ನಮ್ಮ ಧರ್ಮದಲ್ಲಿಯೇ ನಾವಿರೋಣ: ರಾಘವೇಶ್ವರ ಶ್ರೀ
ಬೆಂಗಳೂರು, ಆಗಸ್ಟ್ 29: ನಿಮ್ಮದು ಕನಿಷ್ಠ, ನಮ್ಮದು ಶ್ರೇಷ್ಠ ಎನ್ನುವುದು ಪರಕೀಯರು ಬಿತ್ತಿದ ಸಿದ್ಧಾಂತ. ಹಾಗಾಗಿ ಭಾರತೀಯರಿಗೆ ಬೇರೆಯವರ ವಸ್ತು, ಬೇರೆಯವರ ಮತ- ಧರ್ಮಗಳು ಇಷ್ಟವಾಗುತ್ತವೆ.
ಹಾಗಾಗಿ ಮತಾಂತರಗಳು ಇಂದು ನಡೆಯುತ್ತಿವೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.
ಪಕ್ಕದ ಮನೆ ಎಷ್ಟೇ ಸುಂದರವಾದರೂ ನಾವು ನಮ್ಮ ಮನೆಯಲ್ಲೆಯೇ ಉಳಿಯಬೇಕು. ಹಾಗೆಯೇ ಸೋಲಾಗಲಿ, ಸಾವಾಗಲಿ ಎಲ್ಲರೂ ತಮ್ಮ ತಮ್ಮ ಧರ್ಮದಲ್ಲಿಯೇ ಇರಬೇಕು ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮ ಇಂದ್ರಿಯಗಳು ಹೊರಮುಖವಾಗಿವೆ. ಹಾಗಾಗಿ ಅವು ಇನ್ನೊಂದೆಡೆ ಆಕರ್ಷಿತವಾಗುವಂತೆ ಮಾಡುತ್ತವೆ. ನಮ್ಮನ್ನು ಯಾವತ್ತೂ ನೋಡಿಕೊಳ್ಳುವುದೇ ಇಲ್ಲ. ನಮಗೆ ಇನ್ನೊಂದು ಮತದ ಹೊಳಪು ಕಾಣುತ್ತದೆ, ಕೊಳಕು ಕಾಣುವುದಿಲ್ಲ ಎಂದು ಶ್ರೀಗಳು ನುಡಿದಿದ್ದಾರೆ. (ಭಕ್ತರ ಸೇವೆ ಶ್ಲಾಘಿಸಿದ ರಾಘವೇಶ್ವರ ಶ್ರೀಗಳು)
ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರ ಚಾತುರ್ಮಾಸ್ಯದ ಇಪ್ಪತ್ತೊಂಬತ್ತನೇ ದಿನದ ಧರ್ಮ ಸಭೆಯಲ್ಲಿ ಆಶೀವರ್ಚನ ನೀಡುತ್ತಾ ಶ್ರೀಗಳು, ನಮ್ಮ ಮತದ ಕೊಳಕು ಕಾಣುತ್ತದೆ, ಹೊಳಪು ಕಾಣುವುದಿಲ್ಲ. ಇನ್ನೊಂದು ಮತವನ್ನು ಗೌರವಿಸೋಣ. ಆದರೆ ನಮ್ಮ ಧರ್ಮದಲ್ಲಿಯೇ ಇರೋಣ ಎಂದು ಶ್ರೀಗಳು ನುಡಿದರು.
ಈ ಸಂದರ್ಭದಲ್ಲಿ ಶ್ರೀ ಭಾರತೀ ಪ್ರಕಾಶನದಿಂದ ಪ್ರಕಟವಾದ 'ಗೋಕಥೆ-' ಪುಸ್ತಕದ ಲೋಕಾರ್ಪಣ ಸಮಾರಂಭ ನಡೆಯಿತು. ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭೂಮಿಕಾ ಭಟ್ ಇವರಿಗೆ ಛಾತ್ರ ಪುರಸ್ಕಾರ ನೀಡಲಾಯಿತು.
ಮುಳ್ಳೇರಿಯಾ ಮಂಡಲಾಂತರ್ಗತ ಪೆರ್ಡಾಲ, ಎಣ್ಮಕಜೆ, ಪಳ್ಳತ್ತಡ್ಕ, ಚಂದ್ರಗಿರಿ ವಲಯದವರಿಂದ ಸರ್ವಸೇವೆ ನಡೆಯಿತು. ಕೇರಳದ ಪ್ರಸಿದ್ಧ ತಂತ್ರಿಗಳಾದ ರವೀಶ ತಂತ್ರಿ, ಮಹಾಮಂಡಲದ ಅಧ್ಯಕ್ಷ ಡಾ. ವೈ ವಿ ಕೃಷ್ಣಮೂರ್ತಿ, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಛಾತ್ರ ಚಾತುರ್ಮಾಸ್ಯ ವಿವಿಧ ಸಮಿತಿಯ ಅಧ್ಯಕ್ಷ ಯು ಎಸ್ ಜಿ ಭಟ್, ಗಮಕಿ ತೆಕ್ಕಕೆರೆ ಸುಬ್ರಹ್ಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು. ರಮ್ಯಾ ಭಟ್, ಪೃಥ್ವಿ ಕಾರ್ಯಕ್ರಮ ನಿರೂಪಿಸಿದರು.