ನಿಗ್ರಹದಳ (ಎಸಿಬಿ)ಕ್ಕೆ ಸಿದ್ದರಾಮಯ್ಯ ವಿರುದ್ಧ ಸಲ್ಲಿಕೆಯಾಗಿರುವ 5ನೇ ದೂರು ಇದಾಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ರಾಮಮೂರ್ತಿ ಗೌಡ ಅವರು ಎಸಿಬಿಗೆ ದೂರು ದಾಖಲು ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ಬಗ್ಗೆ ವಿಶೇಷ ತನಿಖಾ ತಂಡ ವರದಿ ನೀಡಿದೆ. ಆದರೂ ನಿಯಮ ಉಲ್ಲಂಘನೆ ಮಾಡಿ 2015ರಲ್ಲಿ ಕೆಲ ಕಂಪನಿಗಳಿಗೆ ಗಣಿ ಪರವಾನಗಿ ನವೀಕರಣ ಮಾಡಲಾಗಿದೆ ಎಂಬುದು ದೂರು. [ಅಕ್ರಮ ಡಿನೋಟಿಫಿಕೇಷನ್, ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು]
ವಿಶೇಷ ತನಿಖಾ ತಂಡ (ಎಸ್ಐಟಿ) ಒಂದು ಕಡೆ ಕಂಪನಿಗಳ ವಿರುದ್ಧ ತನಿಖೆ ನಡೆಸುತ್ತಿದೆ. ಆದರೆ, ಅದೇ ಕಂಪನಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರವಾನಗಿ ನವೀಕರಿಸಿಕೊಡುವ ಮೂಲಕ 500 ಕೋಟಿ ರೂ. ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. [ವಜ್ರ ಖಚಿತ ಉಬ್ಲೋ ವಾಚ್ ಬಗ್ಗೆ ಎಸಿಬಿಗೆ ಮೊದಲ ದೂರು]
ಸಿದ್ದರಾಮಯ್ಯ ಅವರು ನಿಯಮ ಉಲ್ಲಂಘನೆ ಮಾಡಿ ಗಣಿ ಕಂಪನಿಗಳಿಗೆ ಅನುಕೂಲವಾಗುವಂತೆ ಪರವಾನಗಿ ನವೀಕರಣಕ್ಕೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.[ಎಸಿಬಿ ರಚನೆ : ಸಿದ್ದರಾಮಯ್ಯ ಹೇಳುವುದೇನು?]
5ನೇ ದೂರು : ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾದ ಬಳಿಕ ಸಿದ್ದರಾಮಯ್ಯ ಅವರ ವಿರುದ್ಧ 5 ದೂರು ದಾಖಲಾಗಿದೆ. ಇದಕ್ಕೂ ಮೊದಲು ದುಬಾರಿ ವಾಚ್, ಪುತ್ರನಿಗೆ ಲ್ಯಾಬ್ ಟೆಂಡರ್, ಪುತ್ರನ ಸ್ನೇಹಿತನಿಗೆ ಜಮೀನು ಮಂಜೂರು, ರಾಚೇನಹಳ್ಳಿ ಡಿನೋಟಿಫಿಕೇಷನ್ ಸಂಬಂಧ 4 ದೂರುಗಳು ದಾಖಲಾಗಿವೆ.