ನೇಮಕಾತಿ ಅಕ್ರಮ, ಮೈಸೂರು ವಿ.ವಿ. ರಿಜಿಸ್ಟ್ರಾರ್ ಅಮಾನತು
ಬೆಂಗಳೂರು, ಅಕ್ಟೋಬರ್ 19: ಗುತ್ತಿಗೆ ಆಧಾರದಲ್ಲಿ ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ವಿ.ವಿ ರಿಜಿಸ್ಟ್ರಾರ್ (ಆಡಳಿತ) ಡಾ.ಬಸವರಾಜು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ತೆರವಾದ ಹುದ್ದೆಗೆ ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ಉಸ್ತುವಾರಿ ವಹಿಸಲಾಗಿದೆ.
ಯುವರಾಜ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಿಸುವಾಗ ಸರಕಾರದಿಂದ ಅನುಮೋದನೆ ಪಡೆದಿಲ್ಲ. ಯುಜಿಸಿ ನಿಯಮಗಳನ್ನು ಪಾಲನೆ ಮಾಡಿಲ್ಲ. ಅ ಕಾರಣದಿಂದ ನೇಮಕಾತಿ ಪ್ರಕ್ರಿಯೆ ಕೂಡಲೇ ತಡೆಹಿದಿಯಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯಿಂದ ಸೂಚನೆ ನೀಡಲಾಗಿತ್ತು. ಆದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ನೇಮಕಾತಿ ನಡೆಸಿದ ಬಸವರಾಜು ಅವರನ್ನು ಅಮಾನತು ಮಾಡಲಾಗಿದೆ.[ಕೆಪಿಎಸ್ಸಿ ನೇಮಕಾತಿ ವಿವಾದ: 362 ಅಭ್ಯರ್ಥಿಗಳಿಗೆ ಶುಭ ಸುದ್ದಿ]
ಅನಧಿಕೃತ ನೇಮಕಾತಿ ಬಗ್ಗೆ ವಿವರಣೆ ನೋಡುವಂತೆ ಸೆಪ್ಟೆಂಬರ್ 24ರಂದು ಉನ್ನತ ಶಿಕ್ಷಣ ಇಲಾಖೆಯಿಂದ ಪತ್ರ ಬರೆದು, ಮೂರು ದಿನದೊಳಗೆ ಉತ್ತರ ನೀಡಲು ಸೂಚನೆ ನೀಡಲಾಗಿತ್ತು. ಆದರೆ ಯಾವುದೇ ಉತ್ತರ ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ. ಯುಜಿಸಿ ಹಾಗೂ ಸರ್ಕಾರದ ನಿಯಮಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಂಡು ಗರಿಷ್ಠ 16 ಗಂಟೆಗಳ ಕಾರ್ಯಭಾರಕ್ಕೆ ₹25 ಸಾವಿರ ಗೌರವ ಧನ ನೀಡಲು ಅವಕಾಶ ಇದೆ.[ಏರ್ ಇಂಡಿಯಾದಲ್ಲಿ ಮ್ಯಾನೇಜರ್ ಹುದ್ದೆಗಳಿವೆ ಅರ್ಜಿ ಹಾಕಿ]
ಆದರೆ, ಯುವರಾಜ ಕಾಲೇಜಿನಲ್ಲಿ ಗುತ್ತಿಗೆ ಆಧಾರದ ಸಹಾಯಕ ಪ್ರಾಧ್ಯಾಪಕರಿಗೆ ₹45ರಿಂದ ₹50 ಸಾವಿರ ವೇತನ ನೀಡಲಾಗಿದೆ. 48 ಹುದ್ದೆಗಳಿಗೆ ವಿಷಯವಾರು ಮೀಸಲಾತಿ ಪಾಲನೆ ಮಾಡಲಾಗುತ್ತಿದೆಯೇ? ಗುತ್ತಿಗೆ ಆಧಾರದಲ್ಲಿ ಸಹಾಯಕ ಪ್ರಾಧ್ಯಾಪಕರನ್ನು 5 ವರ್ಷಗಳ ಅವಧಿಗೆ ಎಂದು ನೇಮಿಸಿಕೊಳ್ಳಲು ಅವಕಾಶ ಇದೆಯೇ? ಎಂದು ಉನ್ನತ ಶಿಕ್ಷಣ ಇಲಾಖೆ ಕೇಳಿತ್ತು.